Kundapra.com ಕುಂದಾಪ್ರ ಡಾಟ್ ಕಾಂ

ವಿಕಲಚೇತನರಿಗೆ ಮೀಸಲಿಟ್ಟ ಹಣದಲ್ಲಿ ರ‍್ಯಾಂಪ್ ನಿರ್ಮಾಣಕ್ಕೆ ಮುಂದಾದ ನಾಡ ಗ್ರಾಪಂ

ಕರ್ತವ್ಯ, ಮಾನವೀಯತೆಗಿಂತ ಕಟ್ಟಡ ಕಟ್ಟಿಸುವುದರಲ್ಲೇ ಜನಪ್ರತಿನಿಧಿ, ಅಧಿಕಾರಿಗಳಿಗೆ ಆಸಕ್ತಿ!

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಕಲಚೇತನರ ಆರೋಗ್ಯ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲೆಂದೇ ಮೀಸಲಿಡುವ ಸರಕಾರದ ಶೇ.3% ಅನುದಾನದಲ್ಲಿ ನಾಡ ಗ್ರಾಮ ಪಂಚಾಯತ್ ಕಛೇರಿಯ ರ‍್ಯಾಂಪ್ ನಿರ್ಮಾಣಕ್ಕೆ ಮುಂದಾಗುವ ಮೂಲಕ ವಿಕಲಚೇತನರ ಹಕ್ಕು ಕಸಿದುಕೊಳ್ಳಲು ಮುಂದಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ವಿಕಲಚೇತನರಿಗೆ ಸವಲತ್ತು ವಿತರಣೆಗಾಗಿ ಅರ್ಜಿ ಆಹ್ವಾನಿಸಿದ್ದ ನಾಡ ಗ್ರಾ.ಪಂ ಕಚೇರಿ ನಾಮಫಲಕದಲ್ಲಿಯೂ ಸ್ಪಷ್ಟವಾಗಿ ಪ್ರಕಟಣೆಯನ್ನು ಹಾಕಿತ್ತು. ಅದರಂತೆ 54 ವಿಕಲಚೇತನರು ಅರ್ಜಿ ಸಲ್ಲಿಸಿದ್ದಾರೆ.ಫಲಾನುಭವಿಗಳ ಆಯ್ಕೆ ಮಾಡಿ, ಸೌಲಭ್ಯ ನೀಡಬೇಕಿದ್ದ, ಗ್ರಾಪಂ ರ‍್ಯಾಂಪ್ ಮಾಡಲು ವಿಕಲಾಂಗ ಚೇತರ ಅನುದಾನವೇ ಬೇಕಿತ್ತ ಎನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಮೊದಲು ಅರ್ಜಿ ಹಾಕುವಂತೆ ಹೇಳಿ, ನಂತರ ಅನುದಾನ ಬೇರೆ ವ್ಯವಸ್ಥೆಗೆ ಬಳಸಿಕೊಳ್ಳುದು ಎಷ್ಟು ಸಮಂಜಸ ಎನ್ನೋದು ವಿಕಲಾಂಗ ಚೇತನರು ಪ್ರಶ್ನಿಸುತ್ತಿದ್ದಾರೆ.

