Kundapra.com ಕುಂದಾಪ್ರ ಡಾಟ್ ಕಾಂ

ಕಂಡ್ಲೂರು-ಸೌಕೂರು ರಸ್ತೆಗಿಲ್ಲ ದುರಸ್ತಿ ಭಾಗ್ಯ. ಗ್ರಾಮಸ್ಥರ ಆಕ್ರೋಶ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ತಾಲೂಕಿನ ಪ್ರಸಿದ್ಧ ಸೌಕೂರು ದೇವಸ್ಥಾನಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಕಾವ್ರಾಡಿ ಹಾಗೂ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ದುರಸ್ತಿ ಕಾಣದೇ ವರ್ಷಗಳೇ ಸಂದಿದ್ದು ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚಾರವೇ ದುಸ್ತರವಾಗಿದ್ದು ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಸಮಸ್ಯೆಯ ಪರಿಹಾರಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.

ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ವಾಹನ ಸವಾರರು ಪರಿತಪಿಸುವಂತಾಗಿದೆ. ಕಂಡ್ಲೂರಿನಿಂದ ಸೌಕೂರಿಗೆ ಸಾಗುವ ಸುಮಾರು 1.5 ಕಿ.ಮೀ ಡಾಮರು ರಸ್ತೆ ಸಂಪೂರ್ಣ ಮಾಯವಾಗಿ ಕೆಸರು ಮಯವಾಗಿದೆ. ಮಳೆಗಾಳದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಈ ಹಿಂದೆ ಬಸ್ಸು ಸಂಪರ್ಕವನ್ನು ಹೊಂದಿದ್ದು ರಸ್ತೆಯ ಅವ್ಯವಸ್ಥೆಯನ್ನು ಕಂಡು ಕಳೆದ ಒಂದೂವರೆ ವರ್ಷದಿಂದ ಬಸ್ಸುಗಳೂ ಸಹ ಬರುವುದನ್ನು ನಿಲ್ಲಿಸಿವೆ. ಇಲ್ಲಿನ ಜನರು ಮುಖ್ಯ ರಸ್ತೆಯನ್ನು ತಲುಪಬೇಕಾದರೆ ನಡೆದುಕೊಂಡೇ ಸಾಗಬೇಕಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ಕಷ್ಟಕರವಾದರೆ ರಸ್ತೆ ಸಮಸ್ಯೆಯಿಂದ ಆಟೋ ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಇಷ್ಟು ಪಡುತ್ತಿಲ್ಲ.

ಈವರೆಗೆ ಜನಪ್ರತಿನಿಧಿಗಳು ರಸ್ತೆ ದುರಸ್ತಿಯ ಬಗ್ಗೆ ತಲೆಕೆಡಿಸಿಕೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜೂನ್ ತಿಂಗಳ ಕೊನೆಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು. ಗ್ರಾಮಸ್ಥರ ಸಮಸ್ಯೆಯನ್ನು ಕಂಡು ಸ್ಥಳೀಯ ಕಾವ್ರಾಡಿ ಗ್ರಾ.ಪಂ. ಹೊಂಡ ಗುಂಡಿಗಳಿಗೆ ಜಲ್ಲಿ ಹುಡಿಗಳನ್ನು ಹಾಕುವ ಮೂಲಕ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ ಹಾಗೆಯೇ ಸೌಕೂರು ಟೆಂಪಲ್ ಫ್ರೆಂಡ್ಸ್ನವರು ರಸ್ತೆ ಹೊಂಡಗಳನ್ನು ಮುಚ್ಚುವಲ್ಲಿ ಶ್ರಮಿಸಿದ್ದರು. ಆದರೆ ಈ ಭಾಗದ ರಸ್ತೆ ಶಾಶ್ವತ ಕಾಂಕ್ರೀಟೀಕರಣ ಆದರೆ ಮಾತ್ರ ಪರಿಹಾರ ಕಾಣಲು ಸಾಧ್ಯವಿದೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version