Kundapra.com ಕುಂದಾಪ್ರ ಡಾಟ್ ಕಾಂ

ನಮ್ಮ ಕುಂದಾಪ್ರ ಫೇಸ್‌ಬುಕ್‌ ಗೆಳೆಯರ ಸಹಮಿಲನದಲ್ಲಿ ನಡೆಯಿತು ಭಾಷೆ, ಪರಿಸರ, ಸಾಮಾಜಿಕ ಕಳಕಳಿಯ ಚಿಂತನ

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಕುಂದಾಪುರ: ಫೇಸ್‌ಬುಕ್‌ನಲ್ಲಿ ಪೋಸ್ಟ್ ಲೈಕ್, ಕಾಮೆಂಟ್ ಹಾಕುತ್ತಾ ತಮ್ಮೂರಿನ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದ ಮಂದಿಯೆಲ್ಲ ಒಂದೆಡೆ ಸೇರಿದ್ದರು. ಆನ್‌ಲೈನ್‌ನಲ್ಲೇ ಹರಟುತ್ತಿದ್ದವರು ಮುಖತಃ ಭೇಟಿಯಾಗಿ ಶುಭಾಷಯ ವಿನಿಮಯ ಮಾಡಿಕೊಂಡ್ರು. ಒಂದಿಷ್ಟು ಗಂಭೀರ ಚಿಂತನೆಗಳು ನಡೆದವು. ಕೆಲವು ಅಲ್ಲಿಯೇ ಕಾರ್ಯರೂಪಕ್ಕೂ ಬಂತು. ಹುಟ್ಟೂರಿನ ನೆನಪುಗಳು ಮೆಲಕಾದವು. ಸಾಧಕರಿಗೆ ಅಭಿನಂದನೆಯೂ ನಡೆಯಿತು. ಇದರ ನಡುವೆಯೇ ಒಂದಿಷ್ಟು ನಗು, ಮನೋಲ್ಲಾಸದ ಆಟ, ಹೊಟ್ಟೆಯೊಂದಿಗೆ ಮನವೂ ತುಂಬಿ ಬಂದ ಊಟ!

