Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಬಹುಮಹಡಿ ಕಟ್ಟಡವನ್ನೇರಿದ ಜ್ಯೋತಿರಾಜನ ಸಾಹಸಕ್ಕೆ ಬೆರಗಾದ ಜನ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಅವರು ನೋಡನೋಡುತ್ತಿದ್ದಂತೆ ಚಕಚಕನೆ ಕಟ್ಟಡವನ್ನೇರಿ ನೆರೆದಿದ್ದವರಲ್ಲಿ ಬೆರಗು ಮೂಡಿಸಿದರು. ಆರು ಮಹಡಿಯ ಕಟ್ಟಡವನ್ನು ಆರು ನಿಮಿಷಗಳಲ್ಲಿ ಸರಾಗವಾಗಿ ಏರಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಹೀಗೆ ಕುಂದಾಪುರದ ಶಾಸ್ತ್ರೀವೃತ್ತದ ಬಳಿ ಇರುವ ಜೆ.ಕೆ ಟವರ್ಸ್ ಏರಿ ತಮ್ಮ ಸಾಹಸ ಪ್ರದರ್ಶಿಸಿದವರು ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಮ ಮತ್ತವರ ಅಣ್ಣನ ಮಗ ಮಾಸ್ಟರ್ ಅಕ್ಷಯ್.

ಕುಂದಾಪುರ ಟಿಟಿ ರಸ್ತೆಯ ಶ್ರೀ ವಿಘ್ನೇಶ್ವರ ಯುವಕ ಸಂಘ ರಜತ ಸಂಭ್ರಮಕ್ಕೆ ಆಗಮಿಸಿದ ಸಂದರ್ಭ ಸಾಹಸ ಕಾರ್ಯ ನಡೆಸಿದರು. ನೆಲ ಅಂತಸ್ತಿನಿಂದ ಏರಿದ ಜ್ಯೋತಿರಾಜ್ ಹಾಗೂ ಅವರ ಅಣ್ಣನ ಮಗ ನೋಡ ನೋಡುತ್ತಿದ್ದಂತೆ ಆರು ಮಹಡಿಗಳ ಜೆ.ಕೆ. ಟವರ್ಸ್ ಏರಿ, ಕೆಳಕ್ಕಿಳಿದರು. ಸಲೀಸಾಗಿ ಕಟ್ಟಡ ಏರಿದ ಕೋತಿರಾಮ ಅದೇ ವೇಗದಲ್ಲಿ ಕೆಳಗಿಳಿದು ಅಚ್ಚರಿ ಮೂಡಿಸಿದರು. ಸಾಹಸ ಕಾರ್ಯಕ್ಕೆ ಶಾಸ್ತ್ರೀ ವೃತ್ತದ ಸುತ್ತಮುತ್ತ ಅಪಾರ ಜನಸಂದಣಿ ನೆರೆದಿತ್ತು. ಕಟ್ಟಡದಿಂದ ಕೆಳಗಿಳಿಯುತ್ತಿದ್ದಂತೆ ಜನರು ಅಭಿನಂದನೆ ಮಹಾಪೂರ ಹರಿಸಿದರು.

ಜ್ಯೋತಿರಾಜ್ ಅವರ ಸಾಹಸ ಕಾರ್ಯ ವೀಕ್ಷಿಸಲೆಂದು ಬಂದ ಜನಸಂದಣಿಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು. ಪೊಲೀಸರು ಸುಗಮ ಸಂಚಾರಕ್ಕೆ ಬಳಿಕ ಅನುವು ಮಾಡಿಕೊಟ್ಟರು. ಇದೇ ಸಂದರ್ಭ ಜೆ.ಕೆ. ಟವರ್ಸ್ ಮಾಲೀಕ ಸತೀಶ್ ಶೆಟ್ಟಿ ಸಾಹಸ ಮಾಡಿದ ಜ್ಯೋತಿರಾಜ್ ಅವರನ್ನು ಸಹಸ್ರಾರು ನಾಗರಿಕರ ಸಮ್ಮುಖ ಸನ್ಮಾನಿಸಿದರು. ಕಟ್ಟಡ ಏರುವ ಮೊದಲು ಜ್ಯೋತಿರಾಜ್ ಅವರನ್ನು ಶ್ರೀ ವಿಘ್ನೇಶ್ವರ ಯುವಕ ಸಂಘದ ಪದಾಧಿಕಾರಿಗಳು ರ‍್ಯಾಲಿ ಮೂಲಕ ಬಹುಮಹಡಿ ಕಟ್ಟಡದತ್ತ ಕರೆತಂದರು.

