Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಾಜಿ ಪುರಸಭಾ ಅಧ್ಯಕ್ಷರಿಂದ ಸಂಸದರ ಅನುದಾನ ದುರ್ಬಳಕೆ?

ಖಾಸಗಿ ರಸ್ತೆಗೆ ಸರಕಾರದ ದುಡ್ಡು ದುರ್ಬಳಕೆ!

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಸರಕಾರಿ ಕಾಮಗಾರಿಗಳಿಗೆ ವಿನಿಯೋಗವಾಗಬೇಕಿದ್ದ ಸಂಸದರ ಅನುದಾನ ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರೋರ್ವರ ಮನೆಯ ಖಾಸಗಿ ರಸ್ತೆಗೆ ವಿನಿಯೋಗಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಕಾಮಗಾರಿಗೆ ಅನುಮೋದನೆ ನೀಡಿರುವ ಸ್ಥಳದಲ್ಲಿ ಕಾಮಗಾರಿ ನಡೆಸದೇ ಮನೆಗೆ ತೆರಳುವ ಖಾಸಗಿ ರಸ್ತೆಗೆ ಇಂಟರ್‌ಲಾಕ್ ಅಳವಡಿಸಿಕೊಂಡು ಸರಕಾರದ ಕಣ್ಣಿಗೆ ಮಣ್ಣೆರೆಚಲು ಹೊರಟಿರುವ ಬಗ್ಗೆ ಕುಂದಾಪ್ರ ಡಾಟ್ ಕಾಂಗೆ ಮಾಹಿತಿ ಲಭ್ಯವಾಗಿದೆ.

ಕುಂದಾಪುರದ ವೆಸ್ಟ್ ಬ್ಲಾಕ್ ರೋಡ್ (ದತ್ತಾತ್ರೆಯ ನಗರ ರಸ್ತೆ) ಬಳಿ ಕುಂದಾಪುರದ ಮಾಜಿ ಪುರಸಭಾ ಅಧ್ಯಕ್ಷ, ಹಾಲಿ ಸದಸ್ಯ ಮೋಹನದಾಸ್ ಶೆಣೈ ಅವರ ಮನೆಗೆ ಹೋಗುವ ಖಾಸಗಿ ಕಾಲುದಾರಿಗೆ ಇಂಟರ್‌ಲಾಕ್ ಅಳವಡಿಕೆಗೆ ಉಡುಪಿ ಚಿಕ್ಕಮಂಗಳೂರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಸರಕಾರದ ಹಣ ಪೋಲು ಮಾಡುತ್ತಿರುವ ಕುರಿತು ಕುಂದಾಪುರ ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಕೆ. ಕೇಶವ ಭಟ್ ಅವರು ಉಡುಪಿ ಜಿಲ್ಲಾಧಿಕಾರಿಯವರಿಗೆ ದೂರು ಅರ್ಜಿ ನೀಡಿದ್ದಾರೆ.

ಮಂಜುರಾತಿ ಪಡೆದ ಸ್ಥಳ – ಕಾಮಗಾರಿ ಪಡೆದ ಸ್ಥಳ ಬೇರೆ ಬೇರೆ:
ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು 2014-15 ನೇ ಸಾಲಿನ ಸಂಸದರ ಸ್ಥಳೀಯ ಪ್ರಾದೇಶಾಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ದತ್ತಾತ್ರೇಯ ನಗರ ರಸ್ತೆಗೆ ಇಂಟರ್‌ಲಾಕ್ ಅಳವಡಿಕೆಗೆ ಪ್ರಸ್ತಾಪಿಸಲ್ಪಟ್ಟಿದ್ದು, ಅದನ್ನು ಬೇರೆ ಯಾವುದೋ ಸ್ಥಳದಲ್ಲಿ ಕಾಮಗಾರಿ ಕೈಗೊಂಡಿರುವುದು ಪೋಟೋ ದಾಖಲೆಯನ್ನು ಪರಿಶೀಲಿಸಿದಾಗ ಸ್ಪಷ್ಟವಾಗಿ ತಿಳಿದು ಬಂದಿರುವ ಹಿನ್ನಲೆಯಲ್ಲಿ ಸಂಸದರ ಅನುದಾನದಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಯು ಖಾಸಗಿ ರಸ್ತೆಯಲ್ಲಿ ನಡೆಯುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ಹಾಗೂ ಅಂದಾಜು ಪಟ್ಟಿಯಲ್ಲಿ ಮಂಜೂರಾತಿ ನೀಡಲಾದ ಸ್ಥಳದಲ್ಲಿ ಕಾಮಗಾರಿಯನ್ನು ಕೈಗೊಳ್ಳದೇ ಬೇರೆ ಸ್ಥಳದಲ್ಲಿ ಕಾಮಗಾರಿಯನ್ನು ಕೈಗೊಂಡಿರುವುದಾಗಿ ದೂರು ಅರ್ಜಿಯಲ್ಲಿ ತಿಳಿದು ಬಂದಿರುವುದರಿಂದ ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜೀನಿಯರ್‌ರವರಿಗೆ ಸೂಚಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ವರದಿ ನೀಡಲು ಡಿಸಿ ಸೂಚನೆ:
ಅಂದಾಜು ಪಟ್ಟಿಯನ್ನು ತಯಾರಿಸಿ ಕಾಮಗಾರಿಯನ್ನು ನಡೆಸಲು ಉದ್ದೇಶಿಸಿರುವ ಸ್ಥಳದ ಪೋಟೋವನ್ನು ಈ ಹಿಂದೆ ಇಲಾಖೆಗೆ ನೀಡಲಾಗಿತ್ತು. ಕುಂದಾಪುರ ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಕೆ. ಕೇಶವ ಭಟ್ ಅವರು ದೂರು ಅರ್ಜಿಯ ಜೊತೆಗೆ ನೀಡಿದ ಫೋಟೊ ದಾಖಲೆಗಳನ್ನು ಪರಿಶೀಲಿಸಿದಾಗ ಕಾಮಗಾರಿ ಬೇರೆಡೆ ನಡೆಯುತ್ತಿರುವುದು ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿರುವುದರಿಂದ ಕಾಮಗಾರಿ ನಡೆಯುತ್ತಿರುವ ಸ್ಥಳ ಖಾಸಗಿ ಸ್ಥಳವೇ? ಎಂದು ಪರಿಶೀಲಿಸಿ, ಖಾಸಗಿ ಸ್ಥಳವಾಗಿದ್ದಲ್ಲಿ ಅದನ್ನು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿ, ದೃಡ ಪತ್ರ ಪಡೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಖಾಸಗಿ ರಸ್ತೆಯಲ್ಲ:
ವೆಸ್ಟ್ ಬ್ಲಾಕ್ ರೋಡ್ ಬಳಿಯ ರಸ್ತೆಯನ್ನು ಈಗಾಗಲೇ ಸರಕಾರಕ್ಕೆ ಬಿಟ್ಟುಕೊಡಲಾಗಿದೆ. ಈ ಬಗ್ಗೆ ದಾಖಲೆಗಳೂ ಇದೆ. ಇಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ. ಇಲ್ಲಿ ನಾಲ್ಕೈದು ಮನೆಗಳಿರುವುದರಿಂದ ಇಂಟರ್‌ಲಾಕ್ ಅಳವಡಿಸಿ ರಸ್ತೆ ನಿರ್ಮಿಸಲಾಗಿದೆ. – ಮೋಹನದಾಸ್ ಶೆಣೈ, ಹಾಲಿ ಪುರಸಭಾ ಸದಸ್ಯ

Exit mobile version