ಅಂದಹಾಗೆ ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದದ್ದು ‘ನಮ್ಮ ಕುಂದಾಪ್ರ’ ಫೇಸ್ಬುಕ್ ಗ್ರೂಪಿನ ಗೆಳೆಯರ ಸಹಮಿಲನ ಕಾರ್ಯಕ್ರಮ. ಕುಂದಾಪುರ ಶರೋನ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನಮ್ಮ ಕುಂದಾಪ್ರ ಗ್ರೂಪಿನ ಗೆಳೆಯರೆಲ್ಲ ಸೇರಿ ಒಂದಿಷ್ಟು ಹೊತ್ತು ಸಂತಸ ಹಂಚಿಕೊಂಡರು. ಹಿರಿಯ ಸಾಹಿತಿ, ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಕುಂದಾಪುರಿಗರು ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿರುವ ಸಹಮಿಲನದ ಆಯೋಜಕರ ಪರಿಶ್ರಮ ಶ್ಲಾಘನೀಯ. ನಮ್ಮ ಕುಂದಾಪ್ರ ಕನ್ನಡಕ್ಕೆ ತನ್ನದೇ ಆದ ವಿಶೇಷತೆ ಇದೆ. ಕ್ಷೀಪ್ರವಾಗಿ ಮಾತನಾಡಬಹುದಾದ ಭಾಷೆಯೊಂದಿದ್ದರೇ ಅದು ಕುಂದಾಪ್ರ ಕನ್ನಡ ಮಾತ್ರ. ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಕುಂದಾಪ್ರ ಕನ್ನಡದ ಬಳಕೆ, ಓದು, ಬರವಣಿಗೆಯನ್ನು ಹೆಚ್ಚು ಹೆಚ್ಚು ಮಾಡುವುದರಿಂದ ಮಾತ್ರ ಅದು ಸಾಧ್ಯವಿದೆ ಎಂದ ಅವರು ತಮ್ಮ ಎಂದಿನ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು. ಕುಂದಾಪ್ರ ಡಾಟ್ ಕಾಂ ವರದಿ.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಅಂತಾರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ, ಹಾಸ್ಯ ಲೇಖಕ ಕೋಡಿ ರಮಾನಂದ ಕಾರಂತ್, ಗಂಗೊಳ್ಳಿ ಟೌನ್ ಸಹಕಾರಿಯ ಸಲಹಾಗಾರ ಪುಂಡಲೀಕ ನಾಯಕ್, ಮೆಸ್ಕಾಂ ನಿವೃತ್ತ ಇಂಜಿನಿಯರ್ ಪ್ರಕಾಶ್ಚಂದ್ರ, ಸಮಾಜ ಸೇವಕ ಮಧುಕರ ರಾವ್, ನಮ್ಮ ಕುಂದಾಪ್ರ ಗ್ರೂಪಿನ ಅಡ್ಮಿನ್ ಕಮಲೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮನು ಅಂಚನ್ ಕೋಡಿ, ಸಂತೋಷ್ ಖಾರ್ವಿ, ರಾಜೇಶ್ ಖಾರ್ವಿ, ಕಾರ್ತಿಕ್ ಪ್ರಸಾದ್, ಇಬ್ರಾಹಿಂ ಗಂಗೊಳ್ಳಿ, ಜಾಯ್ ಜೆ. ಕರ್ವೆಲ್ಲೊ, ಸುಕೇಶ್ ಕೋಟೇಶ್ವರ ಕಾರ್ಯಕ್ರಮ ಸಂಘಟನೆಗೆ ನೆರವಾಗಿದ್ದರು. ನರೇಶ್ ಕೋಟೇಶ್ವರ ಕಾರ್ಯಕ್ರಮ ನಿರೂಪಿಸಿದರು. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಹಸಿರು, ಸ್ವಚ್ಚತೆಯ ಪ್ರತಿಜ್ಞೆ:
ನಮ್ಮ ಕುಂದಾಪ್ರ ಗ್ರೂಪಿನ ನಿರ್ವಾಹಕ ಕಮಲೇಶ ಅವರ ಹಸಿರು ಕ್ರಾಂತಿಯ ಯೋಜನೆ ಕಾರ್ಯಕ್ರಮಕ್ಕೆ ಮೆರಗು ತಂದುತೊಟ್ಟಿತ್ತು. ಗ್ರೂಪಿನ ಪ್ರತಿ ಸದಸ್ಯರ ಮನೆಯಲ್ಲಿ ಬಿಡುವಾದಾಗ ಒಂದಾದರೂ ಗಿಡವನ್ನು ನೆಡುವೆ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲಾಯಿತು. ಕಂಪ್ಯೂಟರೀಕರಣ ಬಿಡುವಿರದ ಬದುಕಿನ ಕಾಲಘಟ್ಟದಲ್ಲಿ ಹಸಿರಿದ್ದರೇ ಮಾತ್ರ ಉಸಿರೆಂಬ ಸಂದೇಶವನ್ನು ಸಾರುವ ಯೋಜನೆಗೆ ಸದಸ್ಯರೂ ಸಹಮತ ಸೂಚಿಸಿದರು. ಇದರೊಂದಿಗೆ ಪ್ರಧಾನಮಂತ್ರಿಯವರ ಸ್ವಚ್ಛಭಾರತ್ ಯೋಜನೆಯಂತೆ ಕುಂದಾಪುರದಲ್ಲಿ ಸ್ವಚ್ಚ ಭಾರತ್ ಕಾರ್ಯಕ್ರಮವನ್ನು ಆಯೋಜಿಸುವ ನಿರ್ಣವನ್ನು ಕೈಗೊಂಡಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಯಿತು.

