Kundapra.com ಕುಂದಾಪ್ರ ಡಾಟ್ ಕಾಂ

ಗಿಳಿಯಾರು ರಸ್ತೆಯಲ್ಲಿ ಹೊಂಡ: ಬಾಳೆಗಿಡ ನೆಟ್ಟು ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಪಂಚಾಯತ್ ವ್ಯಾಪ್ತಿಯ ಗಿಳಿಯಾರು ಪ್ರಮುಖ ಸಂಪರ್ಕ ರಸ್ತೆಯಲ್ಲಿ ಬೃಹತ್ ಹೊಂಡಗಳು ಉಂಟಾಗಿ ನೀರು ತುಂಬಿಕೊಂಡಿದ್ದರೂ ಯಾವುದೇ ಕ್ರಮವನ್ನು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಗಮನಹರಿಸದಿರುವುದನ್ನು ಖಂಡಿಸಿ ಗಿಳಿಯಾರು ಗ್ರಾಮಸ್ಥರು ರಸ್ತೆ ಮೇಲೆ ಬಾಳೆಗಿಡ ನೆಟ್ಟು ಪ್ರತಿಭಟಿಸಿದರು.

ಕೋಟದಿಂದ ಬೇಳೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯ ಅಲ್ಲಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರ ದುಸ್ತರವೆನಿಸಿದೆ. ಇಲ್ಲಿನ ಸಮಸ್ಯೆ ಕುರಿತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಅವರು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತ್ರಿಶೂಲ್ ಬಳಗದ ಅಶೋಕ್ ಶೆಟ್ಟಿ ಮಾತನಾಡಿ, ನಾವು ಈ ರಸ್ತೆಯ ಬಗ್ಗೆ ಸಾಕಷ್ಟು ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ ಮನವಿಯನ್ನು ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಯಾರೂ ಕೂಡ ಈ ಬಗ್ಗೆ ಗಮನಹರಿಸಿಲ್ಲ. ಇವತ್ತು ನಾವು ಪ್ರತಿಭಟನೆ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವನ್ನ ಮಾಡುತ್ತಿದ್ದೇವೆ. ಈ ಎಚ್ಚರಿಕೆಗೂ ಬಗ್ಗದಿದ್ದಲ್ಲಿ ನಾವು ಉಗ್ರಪ್ರತಿಭಟನೆಯನ್ನು ಮಾಡುತ್ತೇವೆ. ಅದು ಹೇಗೆಂದರೆ ನಾವು ಕರಸೇವೆ ಮೂಲಕ ಈ ರಸ್ತೆಯನ್ನ ದುರಸ್ತಿ ಮಾಡುತ್ತೇವೆ. ಸಾರ್ವಜನಿಕರು ರಸ್ತೆಯನ್ನ ದುರಸ್ತಿಗೊಳಿಸಿದ್ದೇ ಆದ್ದಲ್ಲಿ ಅದು ಜನಪ್ರತಿನಿಧಿಗಳಿಗೆ ನಾಚಿಕೇಗೇಡಿನ ಸಂಗತಿ. ಸಾರ್ವಜನಿಕರಿಂದ ಕೆಲಸ ಮಾಡುತ್ತೇನೆಂದು ಓಟು ಪಡೆದು ಗೆದ್ದು ಕನಿಷ್ಟ ರಸ್ತೆ ಮಣ್ಣನ್ನು ಹಾಕುವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲವೆಂದಾದಲ್ಲಿ ಜನಪ್ರತಿನಿಧಿಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನಾದರೂ ಈ ರಸ್ತೆಗೆ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡಬೇಕಾಗಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಸ್ ಸಿಬ್ಬಂದಿಯೋರ್ವರು ಮಾತನಾಡಿ, ಈ ರಸ್ತೆಯೆನ್ನುವುದು ಕುಲಗೆಟ್ಟುಹೋಗಿದೆ. ವಯಸ್ಸಾದವರು ಬಸ್ಸಿನಲ್ಲಿ ಬರುವಾಗ ಬಹಳಷ್ಟು ಸಮಸ್ಯೆಗಳಾಗುತ್ತದೆ. ಘನವಾಹನಗಳು ಬರುವ ಸಂದರ್ಭ ಬೈಕ್ ಸವಾರರು ಬದಿಗೆ ಹೋಗಲು ಸಾಧ್ಯವಿಲ್ಲ. ಮತ್ತು ತುಂಬಾ ಬದಿಗೆ ಹೋದಲ್ಲಿ ಅವರು ರಸ್ತೆ ಮೇಲಿನ ಹೊಂಡಕ್ಕೆ ಬೀಳುವ ಸಾಧ್ಯತೆಗಳಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಬಹಳಷ್ಟು ದುಸ್ತರವಾಗಿದೆ. ಮಳೆಗಾಲದಲ್ಲಿ ನೀರು ತುಂಬಿಕೊಂಡ ಸಂದರ್ಭ ಎಲ್ಲಿ ಬೃಹತ್ ಹೊಂಡಗಳಿವೆ ಎನ್ನುವುದು ಗೊತ್ತಾಗುವುದಿಲ್ಲ. ಆದ್ದರಿಂದ ತಕ್ಷಣ ಈ ರಸ್ತೆಯ ಹೊಂಡವನ್ನು ಮುಚ್ಚಲು ತುರ್ತು ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಗಿರೀಶ್ ನಾಯಕ್, ವಿಜಯ್ ಶೆಟ್ಟಿ, ಅರುಣ್ ಶೆಟ್ಟಿ ಪಡುಮನೆ, ಕಿರಣ್ ಆಚಾರ‍್ಯ, ವಿನಯ್ ಪುತ್ರನ್, ಶಶಿಧರ್, ಸಂದೇಶ್ ಮನಿಷ್, ವಿಕಾಸ್ ಶರತ್ ಆಚಾರ‍್ಯ, ವಸಂತ್ ಗಿಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version