Kundapra.com ಕುಂದಾಪ್ರ ಡಾಟ್ ಕಾಂ

ಮುಂಬಯಿ: ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ ಸಮಾಪನ

ದೃಶ್ಯ ಕಾವ್ಯ ತಂಡ ಪ್ರಥಮ – ಭಾಷ್ ಲಲಿತಾಕಲಾ ಸಂಘ ತಂಡ ದ್ವಿತೀಯ

ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಆಯೋಜಿಸಿದ್ದ 20ನೇ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯು ತೆರೆ ಕಂಡಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿ ‘ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೆ’ ನಾಟಕ ಪ್ರದರ್ಶಿಸಿದ ದೃಶ್ಯ ಕಾವ್ಯ ತಂಡ ಬೆಂಗಳೂರು ಪ್ರಥಮ ಸ್ಥಾನ ಗಳಿಸಿತು. ‘ಪದ್ಮಪಾಣಿ’ ನಾಟಕ ಪ್ರದರ್ಶಿಸಿದ ಭಾಷ್ ಲಲಿತಾಕಲಾ ಸಂಘ ಬೆಂಗಳೂರು (ಸಮನ್ವಯ) ತಂಡವು ದ್ವಿತೀಯ ಸ್ಥಾನ ಮತ್ತು ‘ಅರಗಿನ ಬೆಟ್ಟ’ ನಾಟಕ ಪ್ರದರ್ಶಿಸಿದ ಭೂಮಿಕಾ ಹಾರಾಡಿ (ಉಡುಪಿ) ತಂಡವು ತೃತಿಯ ಬಹುಮಾನ ತನ್ನದಾಗಿಸಿತು.

ಕಳೆದ ಮಾಟುಂಗ ಪಶ್ಚಿಮದಲ್ಲಿನ ಸಂಘದ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಚಂದನವಾಹಿನಿ ಕಾರ್ಯಕ್ರಮ ನಿರ್ಮಾಪಕ, ನಾಡಿನ ಪ್ರಸಿದ್ಧ ಕವಿ ಶ್ರೀಸುಬ್ಬು ಹೊಲೆಯಾರ್ ಅಧ್ಯಕ್ಷತೆಯಲ್ಲಿ ನಾಟಕೋತ್ಸವ ಸ್ಪರ್ಧಾ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹೆಸರಾಂತ ರಂಗ ನಿರ್ದೇಶಕ ವಸಂತ ಬನ್ನಾಡಿ ಮತ್ತು ಸಂಘದ ಗೌರವ ಕೋಶಾಧಿಕಾರಿ ಬಿ.ಜಿ ನಾಯಕ್ ವಿಜೇತ ತಂಡಗಳಿಗೆ ಬಹುಮಾನ ಪ್ರದಾನಿಸಿ ಶುಭಕೋರಿದರು.

ಪ್ರಬಲ ಇಚ್ಛಾಶಕ್ತಿಯಿಂದ ಇಂತಹ ಸ್ಪರ್ಧೆಗಳ ಆಯೋಜನೆ ಸಾಧ್ಯ. ಕನ್ನಡಕ್ಕೆ ಅವಕಾಶ ಸೃಷ್ಟಿಸಿದ ಹಿರಿಮೆ ಈ ಕರ್ನಾಟಕ ಸಂಘಕ್ಕಿದೆ. ನಾಟಕ ವಿಕ್ಷಣೆಯಿಂದ ಧನಾತ್ಮಕ ಚಿಂತನೆ ಮೈಗೂಡಿಸ ಬಹುದು ಮತ್ತು ಸಾಹಿತ್ಯ ನಾಟಕದ ಶ್ರೇಷ್ಠತೆ ಕಟ್ಟುವಲ್ಲಿ ಇಂತಹ ಸ್ಪರ್ಧೆಗಳು ಪೂರಕವಾಗಿದೆ. ನಾಟಕ ಅಂದರೆ ಏಕಕಾಲದ ಪ್ರತಿಭಾ ಪ್ರದರ್ಶನದೊಂದಿಗೆ ಕಲಾಭಿಮಾನಿಗಳ ವಿಶ್ವಾರ್ಹತೆಗೆ ಪಾತ್ರವಾಗುವುದು. ಅರ್ಥವಂತಿಕೆ, ಸಾಮಾಜಿಕ ಸ್ವಸ್ಥ ವಿಸ್ತರಿಸುವ ಶಕ್ತಿ ನಾಟಕದ್ದಾಗಿದೆ ಎಂದು ವಸಂತ ಬನ್ನಾಡಿ ತಿಳಿಸಿದರು.

