Kundapra.com ಕುಂದಾಪ್ರ ಡಾಟ್ ಕಾಂ

ಪಶ್ಚಿಮ ಘಟ್ಟ ತಪ್ಪಲಿನ ರೈತರಿಗೆ ಮಾರಕವಾಗುತ್ತಿದೆ ಧನಲಕ್ಷ್ಮೀ ಗಿಡ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕರಾವಳಿಯ ಸಮುದ್ರತೀರದ ಪ್ರದೇಶಗಳಲ್ಲಿ ಅಂತರಗಂಗೆ ಕೃಷಿಕರಿಗೆ ಮಾರವಾಗಿ ಪರಿಣಮಿಸಿದರೇ, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಬೆಳೆಯುವ ಧನಲಕ್ಷ್ಮೀ ಗಿಡ ರೈತರಿಗೆ ಕಂಟಕವಾಗಿ ಪರಿಣಮಿಸಿದೆ.

ಕರಾವಳಿಯ ಪಶ್ಚಿಮ ಘಟ್ಟತಪ್ಪಲಿನ ಹಳ್ಳಿಹೊಳೆ, ಯಡಮೊಗೆ, ಹೊಸಂಗಡಿ, ಮಚ್ಚಟ್ಟು, ಶೇಡಿಮನೆ, ಮಡಾಮಕ್ಕಿ, ಹೆಂಗವಳ್ಳಿ, ಸಿದ್ದಾಪುರ, ಉಳ್ಳೂರು-೭೪, ಆಜ್ರಿ, ಕೊಡ್ಲಾಡಿ ಮುಂತಾದ ಗ್ರಾಮಗಳಲ್ಲಿ ಧನಲಕ್ಷ್ಮೀ ಎಂಬ ಬಳ್ಳಿಯಂತೆ ಹಬ್ಬಿರುವ ಗಿಡಗಳು ರೈತರ ಹೊಲಗದ್ದೆ, ಅಡಿಕೆ, ತೆಂಗು, ತೋಟ ಹಡಿಲು ಬಿದ್ದ ಗದ್ದೆಗಳಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿದೆ.

ಕಂಗಾಲಾದ ರೈತ:
ಕರಾವಳಿ ಜಿಲ್ಲೆಗಳಲ್ಲಿ ಕೂಲಿ ಆಳುಗಳ ಸಂಬಳ ಅತ್ಯಧಿಕವಾಗಿರುವುದರಿಂದ ಕೃಷಿ ಮಾಡುವುದೇ ದುಸ್ಥರವಾದ ಇಂದಿನ ದಿನಗಳಲ್ಲಿ ಈ ಧನಲಕ್ಷ್ಮೀ ಗಿಡ ರೈತರ ಅಡಿಕೆ, ತೆಂಗು ತೋಟಗಳಲ್ಲಿ ನಿರ್ನಾಮ ಮಾಡಲಾಗದಂತೆ ಬಳ್ಳಿಯಂತೆ ಹಬ್ಬಿ, ಅಡಿಕೆತೆಂಗು ಉತ್ಪನ್ನಗಳನ್ನು ಹೆಕ್ಕಲು ಆಗದಂತೆ ಬೆಳೆಯುತ್ತಿದೆ. ಈ ಧನಲಕ್ಷ್ಮೀ ಗಿಡಗಳನ್ನು ರೈತರಿಗೆ ನಿಯಂತ್ರಿಸಲಾಗದ ಪದೇ ಪದೇ ವಿಷಯುಕ್ತ ಕಳೆನಾಶಕದ ಮೊರೆ ಹೋಗುತ್ತಿದ್ದಾರೆ.