ತಮಿಳುನಾಡಿನ ಹುಡುಗ ಈಗ ವೀರ ಕನ್ನಡಿಗ
ತಮಿಳುನಾಡು ತೇನಿ ಜಿಲ್ಲೆಯ ಕಾಮರಾಜ ನಗರದಲ್ಲಿ ಜನಿಸಿದ ಜ್ಯೋತಿರಾಜ್ (29) ಕೋತಿರಾಜ್ ಚಿಕ್ಕ ವಯಸ್ಸಿನಲ್ಲಿಯೇ ಬಾಗಲಕೋಟೆಯಲ್ಲಿ ಬಂದು ನೆಲೆಸಿದ್ದರು. ಕೆಲವು ವರ್ಷಗಳ ಕಾಲ ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ ಜ್ಯೋತಿರಾಜ್ ಬಳಿಕ ಚಿತ್ರದುರ್ಗದತ್ತ ಮುಖಮಾಡಿದರು. 18ನೇ ವಯಸ್ಸಿನಲ್ಲಿ ಬದುಕಿನಲ್ಲಿ ಬೇಸರಗೊಂಡು ಸಾಯಲು ಪ್ರಯತ್ನಿಸಿದರೂ ಅದೃಷ್ಟವಶಾತ್ ಬದುಕಿಬಂದರು. ಸಾಯ ಹೋರಟ ಅವರ ಕೊನೆಯ ಪ್ರಯತ್ನವೇ ಅವರ ಬದುಕನ್ನು ಬದಲಿಸಿತು. ಕೋತಿಗಳು ಸಲೀಸಾಗಿ ಬಂಡೆಗಳನ್ನು ಏರುವುದನ್ನು ಕಂಡು ಪ್ರೇರಿತರಾಗಿ ಅದರಂತೆಯೇ ಬಂಡೆಗಳನ್ನು ಏರುವುದನ್ನು ಕಲಿತು ಯಶಸ್ವಿಯಾದರು. ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರ ಎದುರು ಕೋಟೆಗಳನ್ನು ಏರಿ ತನ್ನ ಪ್ರತಿಭೆಯನ್ನು ತೋರ್ಪಡಿಸಿಕೊಂಡು ಕೋತಿರಾಜ್ ಎಂದೇ ಪ್ರಸಿದ್ದರಾದರು.

ಪ್ರಪಂಚ ದಲ್ಲಿರುವ ಎಲ್ಲ ಬಂಡೆಗಳನ್ನು ಏರಬೇಕೆಂಬ ತವಕವಿದೆ. ಇದುವರೆಗಿನ ನನ್ನ ಸಾಹಸ ಯಾತ್ರೆಯಲ್ಲಿ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಎದುರಾಗಿದ್ದು ಜೋಗ್‌ಫಾಲ್ಸ್‌ನಲ್ಲಿ. ನೀರನ್ನು ಭೇದಿಸಿ ಮೇಲೇರುವ ಸಾಹಸ ಸಾಕಷ್ಟು ರಿಸ್ಕ್ ಆಗಿತ್ತು. ದೇವರು ಈ ಸಾಹಸ ಕಾರ್ಯದಲ್ಲಿ ಕೈ ಹಿಡಿದಿದ್ದರಿಂದ ಎಲ್ಲವೂ ಸುಖಮಯವಾಯಿತು ಎಂದರು. ಸತತ 10 ಬಾರಿ ಫಾಲ್ಸ್ ಕ್ಲೈಂಬಿಂಗ್ ಮಾಡಿದ್ದೇನೆ. ಮೈಸೂರಿನಲ್ಲಿರುವ 14 ಮಹಡಿ ಕಟ್ಟಡ ಏರಿದ್ದು ಇದುವರೆಗಿನ ಹೈಯೆಸ್ಟ್ ಕ್ಲೈಂಬಿಂಗ್ ಎಂದು ವಿವರಿಸಿದರು. ಕುಂದಾಪುರಕ್ಕೆ ಇದು ನನ್ನ ಎರಡನೇ ಭೇಟಿಯಾಗಿದ್ದು ಇಲ್ಲಿನ ಜನರ ಪ್ರೋತ್ಸಾಹ ತನಗೆ ಖುಷಿ ತಂದಿದೆ ಎಂದರು.

[quote font_size=”16″ bgcolor=”#ffffff” bcolor=”#dd9933″ arrow=”yes”]ವಿದೇಶಗಳಲ್ಲಿ ವಾಲ್ ಕ್ಲೈಂಬಿಂಗ್ ನೀಡುತ್ತಿರುವ ಪ್ರೋತ್ಸಾಹ ನಮ್ಮಲ್ಲಿ ನೀಡುತ್ತಿಲ್ಲ. ಕಳೆದ 6 ವರ್ಷಗಳಿಂದ ವಾಲ್ ಕ್ಲೈಂಬಿಂಗ್ ನಿರ್ಮಿಸಿಕೊಡಿ ಎಂಬ ಕನಿಷ್ಠ ಬೇಡಿಕೆಗೂ ಸರಕಾರ ಸ್ಪಂದಿಸದಿರುವುದು ನೋವುಂಟುಮಾಡಿದೆ. ನಾನು ಅನಕ್ಷರಸ್ಥ. ಆದರೆ ದೇವರ ದಯೆಯಿಂದ ಈ ಕಲೆ ನನ್ನಲ್ಲಿ ಅಂತರ್ಗತವಾಗಿದೆ. ಸಾಹಸ ಪ್ರವೃತ್ತಿಯ 17 ಹುಡುಗರಿಗೆ ಈಗಾಗಲೇ ಈ ಕಲೆಯ ಪರಿಚಯ ಮಾಡಿಸಿದ್ದೇನೆ. 2020ರ ಒಲಿಂಪಿಕ್ಸ್‌ಗೆ ವಾಲ್ ಕ್ಲೈಂಬಿಂಗ್‌ಗೆ ಅಣ್ಣನ ಮಗ ಮಾಸ್ಟರ್ ಅರ್ಜುನ್ ಅವರನ್ನು ತಯಾರುಗೊಳಿಸುತ್ತಿದ್ದೇನೆ. ಭಾರತದಲ್ಲಿ ವಾಲ್ ಕ್ಲೈಂಬಿಂಗ್ ತರಬೇತಿ ಆರಂಭಿಸಬೇಕು. ಸಾಹಸ ಪ್ರವೃತ್ತಿಯ ಯುವಕರಿಗೆ ಪ್ರೇರಣೆ ನೀಡಬೇಕೆಂಬುದು ನನ್ನ ಅಭಿಲಾಷೆ. – ಜ್ಯೋತಿರಾಜ್[/quote]

Exit mobile version