ಕರ್ನಾಟಕ ಸಂಘದ ಸುಮಾರು ಎಂಟುವರೆ ದಶಕಗಳ ರಂಗಯಾತ್ರೆ ಶ್ಲಾಘನೀಯ. ಕರ್ನಾಟಕ ಸಂಘ ಕನ್ನಡದ ಹಣತೆಯಾಗಿದೆ. ಚಲನಶೀಲತೆಯ ಚಂದವೇ ನಾಟಕವಾಗಿದ್ದು, ರಂಗಭೂಮಿಗೆ ಬದಲಾವಣೆ ತರುವ ಅದ್ಭುತ ಶಕ್ತಿ ನಾಟಕಕ್ಕಿದೆ. ಕರಳು ಬೆಳ್ಳಿಯ ಸಂಬಂಧವಿರುವ ನಾಟಕ ಕಲೆ ಮನುಷ್ಯನನ್ನು ಕಟ್ಟುವ ಶಕ್ತಿ ಹೊಂದಿದೆ. ಯಶಸ್ವೀ ಸೃಜನಾಶೀಲ ರಂಗಭೂಮಿಯಿಂದ ಸಾಮರಸ್ಯದ ಬದುಕು ಹಸನಾಗುವುದು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಶ್ರೀಸುಬ್ಬು ಹೊಲೆಯಾರ್ ನುಡಿದರು.

ತೀರ್ಪುಗಾರ ಸಾಸ್ವೇಹಳ್ಳಿ ತಮ್ಮ ಅನುಭವಗಳನ್ನು ಹಂಚುತ್ತಾ ವಿಭಿನ್ನ ಅನುಭವಗಳನ್ನು ಪಡಕೊಳ್ಳಲು ರಂಗಭೂಮಿ ಅನುಕೂಲವಾಗಿದೆ. ಹವ್ಯಾಸಿ ರಂಗತಂಡಗಳು ಸ್ಪರ್ಧೆಗೆ ಹೋಗಬೇಕೇ ಎನ್ನುವ ಪ್ರಶ್ನೆ ರಂಗಭೂಮಿಯನ್ನು ಕಾಡುತ್ತಿದ್ದು ಹೋಗಬೇಕು ಎನ್ನುವುದು ನನ್ನ ಅಭಿಮತ. ಕಾರಣ ಈ ಮೂಲಕ ರಂಗಶಿಸ್ತು ಅರಿವಿಲ್ಲದವರಿಗೆ ರಂಗಶಿಸ್ತು ಪ್ರಜ್ಞೆ ಬರುತ್ತದೆ. ರಂಗ ಭೂಮಿಯ ಸೂಕ್ಷತೆ ಅರಿತುಕೊಳ್ಳಲು ಸ್ಪರ್ಧೆಗಳು ಅನುಕೂಲಕರ. ಸ್ಪರ್ಧೆ ರಂಗಭೂಮಿಯ ಸಾಧ್ಯತೆ ನಿರ್ಧಾರಿಸುವ ಮಾನ ದಂಡವಲ್ಲ. ರಂಗ ಭೂಮಿಗೆ ಸಾಮಾಜಿಕ ಜವಾಬ್ದಾರಿಯಿದೆ ಎಂದರು.

