Site icon Kundapra.com ಕುಂದಾಪ್ರ ಡಾಟ್ ಕಾಂ

ತೆಕ್ಕಟ್ಟೆ : ಮನೆ ನಿವೇಶನ ರಹಿತರ ಬೃಹತ್‌ ಸಮಾವೇಶ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರಾಜ್ಯದಲ್ಲಿ 1 ಕೋಟಿಗೂ ಮಿಕ್ಕು ಕೃಷಿ ಕೂಲಿಕಾರರು ಇದ್ದಾರೆ. ಸ್ವಂತ ನಿವೇಶನ ಹೊಂದಿಲ್ಲದವರೇ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಕ್ಕುಗಳ ಬಗ್ಗೆ ಜಾಗೃತಿ, ತಿಳಿವಳಿಕೆ ಮೂಡದ ಹೊರತು ಬೇಡಿಕೆ ಈಡೇರದು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ದಾಸಭಂಡಾರಿ ಹೇಳಿದರು.

ಅವರು ತೆಕ್ಕಟ್ಟೆ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಸಿಐಟಿಯು) ತಾಲೂಕು ಸಮಿತಿ ನೇತೃತ್ವದಲ್ಲಿ ಜರಗಿದ ಮನೆ ನಿವೇಶನ ರಹಿತ ಅರ್ಜಿದಾರರ ಸಮಾವೇಶದಲ್ಲಿ ಮಾತನಾಡಿದರು.

ನಿವೇಶನಕ್ಕೆ ಆಗ್ರಹಿಸಿ ಸಂಘಟನೆಯ ನೇತೃತ್ವದಲ್ಲಿ ರಾಜಾದ್ಯಂತ ಹೋರಾಟ ನಡೆಯುತ್ತಿದೆ. ಬಡವರಿಗೆ ಭೂಮಿ ಹಕ್ಕು ನೀಡುವಲ್ಲಿ ಸರಕಾರದ ವಿಳಂಬ ಧೋರಣೆಯ ಬಗ್ಗೆ ಅರ್ಜಿದಾರರು ಯೋಚಿಸಬೇಕಾಗಿದೆ. ಉಳ್ಳವರಿಗೆ ಮತ್ತೂಂದಿಷ್ಟು ಲಭ್ಯತೆ ಆಗುತ್ತಿದೆ. ಇಲ್ಲದವನಿಗೆ ಏನು ಇಲ್ಲದ ಪರಿಸ್ಥಿತಿ ಉದ್ಭವಿಸಿದೆ ಎಂದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತೆಕ್ಕಟ್ಟೆ ಗ್ರಾಮ ಸಮಿತಿ ಕಾರ್ಯದರ್ಶಿ ಕಾರ್ಮಿಕ ಮುಖಂಡ ಸತೀಶ ಕುಮಾರ ತೆಕ್ಕಟ್ಟೆ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ತಾಲೂಕು ಸಮಿತಿ ಉಪಾಧ್ಯಕ್ಷ ರಾಜೀವ ಪಡುಕೋಣೆ, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಮೊಯ್ದಿನಬ್ಬಿ, ಶೀಲಾವತಿ ಉಪಸ್ಥಿತರಿದ್ದಾರೆ. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ – ನಿವೇಶನ ರಹಿತರ ಹೋರಾಟ ಬೆಂಬಲಿಸಿ ಮಾತನಾಡಿದರು.

Exit mobile version