Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಚಿರತೆಗಾಗಿ ಕಾದು ಕುಳಿತವರು ಕೊನೆಗೂ ಕಂಡದ್ದೇನು ಗೊತ್ತೆ?

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಅಲ್ಲಿ ನೂರಾರು ಜನ ಸೇರಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳೂ ಸಹ ಬಿಡದೇ ಹುಡುಕಾಡುತ್ತಿದ್ದರು. ಕೆಲವರು ನೋಡಿದ್ದೇನೆ ಎನ್ನುತ್ತಾರೆ. ಕೆಲವರು ಇದೇ ಹೆಜ್ಜೆಗುರುತು ನೋಡಿ ಅನ್ನುತ್ತಿದ್ದಾರೆ. ಕಂಡದ್ದು ಚಿರತೆಯೋ ಇನ್ನೇನೊ ತಿಳಿಯದು. ಆದರೆ ಹುಡುಕಾಟ ನಡೆಸುತ್ತಿದ್ದಾರೆ. ಬೈಂದೂರು ಶಾಸಕರ ಕಛೇರಿಯ ಸುತ್ತಮುತ್ತ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಹೀಗೆ ಒಂದಿಷ್ಟು ಹೊತ್ತು ಎಲ್ಲರನ್ನೂ ಆತಂಕಕ್ಕೆ ನೂಕಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ

ಈ ಪರಿಸರದ ಸುತ್ತಲೂ ಸರ್ಕಾರಿ ಕಚೇರಿ, ಶಾಲೆ, ಹಾಸ್ಟೆಲ್ ಇದ್ದುದರಿಂದ ಶಾಲಾ ಮಕ್ಕಳೂ, ಸಾರ್ವಜನಿಕರೂ ಓಡಾಡುತ್ತಾರೆ. ಇನ್ನು ಅಡಗಿ ಕುಳಿತ ಚಿರತೆ ಹೊರಬರುತ್ತದೆಂದು ಕಾಯೋದು ಬೇಡವೆಂದ ಕೆಲವರು ಒಂದು ಪಟಾಕಿ ಸಿಡಿಸಿಯೇ ಬಿಟ್ಟರು. ತಕ್ಷಣ ಪೊದೆಯಿಂದ ಹೊರಬಂದ ಒಂದು ಕಾಡು ಬೆಕ್ಕು ಓಟ ಶುರುವಿಟ್ಟುಕೊಂಡಿತು. ಕ್ಷಣಾರ್ಧದಲ್ಲಿ ರಸ್ತೆ ದಾಟಿ ಮಾಯವಾಯಿತು. ಚಿರತೆ ಎಂದು ಉಸಿರು ಬಿಗಿಹಿಡಿದು ಕುತೂಹಲದಿಂದ ಕಾದು ಕುಳಿತವರು ಬೆಕ್ಕನ್ನು ನೋಡಿ ಬಿದ್ದು ಬಿದ್ದು ನಗಲಾರಂಬಿಸಿದರು. ಸಶಸ್ತ್ರರಾಗಿ ಬಂದಿದ್ದ ಅರಣ್ಯ ಇಲಾಖೆಯವರಿಗೆ ನಿಶ್ಚಿಂತೆಯಿಂದ ಹಿಂದಿರುಗಿದರು. ಒಂದು ಗಂಟೆಯೊಳಗಿನ ಈ ಕಾರ್ಯಾಚರಣೆ ನಗರದ ತುಂಬೆಲ್ಲಾ ಗುಲ್ಲೆಬ್ಬಿಸಿತ್ತು.

Exit mobile version