ನಿರ್ಣಾಯಕ ಕುಲಕರ್ಣಿ ಮಾತನಾಡಿ ರಂಗ ಕರ್ಮಿಗಳು ರೈತ ಇದ್ದಾಗೆ. ಹೇಗೆ ರೈತನೋರ್ವ ಫಸಲು ಬೆಳೆದು ಬರುಲು ಪಡುವ ಶ್ರಮದಂತೆ ನಾಟಕವೂ ಅದೇ ರೀತಿಯಾಗಿದೆ. ನಾಟಕ ರಂಗವೇ ಅದ್ಭುತ ವೇದಿಕೆ. ಬಹುತೇಕ ಪ್ರದರ್ಶನಗಳ ಮಧ್ಯೆ ರಿಂಗಾಯಿಸುವ ಮೊಬಾಯ್ಲ್ ಮ್ಯೂಸಿಕ್ ಉಚಿತವಲ್ಲ ಎನ್ನುತ್ತಾ ಸಭಿಕ ಮೊಬಾಯ್ಲ್ ಕಿರಿಕಿರಿದಾರರಿಗೆ ಕಿವಿ ಮಾತುಗಳನ್ನಾಡಿದರು. ಪುರಸ್ಕಾರಗಳು ಯಾವೋತ್ತೂ ಅಂತಿಮವಲ್ಲ ಇದು ಕಲಾಕಾರನ ಪ್ರೋತ್ಸಹ ಮಾತ್ರ. ಈ ಬಾರಿಯ ನಾಟಕೋತ್ಸವದ ೧೩ ನಾಟಕಗಳಲ್ಲಿ ಹೊಸ ನಾಟಕಗಳಿಲ್ಲದಿರುವುದೇ ಬೇಸರ ತಂದಿದೆ ಆದರೆ ಕೆಲವೊಂದು ನಾಟಕಗಳಲ್ಲಿ ಹೊಸತನ ಕಂಡಿರುವುದು ಅಭಿನಂದನೀಯ ಎಂದರು. ತೀರ್ಪುಗಾರಿಕೆ ಎನ್ನುವುದು ದೊಡ್ಡ ಜವಾಬ್ದಾರಿ ಕೆಲಸ. ನಾಟಕ ಸ್ಪರ್ಧೆಯು ಇತರೇ ಸ್ಪರ್ಧೆಕ್ಕಿಂತ ಭಿನ್ನವಾಗಿದ್ದು, ಸ್ಪರ್ಧೆಗಳಿಂದ ಅನುಭವ, ಹೊಸ ವಿಚಾರಗಳನ್ನು ಕಲಿಯಬಹುದು ಎಂದು ಅರುಣ ಮೂರ್ತಿ ಅಭಿಪ್ರಾಯ ಪಟ್ಟರು.

ಮೂರು ದಿನಗಳಿಂದ ನಡೆಸಲಾದ ನಾಟಕೋತ್ಸವ ಸ್ಪರ್ಧೆಯಲ್ಲಿ ಈ ಬಾರಿ ಸುಮಾರು ೧೨ ತಂಡಗಳು ಭಾಗವಹಿಸಿದ್ದು, ಇಂದಿಲ್ಲಿ ಸುರೇಂದ್ರ ವರ್ಮ ಮೂಲ ರಚಿತ ಸಿದ್ಧಲಿಂಗ ಪಟ್ಟಣ ಶೆಟ್ಟಿ ಅವರಿಂದ ಕನ್ನಡ ಅನುವಾದಿತ ಸಿ.ನಂಜುಂಡೇ ಗೌಡ ನಿರ್ದೇಶಿತ ದೃಶ್ಯ ಕಾವ್ಯ ತಂಡವು ‘ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೆ’ ನಾಟಕ, ಶಿರ್ಸಿ ಕಲಾ ತಂಡವು ಕೆ.ಆರ್ ಪ್ರಕಾಶ್ ರಚಿಸಿ ನಿರ್ದೇಶಿಸಿದ ‘ನಾವಿದ್ದೇವೆ’ ನಾಟಕ, ಭೂಮಿಗೀತಾ ಪಟ್ಲ ಉಡುಪಿ ತಂಡವು ಪಿ.ಲಂಕೇಶ್ ರಚಿಸಿ ಸಂತೋಷ ನಾಯಕ ಪಟ್ಲ ನಿರ್ದೇಶಿತ ‘ಗುಣಮುಖ’ ನಾಟಕ, ನವಸುಮ ಉಡುಪಿ ತಂಡವು ಕುವೆಂಪು ರಚಿಸಿ ಬಾಲಕೃಷ್ಣ ಕೊಡವೂರು ನಿರ್ದೇಶಿತ ‘ಶೂದ್ರ ತಪಸ್ವಿ’ ನಾಟಕ, ಭೂಮಿಕಾ ಹಾರಾಡಿ ತಂಡವು ಹೂಲಿ ಶೇಖರ್ ರಚಿಸಿ, ಬಿ.ಎಸ್ ರಾಮಶೆಟ್ಟಿ ಹಾರಾಡಿ ನಿರ್ದೇಶಿತ ‘ಅರಗಿನ ಬೆಟ್ಟ’ ನಾಟಕ ಮತ್ತು ಸುಮನಸಾ ಕೊಡವೂರು ತಂಡವು ಭಾಸ್ಕರ ಭಟ್ ರಚಿಸಿ ಜಯರಾಮ ನೀಲಾವರ ನಿರ್ದೇಶಿತ ‘ದಾಸ್ಯದ ಸಂಕೋಲೆ’ ನಾಟಕ ಹಾಗೂ ನಮತುಳುವೆರ್ ಕಲಾ ಸಂಘಟನೆ ಮುದ್ರಾಡಿ ತಂಡವು ವ್ಯಾಸ ದೇಶಪಾಂಡೆ ರಚಿಸಿ ಸುಕುಮಾರ್ ಮೋಹನ್ ನಿರ್ದೇಶಿತ ‘ಮಡೋದರಿ ರಾವಣಾಯಣ’ ನಾಟಕಗಳನ್ನು ಪ್ರದರ್ಶಿಸಿದವು.

