Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ವರ್ಧಂತ್ಯೋತ್ಸವ, ಬ್ರಹ್ಮ ಕಲಶೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಿಮೂರ್ತಿಗಳಲ್ಲಿ ಪರಶಿವ ಅಪಾರ ಕರುಣಾಮಯಿ. ಭಕ್ತರಿಗಾಗಿ ತಾನು ಎಂತಹ ಕಷ್ಟ ಅನುಭವಿಸಲೂ ಸಿದ್ಧ. ಶಿವನಿಗೆ ಅರ್ಪಿಸಬೇಕಾಗಿರುವುದು ಶುದ್ಧ ಭಕ್ತಿ ಮಾತ್ರ. ಅಭಿಷೇಕ ಪ್ರಿಯನಾದ ಶಿವ ಒಂದು ಬಿಂದಿಗೆ ನೀರು. ಒಂದು ಬಿಲ್ವ ಪತ್ರೆಗೆ ಒಲಿದು ಬಿಡುವ. ರಾವಣನ ಭಕ್ತಿಗೆ ಮೆಚ್ಚಿದ ಆತ ಆತ್ಮಲಿಂಗಗಳನ್ನೇ ನೀಡಿದ. ಅರಿವಿಲ್ಲದೇ ಬಿಲ್ವ ಪತ್ರೆ ಸೇವೆ ನಡೆಸಿದ ಕಣ್ಣಪ್ಪನಿಗೆ ಒಲಿದ, ಸಮುದ್ರ ಮಥನದ ಕಾಲದಲ್ಲಿ ಅಳುಕದೇ ವಿಷ ನುಂಗಿ ಭಕ್ತರನ್ನು ರಕ್ಷಿಸಿದ ಇಂತಹ ಶಿವ ಯೋಗಿ,ತ್ಯಾಗಿ, ಭೋಗಿ ಎಲ್ಲವೂ ಹೌದು. ಶಿವಾಲಯಕ್ಕೆ ಭೇಟಿ ನೀಡಿ ಸದಾಶಿವನ ಧ್ಯಾನಗಳಿಂದ ನಾವು ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ ಎಂದು ಸರಕಾರಿ ಪ್ರೌಡಶಾಲೆ ಮಣುರೂ ಪಡುಕೆರೆಯ ಶ್ರೀಧರ ಶಾಸ್ತ್ರಿ ಗುಂಡ್ಮಿ ಹೇಳಿದರು.

ಅವರು ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ೧೭ ನೇ ವರ್ಧಂತ್ಯೋತ್ಸವ ಹಾಗೂ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಶ್ರೀಧರ ವಿ ಕಾಮತ್ ಮಾತನಾಡಿ ಹೊಸ ದೇವಾಲಯಗಳನ್ನು ಸ್ಥಾಪಿಸುವುದಕ್ಕಿಂತ ಪುರಾತನ ದೇವಾಲಯಗಳನ್ನು ಅಭಿವೃದ್ದಿಪಡಿಸಿ ವ್ಯವಸ್ಥಿತ ಪೂಜೆ ಪುನಸ್ಕಾರಗಳನ್ನು ನೆರವೇರಿಸುವುದು ಶ್ರೇಯಕರ. ಪ್ರತಿನಿತ್ಯ ದೇವರ ದರ್ಶನ ಹಾಗೂ ಸನ್ನಿಧಿಯಲ್ಲಿ ಭಜನೆಗಳಿಂದ ಧನಾತ್ಮಕ ಶಕ್ತಿ, ಚಿಂತನೆ ಸಂಚಲನವಾಗುತ್ತದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ ದೇವಾಲಯಗಳು ನಮ್ಮ ಪ್ರಕೃತಿಯ ಕೇಂದ್ರಗಳು ಇವುಗಳ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಬೇಕು ಎಂದು ಕರೆ ನೀಡಿದರು.

ಮಂಗಳೂರು ಪದವಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ವಕೀಲರಾದ ರವಿ ಪ್ರಸನ್ನ ಸಿ.ಕೆ, ಶುಭಾ ಶಂಸನೆ ಮಾಡಿದರು.

ಬ್ರಹ್ಮ ಕಲಶೋತ್ಸವ ಗೌರವಾಧ್ಯಕ್ಷರಾದ ಡಾ|.ಎನ್.ಭಾಸ್ಕರ್ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆಡಳಿತ ಮೊಕ್ತೇಸರರಾದ ಸುಬ್ರಹ್ಮಣ್ಯ ಶೆಟ್ಟಿಗಾರ ಪ್ರಾಸ್ತಾವಿಕ ದೂರುಗಳನ್ನಾಡಿ ವಿಶಾಲವಾದ ಸರೋವರದ ಮಧ್ಯೆ ಇರುವ ದೇವಾಲಯ ಭಕ್ತರ ಮತ್ತು ಅಭಿವೃದ್ಧಿ ಯೋಜನೆ ರೂಪಿಸಿದ್ದು ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು. ಶ್ರೀ ಮಹಾಲಿಂಗೇಶ್ವರ ಸಾಂಸ್ಕ್ರತಿಕ ಸಂಘದ ಅಧ್ಯಕ್ಷರಾದ ಪ್ರಶಾಂತ ದೇವಾಡಿಗ ಉಪಸ್ಥಿತರಿದ್ದರು. ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವರಿಗೆ ರಜತ ಪ್ರಭಾವಳಿ ಕೊಡುಗೆಯಾಗಿ ನೀಡಿದ ಶಿಲ್ಪಿ ರಾಜಗೋಪಾಲ ಆಚಾರ್ಯ, ದೇಣಿಗೆಯಿತ್ತ ರವಿ ಪ್ರಸನ್ನ ಸಿಕೆ ಇವರುಗಳನ್ನು ಸನ್ಮಾನಿಸಲಾಯಿತು.
ನೃತ್ಯ ಕಲೆಯಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆಗೈದ ಸ್ಥಳೀಯ ಪ್ರತಿಭೆ ರೇಷ್ಮಾ ಕುಮಾರಿಯನ್ನು ಗೌರವಿಸಲಾಯಿತು.

ರವೀಂದ್ರ ದೊಡ್ಮನೆ ಸ್ವಾಗತಿಸಿದರು. ಶಿವಾನಂದ ದೊಡ್ಡೋಣಿ ಕಾರ್ಯಕ್ರಮ ನಿರೂಪಿಸಿ ಅನುಷ್ ವಂದಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಚಂಡಿಕಾಯಾಗ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, ರಂಗಪೂಜೆ ನಡೆಯಲಿದೆ. ರಾತ್ರಿ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಉತ್ತರ ಕನ್ನಡ ಇವರಿಂಧ ಮಾಗಧವಧೆ-ರಾಜ ರುದ್ರಕೋಪ ಯಕ್ಷಗಾನ ನಡೆದವು.

Exit mobile version