ವಿಷಯುಕ್ತ ಕಳೆನಾಶಕ ಸಿಂಪಡನೆಯಿಂದ ಮುಂದೆ ಅಪಾಯ:
ಧನಲಕ್ಷ್ಮೀ ಗಿಡಗಳ ಮೇಲೆ ರೈತರು ನಿರಂತರ ಕಳೆನಾಶಕ ರಾಸಾಯಿನಿಕ (ವಿಷಯುಕ್ತ) ದ್ರಾವಣಗಳನ್ನು ಸಿಂಪರಣೆ ಮಾಡುವುದರಿಂದ ಭೂಮಿಯ ಮಣ್ಣು ವಿಷಯುಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು, ರೈತ ಬೆಳೆಯುವ ಆಹಾರ ಪದಾರ್ಥಗಳು ವಿಷಯುಕ್ತವಾಗಲಿದೆ ಎಂಬ ಆತಂಕ ಕಾಡುತ್ತಿದೆ. ಕೇರಳದ ಕಾಸರಗೋಡಿನ ಗೇರುತೋಟದ ಮೇಲೆ ಎಂಡೋಸಲ್ಪಾನ್ ಸಿಂಪಡಣೆ ಮಾಡಿ ಅಲ್ಲಿನ ಜನರ ಶಾಶ್ವತ ಅಂಗವಿಕಲತೆ ಅನುಭವಿಸುತ್ತಿರು ದೃಷ್ಟಾಂತ ಕಣ್ಣು ಮುಂದೆಯೇ ಇರುವುದು ಈ ಪರಿಸರದ ಕೃಷಿಕರುನ್ನು ಕಂಗಾಲು ಮಾಡಿದೆ.

ಧನಲಕ್ಷ್ಮೀಗಿಡ:
ಹಸಿರು ಬಣ್ಣದಿಂದ ಕೂಡಿದ ಬಳ್ಳಿಯಂತೆ ಹಬ್ಬುವ ನಾಲ್ಕು ಇಂಚಿಗೆ ಒಂದು ಗಂಟು ಬಿಡುವ ಗಿಡದಲ್ಲಿ ಪ್ರತಿಗಂಟಿನಲ್ಲಿನಯೂ ಬೇರು ಬಂದು ಪುನಃ ಗಿಡವಾಗಿ ಹತ್ತು ಅಡಿ ಉದ್ದಕ್ಕೂ ಬಳ್ಳಿಯಂತೆ ಹರಡಿ ಹಬ್ಬುತ್ತದೆ. ಗಿಡದ ಕೆಳಗಡೆ ಸಂಪೂರ್ಣ ತಂಪಾಗಿದ್ದು, ಹಾವು ಮುಂತಾದ ವಿಷ ಜಂತುಗಳಿಗೆ ಆವಾಸ ಸ್ಥಾನವಾಗಿರುತ್ತದೆ. ಎಂತಹ ಕಡು ಬೇಸಿಗೆಯಲ್ಲೂ ನೀರಿನ ಅವಶ್ಯಕತೆ ಇಲ್ಲದೆಯೂ ಈ ಗಿಡಗಳು ಬದುಕಬಲ್ಲದು. ವರ್ಷಕ್ಕೆ ಒಂದೆರಡು ಬಾರಿ ಹಳದಿ ಬಣ್ಣದ ಹೂಗಳನ್ನು ಬಿಟ್ಟು ತನ್ನ ಸಂಖ್ಯೆಯನ್ನು ವೃದ್ದಿಸಿಕೊಳ್ಳುತ್ತಲೇ ಹೋಗುತ್ತ್ತದೆ.

ಇಲಾಖೆ ಗಮನಹರಿಸಬೇಕು:
ಸಂಬಂಧ ಪಟ್ಟ ತೋಟಗಾರಿಕೆ ಇಲಾಖೆ ಧನಲಕ್ಷ್ಮೀ ಗಿಡಗಳ ಶಾಶ್ವತ ನಾಶಕ್ಕೆ ರೈತರಿಗೆ ಪರಿಹಾರ ಸೂಚಿಸಿ ರೈತರ ಜೊತೆ ಕೈಜೋಡಿಸಬೇಕೆಂದು ಪಶ್ಚಿಮ ಘಟ್ಟದ ತಪ್ಪಲಿನ ರೈತರು ಆಗ್ರಹಿಸುತ್ತಿದ್ದಾರೆ.

Exit mobile version