ಸ್ಪರ್ಧೆಯ ತೀರ್ಪುಗಾರರಾಗಿದ್ದು ಸಹಯೋಗವಿತ್ತ ಡಾ| ಸಾಸ್ವೇಹಳ್ಳಿ ಸತೀಶ್, ಧನಂಜಯ ಕುಲಕರ್ಣಿ, ಅರುಣ ಮೂರ್ತಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಸಲಹೆ-ಸೂಚನೆಗಳನ್ನಿತ್ತು ರಂಗಭೂಮಿಯ ಯಶಸ್ಸಿಗೆ ಶುಭಾರೈಸಿದರು. ಅತಿಥಿಗಳು ನಾಟಕೋತ್ಸವಕ್ಕೆ ಶ್ರಮಿಸಿದ ಸುಂದರ ಕೋಟ್ಯಾನ್, ಅವಿನಾಶ್ ಕಾಮತ್, ಸುರೇಂದ್ರ ಮಾರ್ನಾಡ್, ಹರೀಶ್ ಹೆಬ್ಬಾರ್, ಕೆ.ವಿ.ಆರ್ ಐತಾಳ್ ಮತ್ತು ಕವಿತಾ ಸಾಸ್ವೇಹಳ್ಳಿ ಹಾಗೂ ಕು| ಸುಪ್ರೀಯಾ ಹಡಪದ ಅವರನ್ನು ಗೌರವಿಸಿ ಬಹುಮಾನ ಪ್ರೋತ್ಸಹಕರುಗಳಾದ ಕಮಲಾಕ್ಷ ಸರಾಫ್, ಮೋಹನ್ ಮಾರ್ನಾಡ್ ಮತ್ತಿತರರನ್ನು ಸ್ಮರಿಸಿದರು.

ಸಂಘದ ಗೌ| ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ೮೩ರ ಕರ್ನಾಟಕ ಸಂಘವು ಅಭೂತಪೂರ್ವ ಮತ್ತು ಅಚ್ಚುಕಟ್ಟಾಗಿ ನಿರ್ವಾಹಣೆಯೊಂದಿಗೆ ನಾಟಕೋತ್ಸವದ ೨೦ ವರ್ಷದ ದೂರದ ಪ್ರಯಣ ಪೂರೈಸಿದೆ. ಸುಮಾರು 300 ತಂಡಗಳು, 6,000ಕ್ಕೂ ಮಿಕ್ಕಿದ ಕಲಾವಿದರು ಪಾಲ್ಗೊಂಡ್ಡ ಈ ಉತ್ಸವ ಯಶಕಂಡು ಶ್ರಮ ಸಾರ್ಥಕ ಎನ್ನುವಂತಿದೆ ಎಂದರು.

ಪ್ರಸಿದ್ಧ ಸಂಗೀತಕಾರ ರಾಮಚಂದ್ರ ಹಡಪದ ಮತ್ತು ತಂಡವು ರಂಗಗೀತೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿತು. ಸುರೇಂದ್ರ ಮಾರ್ನಾಡ್ ಹಾಗೂ ಕೆ.ವಿ.ಆರ್ ಐತಾಳ್ ಅತಿಥಿಗಳನ್ನು ಹಾಗೂ ಅನಿತಾ ಪೂಜಾರಿ ತಾಕೋಡೆ ತೀರ್ಪುಗಾರರನ್ನು ಪರಿಚಯಿಸಿದರು. ಮಾಜಿ ಉಪಾಧ್ಯಕ್ಷ ಮತ್ತು ರಂಗತಜ್ಞ ಡಾ| ಭರತ್‌ಕುಮಾರ್ ಪೊಲಿಪು ಕಾರ್ಯಕ್ರಮ ನಿರೂಪಿಸಿ ನಾಟಕೋತ್ಸವದ ಫಲಿತಾಂಶ ಪ್ರಕಟಿಸಿದರು. ಗೌರವ ಕೋಶಾಧಿಕಾರಿ ಎಂ.ಡಿ ರಾವ್ ವಂದಿಸಿದರು.

ಚಿತ್ರ ವರದಿ: ರೋನ್ಸ್ ಬಂಟ್ವಾಳ್

Exit mobile version