ನಾಡಾ ಗ್ರಾಪಂನಲ್ಲಿ 1.8 ಲಕ್ಷ ರೂ.ವಿಕಲಾಂಗ ಚೇತನರಿಗೆ ವಿವಿಧ ಸೌಲಭ್ಯ ನೀಡಲು ಅನುದಾನವಿದ್ದು, ಅದರಲ್ಲಿ 8 ಸಾವಿರ ಶಿಕ್ಷಣಕ್ಕೆ ನೀಡಿದ್ದು, 1 ಲಕ್ಷ ಇಡಿಗಂಟಿದೆ. ಇದರಲ್ಲಿ ವಿಕಲಚೇತನರಿಗೆ ಪರಿಕರ ಹಾಗೂ ಆನಾರೋಗ್ಯಕ್ಕೆ ತುತ್ತಾದ ವಿಕಲ ಚೇತನರಿಗೆ ನೀಡಿ ಬೇಕಾಗಿತ್ತು. 54 ಜನ ವಿಕಲಾಂಗರು ಅರ್ಜಿ ಹಾಕಿ ಸೌಲಭ್ಯಕ್ಕಾಗಿ ಕಾದಿದ್ದೇ ಬಂತು ಸೌಲಭ್ಯ ಮಾತ್ರ ಮರೀಚಿಕೆ. ನಾಡಾ ದಲ್ಲಿ ಸಂಘಟನೆಯೊಂದು ವಿಕಲಚೇತನರಿಗೆ ಸಿಗುವ ಸೌಲಭ್ಯ, ಸೌಲತ್ತುಗಳ ಮಾಹತಿ ನೀಡಿದ್ದಕ್ಕೆ ವಿಕಲಚೇತನರಿಗೆ ಶಿಕ್ಷೆ ನೀಡುತ್ತಿದೆ ಗ್ರಾಪಂ. ದೇವರು ಕೊಟ್ಟರೂ ಪೂಜಾರಿ ಬಿಡ ಸ್ಥಿತಿ ನಾಡಾ ವಿಕಲಚೇತನರಿಗೆ ಬಂದೊದಗಿದ್ದು ವಿಪರ್ಯಾಸ ಅಲ್ಲದೆ ಮತ್ತೇನು? ನಾವು ನೋಡೋವಷ್ಟು ನೋಡುತ್ತೇವೆ. ನಮ್ಮ ಹಕ್ಕಿನ ಅನುದಾನ ನಮಗೆ ನೀಡದ ಬೇರೆ ಉದ್ದೇಶಕ್ಕೆ ಬಳಸಿದರೆ ನಾವು ಸುಮ್ಮ ನಿರೋದಿಲ್ಲ. ಅನುದಾನ ಹಂಚಿ ಉಳಿದರೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಿ.ನಮ್ಮವಂಚಿಸಿದರೆ ನಾಡಾ ಗ್ರಾಪಂ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ವಿಕಲಚೇತನರು ಎಚ್ಚರಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಪರಿಹಾರ ಕೊಡೋದು ಯಾರು?
ಹೆಸರು ದೇವಕಿ (35) ತಂದೆ ಇಲ್ಲ. ನಾಡಾ ಗ್ರಾಪಂ ರಾಮನಗರ ವಾಸಿ. ಪೋಲಿಯೋಕ್ಕೆ ಕಾಲು ಕಳೆದುಕೊಂಡಿದ್ದು, ಒಂದು ಕಾಲು ಮಡಿಚೋಕೂ ಆಗೋದಿಲ್ಲ. ತಾಯಿ ಲಕ್ಷ್ಮೀ ಈಕೆಗೆ ಇರುವ ಏಕೈಕ ಆಶ್ರಯ. ಕಳೆದ ಎಂಟು ವರ್ಷದಿಂದ ಶೌಚಾಲಯಕ್ಕೆ ಅರ್ಜಿ ಹಾಕಿದ್ದರೂ ಇತ್ತೀಚೆಗೆ ಅರ್ಧಂಬರ್ಧ ಶೌಚಾಲಯ ನಿರ್ಮಿಸಲಾಗಿದೆ. ಈಕೆ ತೆವಳಿಕೊಂಡೇ ಶೌಚಕ್ಕೆ ಹೋಗಬೇಕು. ಆದರೂ ಉಡುಪಿ ಜಿಲ್ಲೆ ಬಯಲು ಶೌಚಾಲಯ ಮುಕ್ತ! ಗೇರು ಬೀಜ ಸಿಪ್ಪೆ ತೆಗೆಯುವ ಕೆಲಸ ಮಾಡಿ ಅಲ್ಪಸ್ವಲ್ಪಗಳಿಸುತ್ತಿದ್ದು, ಮನೆಗೆ ಈಕೆ ದುಡಿಮೆಯೇ ದಿಕ್ಕು. ಶೇ.100 ವಿಕಲಚೇತನ ಸರ್ಟಿಫಿಕೇಟ್ ಇದ್ದು, ಸರಕಾರ 1200 ಮಾಸಿಕ ಸಹಾಯ ಧನ ನೀಡುತ್ತಿದೆ. ಈಕೆ ನಾಡಾ ಗ್ರಾಪಂಗೆ ವೀಲ್ ಚೇರ್ ಬೇಡಿಕೆ ಇಟ್ಟಿದ್ದು, ಕೊಟ್ಟ ಅರ್ಜಿ ಧೂಳುತಿನ್ನುತ್ತಿದೆ. ಶೇ.3 ಅನುದಾನದಲ್ಲಿ ವಿಕಲಚೇತನರಿಗೆ ಅನಾರೋಗ್ಯಕ್ಕೆ ಖರ್ಚು ಮಾಡಬೇಕೆಂದಿದ್ದರೂ ಗ್ರಾಪಂ ಚಿಕ್ಕಾಸು ನೀಡಿಲ್ಲ.

