Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರಿನಲ್ಲಿ ಯಕ್ಷಕಲರವ ಆರಂಭ. ಜೂ.4ಕ್ಕೆ ಕಲಾಕ್ಷೇತ್ರದಲ್ಲಿ ‘ಯಕ್ಷ ಸಂಕ್ರಾಂತಿ’

ಕುಂದಾಪ್ರ ಡಾಟ್ ಕಾಂ.
ಬೆಂಗಳೂರು: ಮೇ ತಿಂಗಳು ಮುಗಿಯುತ್ತಿದಂತೆ ಯಕ್ಷಗಾನ ಮೇಳಗಳಿಗೆ ಒಂದು ವಿರಾಮ. ಗೆಜ್ಜೆಗಳನ್ನೆಲ್ಲ ಕಟ್ಟಿ ಪೆಟ್ಟಿಗೆಯಲಿಟ್ಟು ಅಟ್ಟ ಸೇರಿಸಿಬಿಡುತ್ತವೆ. ಸತತ ಆರು ತಿಂಗಳಿಂದ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ. ಊರಿನಲ್ಲಿ ದಿನನಿತ್ಯ ಸುಮಾರು ೩೦ಕ್ಕೂ ಹೆಚ್ಚು ಮೇಳಗಳು ಕಲಾ ತಿರುಗಾಟ ಮಾಡುತ್ತಿರುತ್ತವೆ. ಮಳೆಗಾಲದ ಶುರು ಆಗುತ್ತಿದಂತೆ ಅವುಗಳಲ್ಲಿ ಆಯ್ದ ಕೆಲವರು ತಮ್ಮಲ್ಲಿಯೇ ಒಂದು ತಂಡ ಕಟ್ಟಿಕೊಂಡು ಮುಂಬಯಿ, ಬೆಂಗಳೂರು, ಹೈದರಬಾದ್ ನಂತಹ ಕರಾವಳಿಯ ಜನರು ಹೆಚ್ಚು ಇರುವ ಕಡೆ ಪ್ರದರ್ಶನ ನೀಡುತ್ತಾರೆ. ಈ ಮೂಲಕ ತಮ್ಮ ಮಳೆಗಾಲದ ಜೀವನವನ್ನು ಸರಿದೂಗಿಸಿಕೊಳ್ಳುತ್ತಾರೆ.

ಜೂನ್ ಪ್ರಾರಂಭವಾಗುತ್ತಿದ್ದಂತೆ ಬೆಂಗಳೂರಿನ ಯಕ್ಷಪ್ರೇಮಿಗಳಿಗೆ ಒಂದು ಸಂಭ್ರಮ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಯಕ್ಷಗಾನ ಆಗುತ್ತಲೆ ಇರುತ್ತದೆ. ‘ಆತ ಎಲ್ಲಿ ಸಿಗದೆ ಇದ್ರೂ ಕಲಾಕ್ಷೇತ್ರದಲ್ಲಿ ಖಂಡಿತ ಸಿಗುತ್ತಾನೆ’ ಕಲಾಪ್ರೇಮಿಯ ಕುರಿತು ನಮ್ಮಲ್ಲಿ ಇಂತಹದೊಂದು ಮಾತಿದೆ. ವೃತ್ತಿಜೀವನದ ಒತ್ತಡದೊಂದಿಗೆ ತಮ್ಮ ಇಷ್ಟದ ಯಕ್ಷಗಾನವನ್ನು ನೋಡುವಲ್ಲಿ ಬಹುತೇಕ ಕರಾವಳಿಗರು ಹಾತೊರೆಯುತ್ತಾರೆ. ಇಲ್ಲಿ ಪೌರಾಣಿಕ, ಸಾಮಾಜಿಕ ಎರಡು ರೀತಿಯ ಪ್ರಸಂಗಗಳನ್ನು ಜನರು ಇಷ್ಟಪಡುತ್ತಾರೆ.

ಈ ಬಾರಿ ಜೂನ್ ತಿಂಗಳ ಮೊದಲಿನಿಂದಲೇ ಚಂಡೆಯ ಸದ್ದು ಪ್ರಾರಂಭವಾಗಿದೆ. ಇದೇ ಶನಿವಾರ ಜೂನ್ 4ರ ಶನಿವಾರ ಅದ್ದೂರಿ ತ್ರಿವಳಿ ಪೌರಾಣಿಕ “ಯಕ್ಷ ಸಂಕ್ರಾಂತಿ”ಯೊಂದಿಗೆ ಚಾಲನೆಯೂ ದೊರೆಯಲಿದೆ. ಕಲಾಧರ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ “ಕೃಷ್ಣ ಸಂಧಾನ – ಕೃಷ್ಣ ಪಾರಿಜಾತ – ದ್ರೌಪದಿ ಪ್ರತಾಪ” ಕೊಳಗಿ ಕೇಶವ ಹೆಗಡೆ, ವಿದ್ವಾನ್ ಗಣಪತಿ ಭಟ್, ಸುರೇಶ ಶೆಟ್ಟಿ, ಗಣೇಶ ಹೆಬ್ರಿ, ಬೆಂಗಳೂರಿಗೆ ನವಪರಿಚಯ ಕೃಷ್ಣ ದಾಸ ಮರವಂತೆ, ಪ್ರಭು ಗಾಂವ್ಕರ್, ಎನ್ ಜಿ ಹೆಗಡೆ, ರಾಘವೇಂದ್ರ ಭಟ್, ಕೃಷ್ಣಯಾಜಿ ಬಳ್ಕೂರು, ಜಲವಳ್ಳಿ ವಿಧ್ಯಾಧರ್ ರಾವ್, ಐರಬೈಲ್ ಆನಂದ ಶೆಟ್ಟಿ, ಸುಬ್ರಮಣ್ಯ ಹೆಗಡೆ ಯಲಗುಪ್ಪ, ಸುಬ್ರಮಣ್ಯ ಚಿಟ್ಟಾಣಿ, ಕೋಟ ಸುರೇಶ ಬಂಗೇರಾ, ಪ್ರದೀಪ್ ಸಾಮಗ, ಹಳ್ಳಾಡಿ ಜಯರಾಮ ಶೆಟ್ಟಿ, ಕಾಸರಕೋಡ್, ಉಪ್ಪುಂದ ನಾಗೇಂದ್ರ ರಾವ್, ಮಾಧವ ನಾಗುರ್, ಕಾರ್ತಿಕ ಚಿಟ್ಟಾಣಿ, ಹೆನ್ನಾಬೈಲ್, ಬೆರೊಳ್ಳಿ, ಕುಳಿಮನೆ, ಹಾರೆಕೊಪ್ಪ, ಉಪ್ಪೂರ್, ಯಡಮೊಗೆ ಇನ್ನಿತರರನ್ನು ರಂಗದಲ್ಲಿ ಇರಲಿದ್ದಾರೆ.

ಪ್ರವೇಶ ದರ ಇರುತ್ತದೆ. ಸಂಪರ್ಕ ನಾಗರಾಜ ಶೆಟ್ಟಿ ನೈಕಂಬ್ಳಿ 9741474255. ಶನಿವಾರ ಕಲಾಕ್ಷೇತ್ರಕ್ಕೆ ಆಗಮಿಸುವ ಯಕ್ಷಾಭಿಮಾನಿಗಳಿಗೆ ಬಿಲಿಂಡರ್ ಚಿತ್ರ ತಂಡವನ್ನು ಭೇಟಿಯಾಗುವ ಅವಕಾಶಕೂಡವಿದೆ.

Exit mobile version