Kundapra.com ಕುಂದಾಪ್ರ ಡಾಟ್ ಕಾಂ

ಕುಸುಮ ಫೌಂಡೇಶನ್ ಸಾಂಸ್ಕೃತಿಕ ಲೋಕದ ಅನಾವರಣ – ‘ಕುಸುಮಾಂಜಲಿ 2016’

ಶ್ರೀ ಪಡ್ರೆ ಅವರಿಗೆ ಕುಸುಮಾಶ್ರೀ ಪ್ರಶಸ್ತಿ. ಗಾಯನ ಸ್ವರ್ಧೆ ವಿಜೇತ ಪ್ರತಿಭೆಗಳಿಗೆ ಗಾನಕುಸುಮ ಪ್ರಶಸ್ತಿ.

ಕುಂದಾಪ್ರ ಡಾಟ್ ಕಾಂ ವರದಿ.
ಉದ್ಯಮದೊಂದಿಗಿನ ಸಾಮಾಜಿಕ ಬದ್ಧತೆ. ಬದ್ಧತೆಯಲ್ಲೊಂದು ಉತ್ಕಷ್ಟತೆ. ಇದು ಕಳೆದ ಹದಿನೇಳು ವರ್ಷದ ಹಿಂದೆ ಹುಟ್ಟಿಕೊಂಡ ನಾಗೂರಿನ ಕುಸುಮ ಸಮೂಹ ಸಂಸ್ಥೆಗಳಲ್ಲಿ ಕಾಣಬಹುದಾದ ವಿಶೇಷತೆ.

ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಕುಸುಮ ಸಮೂಹ ಸಂಸ್ಥೆಗಳು ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಕೊಂಡು ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದೇ ಶೈಕ್ಷಣಿಕ, ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಗೀತಾಸಕ್ತರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಛಾತಿ ಸಂಸ್ಥೆಯದ್ದು. ಪರಿಸರದ ಪ್ರತಿಭೆಗಳಿಗೆ ಧ್ವನಿಯಾಗಬೇಕು ಎಂಬ ಸದುದ್ದೇಶದಿಂದ ಕುಸುಮ ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದೊಂದಿಗೆ ಆಯೋಜಿದ ‘ಕುಸುಮಾಂಜಲಿ’ ಸಾಂಸ್ಕೃತಿಕ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಈ ಭಾರಿ ‘ಕುಸುಮಾಂಜಲಿ – 2016’ ಆಯೋಜಿಸಲಾಗಿದೆ. ಡಿ.11ರ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೊಂದು ಗರಿ ಎಂಬಂತೆ ನಾಡಿನ ಶ್ರೇಷ್ಠ ಸಾಧಕರೊಬ್ಬರಿಗೆ ಕುಸುಮಾಶ್ರೀ ಹಾಗೂ ಪರಿಸರದ ವಿಶೇಷ ಗಾನ ಪ್ರತಿಭೆಗೆ ಗಾನಕುಸುಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

[quote font_size=”14″ bgcolor=”#ffffff” bcolor=”#dd3333″ arrow=”yes” align=”left”] ಡಿ.11 ಸಂಜೆ ಕುಸುಮಾಂಜಲಿ:
ಕುಸುಮ ಫೌಂಡೇಶನ್ ‘ಕುಸುಮಾಂಜಲಿ 2016’ ಕುಸುಮಶ್ರೀ ಹಾಗೂ ಗಾನಕುಸುಮ ಪ್ರಶಸ್ತಿ ಪ್ರದಾನ ಸಮಾರಂಭ ಡಿ.11ರ ಭಾನುವಾರ ಸಂಜೆ ಗಂಟೆ 5 ರಿಂದ 10: 30ರ ವರೆಗೆ ನಾಗೂರಿನ ‘ಕುಸುಮ ಗ್ರೂಪ್’ ಪರಿಸರದಲ್ಲಿ ನಡೆಯಲಿದೆ. ಗಾನಕುಸುಮ ಸಂಗೀತ ಸ್ವರ್ಧೆಯಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕುಸುಮಾ ಫೌಂಡೇಶನ್ ಮ್ಯಾನೆಜಿಂಗ್ ಟ್ರಸ್ಟೀ ನಳೀನ್‌ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಸಾಹಿತಿ, ಮಂಗಳೂರು ಆಕಾಶವಾಣಿ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅದೇ ವೇದಿಕೆಯಲ್ಲಿ ಶ್ರೀ ಪಡ್ರೆಗೆ ಕುಸುಮಾಶ್ರೀ ಹಾಗೂ ಗಾನಕುಸುಮ ವಿಜೇತರಿಗೆ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ಬಳಿಕ ಮಂಗಳೂರಿನ ಭರತಾಂಜಲಿ ನೃತ್ಯತಂಡದಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರುಗಲಿದೆ. [/quote]