ನಾಡಾ ನ್ಯಾಮಾರಗೋಳಿ ಅಂಬೇಡ್ಕರ್ ಕಾಲನಿ ವಾಸಿ ಗಣಪತಿಎಂಡೋಸೆಲ್ಪಾನ್ ಮಾರಿಗೆ ಎರಡೂ ಕಣ್ಣು ಕಳೆದುಕೊಂಡಿದ್ದು, ತಿಂಗಳಿಗೆ 3 ಸಾವಿರ ಎಂಡೋಸೆಲ್ಪಾನ್ ಪರಿಹಾರ ಹಣವೇ ಇವರ ಬದುಕಿನ ದಾರಿ. ಮನೆಯಲ್ಲಿ ಐದು ಜನ ಇದ್ದು, ಅವರ ನೋಡಿಕೊಳ್ಳುವ ಜವಾಬ್ದಾರಿ ಕೂಡಾ ಗಣಪತಿ ಹೆಗಲ ಮೇಲಿದೆ. ಕಳೆದು 15 ವರ್ಷದ ಹಿಂದೆ ಎರಡೂ ಕಣ್ಣು ಕಳೆದುಕೊಂಡ ಗಣಪತಿ ಶೇ.100ರಷ್ಟು ವಿಕಲಾಂಗ ಚೇತನ. ಇವರಿಗೆ ರಕ್ತದೊತ್ತಡ ಇದ್ದು, ತಿಂಗಳಿಗೆ ಔಷದೋಪಚಾರಕ್ಕೆ ಸಾವಿರ ಗಟ್ಟಲೆ ಹಣ ಬೇಕಾಗುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಬಿಪಿ ಮಾತ್ರೆ ಕೊಡುತ್ತಿದ್ದರೂ, ಇನ್ನಿತರ ಔಷಧಿಗೆ ಹಣ ಇವರೇ ಹೊಂದಿಸಿಕೊಳ್ಳಬೇಕು.ಇವರು ನಾಡಾ ಗ್ರಾಪಂ ವಾಕಿಂಗ್ ಸ್ಟಿಕ್ ನೀಡುವಂತೆ ನೀಡಿದ ಅರ್ಜಿಗೆ ಕಿಮ್ಮತ್ತೇ ಇಲ್ಲಾ.

ಹೆಸರು ಕಡ್ರಿ ಶಂಕರ. ಶ್ರಮ ಜೀವಿ. ಕಳೆದ ನಾಲ್ಕಾರು ವರ್ಷದ ಹಿಂದೆ ಗ್ಯಾಂಗರಿನ್‌ಗೆ ಕಾಲು ಕಳೆದುಕೊಂಡಿದ್ದಾರೆ. ಇವರಿಗೆ ವಿಕಲಚೇತನ ಕೋಟದಡಿ ಸರಕಾದಿಂದ ಯಾವುದೇ ಸೌಲತ್ತು ಸಿಕ್ಕಿಲ್ಲ. ಮಕ್ಕಳು ಕೂಲಿ ನಾಲಿ ಮಾಡಿ ತಂದೆ ನೋಡಿಕೊಳ್ಳುತ್ತಿದ್ದು, ತಿಂಗಳಿಗೆ 3 ಸಾವಿರದಷ್ಟು ಔಷಧಿ, ಮಾತ್ರೆಗೆ ಹಣ ಹೊಂದಿಸಲು ಹೆಣಗಾಡ ಬೇಕಿದೆ. ಶಂಕರ್ ಹಿಂದೆ ಕಾಡುತ್ಪತ್ತಿ ಸಂಗ್ರಹ ಕೆಲಸ ಮಾಡಿಕೊಂಡಿದ್ದು, ಈಗ ಮನೆಯಲ್ಲೆ ಬಾಕಿ ಆಗಿದ್ದಾರೆ. ಇವರು ಶೇ.3ರ ಅನುದಾನದಲ್ಲಿ ವಾಕರ್‌ಬೇಡಿಕೆ ಇಟ್ಟಿದ್ದು ಅರ್ಜಿ ಬಾಕಿ. ಇನ್ನು ಔಷಧೋಪಚಾರಕ್ಕೆ ಗ್ರಾಪಂ ಇದೂವರಗೆ ನಯಾಪೈಸೆ ನೀಡಿಲ್ಲ. ಕುಂದಾಪ್ರ ಡಾಟ್ ಕಾಂ ವರದಿ.

ವಿಕಲಚೇತರಿಗೆ ಸರಕಾರ ಶೇ.3ರಲ್ಲಿ ಆನುದಾನ ನೀಡುವ ಅವಕಾಶ ಇದ್ದರೂ ನಾಡಾ ಗ್ರಾಪಂಗೆ ಇವರ ಆರೋಗ್ಯಕ್ಕಿಂತ ರ‍್ಯಾಂಪೇ ಮುಖ್ಯವಾಗಿ ಹೋಯಿತು. ಇದೂ ನಾಡಾ ಗ್ರಾಪಂ ಮೂವರ ಸಮಸ್ಯೆಯಲ್ಲ. ೫೪ ವಿಕಲಚೇತನರ ಸಮಸ್ಯೆ. ಜನಪ್ರತಿನಿಧಿಗಳ ಅಧಿಕಾರ ದುರ್ಬಳಕೆ, ಅಧಿಕಾರಿಗಳ ಬದ್ಧತೆಯ ಲೋಪದಿಂದಾಗಿ ವಿಕಲಚೇತನರು ಮಾತ್ರ ಪರಿತಪಿಸುವಂತಾಗಿದೆ. © ಕುಂದಾಪ್ರ ಡಾಟ್ ಕಾಂ ವರದಿ.

Exit mobile version