ಸಾರ್ಥಕ್ಯ ಪಡೆದ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ, ಯಕ್ಷ ಕಲಾವಿದರಿಗೆ ಸಹಾಯಹಸ್ತ.
ಸಹಮಿಲನ ಕಾರ್ಯಕ್ರಮವು ಕುಂದಾಪುರ ಇಬ್ಬರು ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನಿಸುವ ಮೂಲಕ ಸಾರ್ಥಕ್ಯ ಪಡೆಯುವಂತಾಯಿತು. ಈ ಭಾರಿ ಎಸ್‌ಎಸ್‌ಎಲ್‌ಸಿ ಆಂಗ್ಲಮಾಧ್ಯಮದಲ್ಲಿ ೬೨೨ ಅಂಕ ಪಡೆದು ಜಿಲ್ಲೆಗೆ ಪ್ರಥಮಿಗರಾದ ಗುಜ್ಜಾಡಿಯ ಚೈತ್ರಾ ಶಾನುಭೋಗ್ ಹಾಗೂ ಬಸ್ರೂರಿನ ವೆಂಕಟೇಶ್ ಪುರಾಣಿಕ್ ಅವರಿಗೆ ನಮ್ಮ ಕುಂದಾಪ್ರ ಗ್ರೂಪಿನ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ನರಳುತ್ತಿರುವ ಯಕ್ಷಕಲಾವಿದರೋರ್ವರಿಗೆ ಆರ್ಥಿಕ ನೆರವು ನೀಡಲು ಹಾಜರಿದ್ದ ಸದಸ್ಯರುಗಳು ನಿರ್ಧರಿಸಿದರು. ಕುಂದಾಪ್ರ ಡಾಟ್ ಕಾಂ ವರದಿ.

ಕಮಲೇಶರ ನಮ್ಮ ಕುಂದಾಪ್ರ – ಅಭಿಮಾನದ ಆಗರ
ಊರು ಬಿಟ್ಟು ಊರಿಗೆ ಬಂದವರು, ಕುಂದಾಪುರವನ್ನು ಅಪರೂಪಕ್ಕೆ ಕಾಣುವವರು. ಹೀಗೆ ಕುಂದಾಪುರದ ಸಂಸ್ಕೃತಿ, ಕಲೆ, ಆಚಾರ ವಿಚಾರ, ವಿಶೇಷತೆ, ವೈವಿಧ್ಯವನ್ನು ಕುಂದಾಪುರಿಗರೊಂದಿಗೆ ಸದಾ ಹಂಚಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕಮಲೇಶ್ ಅವರು ಐದು ವರ್ಷದ ಹಿಂದೆ ಆರಂಭಿಸಿದ ಗುಂಪು ’ನಮ್ಮ ಕುಂದಾಪ್ರ.’ ಇಂದು ನಲವತ್ತು ಸಾವಿರಕ್ಕೂ ಅಧಿಕ ಸದಸ್ಯ ಬಲ ಹೊಂದಿದೆ. ಕಮಲೇಶ್ ಗುಂಪಿನ ಚಟುವಟಿಕೆಗಳಿಗೆ ಒತ್ತಾಸೆಯಾಗಿ ನಿಂತಿದ್ದರೇ ಕೆಲವೊಂದಿಷ್ಟು ಮಂದಿ ಸದಸ್ಯರು ಸಹಕರಿಸುತ್ತಿದ್ದಾರೆ. ಕೇವಲ ತಮ್ಮ ಚಟುವಟಿಕೆಗಳನ್ನು ಆನ್‌ಲೈನ್‌ಗೆ ಮಾತ್ರ ಸೀಮಿತಗೊಳಿಸದೇ ಸಹಮಿಲನದಂತಹ ಕಾರ್ಯಕ್ರಮವನ್ನು ಆಯೋಜಿಸಿಯೂ ಸೈ ಎನಿಸಿಕೊಂಡಿದೆ. ನಾಲ್ಕು ವರ್ಷದ ಹಿಂದೆಯೂ ಗುಂಪಿನ ಸದಸ್ಯರೆಲ್ಲ ಸೇರಿ ವಿಚಾರ ವಿನಿಮಯ ಮಾಡಿಕೊಂಡಿದ್ದರು.

ಫೇಸ್‌ಬುಕ್‌ ಗೆಳೆಯರು ಭ್ರಮಾ ಜಗತ್ತನ್ನು ಮೀರಿ, ವಾಸ್ತವಲೋಕಕ್ಕಿಳಿದು ಒಂದಿಷ್ಟು ಹೊತ್ತು ಒಟ್ಟಾಗಿ ಕಾಲ ಕಳೆಯುವುದಲ್ಲದೇ, ಸದಸ್ಯರಲ್ಲೂ ಸಾಮಾಜಿಕ ಚಿಂತನೆಯನ್ನು ಬಿತ್ತುವ, ಸಮಾಜದಲ್ಲಿ ಸಾಧಕರನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನಾರ್ಹ. /ಕುಂದಾಪ್ರ ಡಾಟ್ ಕಾಂ ವರದಿ./

Exit mobile version