ಶ್ರೀ ಪಡ್ರೆ ಅವರಿಗೆ ಕುಸುಮಾಶ್ರೀ ಪ್ರಶಸ್ತಿ:
ಈ ಭಾರಿ ಕುಸುಮಾಶ್ರೀ ಪ್ರಶಸ್ತಿಯನ್ನು ಕೃಷಿಕ, ಪತ್ರಕರ್ತ ಶ್ರೀ ಪಡ್ರೆ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು, ಸ್ಮರಣಿಕೆ ಫಲವನ್ನೊಳಗೊಂಡಿದೆ. ನೆಲ ಜಲ ಸಂರಕ್ಷಣೆಯ ಮಾತು ಬಂದಾಗಲೆಲ್ಲ ಶ್ರೀ ಪಡ್ರೆ ಅವರ ಹೆಸರು ಕೇಳಿಬರುತ್ತದೆ. ವೃತ್ತಿಯಲ್ಲಿ ಕೃಷಿಕನಾಗಿ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿರುವ ಪಡ್ರೆ ಅವರು ‘ಕೃಷಿಕನ ಕೈಗೆ ಲೇಖನಿ’ ಎಂಬ ಆಶಯದೊಂದಿಗೆ ಆರಂಭಿಸಿದ ‘ಅಡಿಕೆ ಪತ್ರಿಕೆ’ಗೆ ಈಗ 28ರ ಹರೆಯ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಜ್ಜೆ. ಮಳೆನೀರಿನ ಕೊಯ್ಲಿನ ಬಗೆಗೆ ವಿಶೇಷ ಅಸ್ತೆ ವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಮಣ್ಣು ನೀರು’ ಸೇರಿದಂತೆ ಕೃಷಿ ನೆಲ ಜಲದ ಬಗೆಗೆ 12ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಹನಿಗೂಡಿಸೋಣ ಅಂಕಣದ ಮೂಲಕ 225ಮಂದಿಯ ಕುರಿತಾಗಿ ಕೃಷಿ ಸಂಬಂಧಿ ಯಶೋಗಾಥೆಯನ್ನು ನಾಡಿಗೆ ಪರಿಚಿಯಿಸಿದ್ದಾರೆ. ಹಲಸಿನ ಬಗೆಗೆ ಅಧ್ಯಯನ, ಕೃಷಿ-ನೀರಿನ ಬಗೆಗೆ ನಿರಂತರವಾಗಿ ಕಾರ್ಯಗಾರ, ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿ ಅರಿವು ಮೂಡಿಸುತ್ತಲೇ ಬಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಕುಸುಮಾ ಫೌಂಡೇಶನ್ ಕುಸುಮಾಂಜಲಿ ಆಯೋಜಿಸುವುದರೊಂದಿಗೆ 2015ರಿಂದ ನಾಡಿನ ವಿಶೇಷ ಸಾಧಕರಿಗೆ ‘ಕುಸುಮಾಂಜಲಿ ಪ್ರಶಸ್ತಿ’ಯನ್ನು ನೀಡುತ್ತಿದ್ದು ಕಳೆದ ವರ್ಷ ಸಾಲು ಮರದ ತಿಮ್ಮಕ್ಕ ಅವರಿಗೆ ಕುಸುಮಾಂಜಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಗಾನಕುಸುಮ ವಿಜೇತರಿಗೆ ಗಾನಕುಸುಮ ಪ್ರಶಸ್ತಿ:
ಕುಸುಮಾಂಜಲಿಗೆ ಪೂರ್ವಭಾವಿಯಾಗಿ ಕುಂದಾಪುರ ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಗಾನ ಕುಸುಮ ಸಂಗೀತ ಸ್ವರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳೂ ಸ್ವರ್ಧೆಯಲ್ಲಿ ಭಾಗವಹಿಸಿದ್ದರು. ಎರಡು ಸುತ್ತು ಸ್ವರ್ಧೆಯ ಬಳಿಕ ಫೈನಲ್ ಪ್ರವೇಶಿಸಿದ್ದ 6 ಮಂದಿಯ ಪೈಕಿ ಸಿನಿಯರ್ ವಿಭಾಗದಲ್ಲಿ ಕುಂದಾಪುರ ಬಿ.ಬಿ ಹೆಗ್ಡೆ ಕಾಲೇಜಿನ ವಿಜಯಲಕ್ಷ್ಮೀ, ಜ್ಯೂನಿಯರ್ ವಿಭಾಗದಲ್ಲಿ ಅನೀಶ್ ವಿಜೇತರಾಗಿದ್ದರು. ಫೈನಲ್ ಪ್ರವೇಶಿಸಿದ್ದ 6 ಮಂದಿ ‘ಕುಸುಮಾಂಜಲಿ’ ಕಾರ್ಯಕ್ರಮದಲ್ಲಿ ಹಾಡುವುದಲ್ಲದೇ, ವಿಜೇತ ಇರ್ವರಿಗೆ ಗಾನಕುಸುಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕುಸುಮ ಸಮೂಹ ಸಂಸ್ಥೆಗಳು:
ಹದಿನೇಳು ವರ್ಷಗಳ ಹಿಂದೆ ನಾಗೂರು ಪರಿಸರದಲ್ಲಿ ಆರಂಭಗೊಂಡ ಕುಸುಮ ಸಮೂಹ ಸಂಸ್ಥೆಗಳು ಜನರ ಅಗತ್ಯಗಳಗೆ ತಕ್ಕಂತೆ ತನ್ನ ಉದ್ಯಮವನ್ನು ಮುಂದುವರಿಸಿಕೊಂಡು ಬಂದಿದೆ. ಕುಸುಮ ಹೋಮ್ಸ್ ಹಾಗೂ ಕುಸುಮ ಎಲೆಕ್ಟ್ರೀಕಲ್ಸ್ ಮೂಲಕ ಪರಿಚತವಾದ ಸಂಸ್ಥೆ ಗುಣಮಟ್ಟ ಅನ್ವರ್ಥದಂತೆ ಕಾರ್ಯನಿರ್ವಹಿಸುತ್ತಿದೆ. ಮುಂದೆ ಉದ್ಯಮದೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಕುಸುಮ ಫೌಂಡೇಶನ್ ಆರಂಭಿಸಿತು. ಈ ಫೌಂಡೇಶನ್ ಮೂಲಕ ಪರಿಸರದ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಶ್ಲಾಘನಾರ್ಹ. ಸುಸಜ್ಜಿತ ಕಟ್ಟಡವಿಲ್ಲದೇ, ಮಕ್ಕಳ ಕೊರತೆಯಿಂದ ನಡೆಸುತ್ತಿದ್ದ ನಾಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಂಸ್ಥೆಯು ದತ್ತು ಸ್ವೀಕರಿಸಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ್ದರಿಂದ 2015ರಲ್ಲಿ 9 ಮಕ್ಕಳು 1ನೇ ತರಗತಿಗೆ ಸೇರುವಂತಾಗಿತ್ತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೂ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಿರುವುದು ಗಮನಾರ್ಹ.

ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಹೊರತಾಗಿ ಇರುವ ಪ್ರತಿಭೆಯನ್ನು ಗುರುತಿಸುವುದು ಮತ್ತು ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಆಶಯದೊಂದಿಗೆ ಗಾನಕುಸುಮ ಕಾರ್ಯಕ್ರಮ ಆಯೋಜಿಸಿ ಸಂಗೀತಾಸಕ್ತ ಮಕ್ಕಳನ್ನು ಹುರಿದುಂಬಿಸುವ ಕಾರ್ಯದಲ್ಲಿ ಕುಸುಮಾ ಫೌಂಡೇಶನ್ ತೊಡಗಿದೆ. ಇದರಿಂದ ಗ್ರಾಮೀಣ ಪರಿಸರದ ಮಕ್ಕಳಿಗೂ ಒಂದು ಉತ್ತಮ ವೇದಿಕೆ ದೊರಕಿದಂತಾಗಿದೆ. ಕುಸುಮಾಂಜಲಿ ಕುಸುಮಾ ಫೌಂಡೇಶನ್‌ನ ಮಹತ್ವಾಕಾಂಕ್ಷಿಯ ಕಾರ್ಯಕ್ರಮಗಳಲ್ಲೊಂದು.

ಒಟ್ಟಿನಲ್ಲಿ ಉದ್ಯಮದೊಂದಿಗೆ ಕುಸುಮಾ ಹೋಮ್ಸ್, ಕುಸುಮಾ ಇಲೆಕ್ಟ್ರಿಕಲ್ಸ್, ಕುಸುಮಾ ಕನ್ಸ್‌ಲ್ಟೆನ್ಸಿ ಮುಂತಾದ ಉದ್ಯಮ ಹಾಗೂ ಸೇವಾ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಲೇ, ಕುಸುಮಾ ಫೌಂಡೇಶನ್ ಸ್ಥಾಪಿಸಿ ಸಾಮಾಜಿಕ ಬದ್ಧತೆಯನ್ನು ಮರೆಯದೇ, ತಾವು ಬೆಳೆಯುವುದರೊಂದಿಗೆ ಇತರರನ್ನು ಗುರುತಿಸುವ, ಬೆಳೆಸುವ ಕಾರ್ಯದಲ್ಲಿ ನಿರತರಾಗಿರುವ ಕುಸುಮ ಸಮೂಹ ಸಂಸ್ಥೆಯ ನಿರ್ದೇಶಕ ನಳೀನ್‌ಕುಮಾರ್ ಶೆಟ್ಟಿ ಹಾಗೂ ಉದ್ಯೋಗಿಗಳ ಕಳಕಳಿ, ಬದ್ಧತೆ ಹಾಗೂ ಬದ್ಧತೆಯ ಹಿಂದಿನ ಶಕ್ತಿಯನ್ನು ಪ್ರಶಂಸಾರ್ಹ. © ಕುಂದಾಪ್ರ ಡಾಟ್ ಕಾಂ.

Read this:

► ಗಾನಕುಸುಮ ಸಂಗೀತ ಸ್ವರ್ಧೆ: ಸೀನಿಯರ್ ವಿಭಾಗದಲ್ಲಿ ವಿಜಯಲಕ್ಷ್ಮಿ, ಜೂನಿಯರ್ ವಿಭಾಗದಲ್ಲಿ ಅನೀಶ್ ವಿಜೇತ – http://kundapraa.com/?p=19118
► ಗಾನಕುಸುಮ – 2016: ಸೆಮಿಫೈನಲ್‌ಗೆ 35 ಸ್ವರ್ಧಿಗಳು ಆಯ್ಕೆ – http://kundapraa.com/?p=18773
► ಗಾನಕುಸುಮ – 2016: ಗ್ರಾಮೀಣ ಭಾಗದ ಸಂಗೀತ ಪ್ರತಿಭೆಗಳಿಗೊಂದು ಸುವರ್ಣಾವಕಾಶ – http://kundapraa.com/?p=17572

Exit mobile version