Kundapra.com ಕುಂದಾಪ್ರ ಡಾಟ್ ಕಾಂ

ಎರಡು ದಶಕ ಕಳೆದರೂ ಈಡೇರದ ಹಟ್ಟಿಕುದ್ರು ಸಂಪರ್ಕ ಸೇತುವೆ ಕನಸು

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಹಟ್ಟಿಕುದ್ರು ಜನರ ಬಹುದಿನಗಳ ಕನಸು ಹಟ್ಟಿಕುದ್ರು-ಬಸ್ರೂರು ಸಂಪರ್ಕ ಸೇತುವೆ ನೆನೆಗುದಿಗೆ ಬಿದ್ದಿದೆ. ಮೂಲಭೂತ ಸೌಕರ್ಯಗಳಿಗಾಗಿ ಬಸ್ರೂರನ್ನೇ ಅವಲಂಬಿಸಿರುವ ಹಟ್ಟಿಕುದ್ರು ಕಳೆದ ಎರಡು ದಶಕಗಳಿಂದ ಬಸ್ರೂರು-ಸಂಪರ್ಕ ಸೇತುವೆ ನಿರ್ಮಿಸುವಂತೆ ಜನಪ್ರತಿನಿಧಿಗಳಲ್ಲಿ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೆ ಯಾವುದೇ ಸ್ಪಂದನ ದೊರಕದೇ ಸಮಸ್ಯೆಗಳ ಸುಳಿಯಲ್ಲೇ ಜೀವನ ಸಾಗಿಸಬೇಕಾದ ದುಸ್ತರ ಸ್ಥಿತಿ ನಿರ್ಮಾಣವಾಗಿದೆ

ಹುಟ್ಟಿಕುದ್ರು ದ್ವೀಪ:
ಕುಂದಾಪುರ ಸಮೀಪ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಟ್ಟಿಕುದ್ರು ದ್ವೀಪವಾಗಿದೆ. ಪ್ರಾಕೃತಿಕವಾಗಿ ಸಮೃದ್ಧವಾಗಿದ್ದು, ಸುಮಾರು ೩೫೦ರಷ್ಟು ಮನೆಗಳು, ಮೂರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. ಕುಂದಾಪುರ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಟ್ಟಿಕುದ್ರು ಜನತೆಗೆ ನೀಡಿದ ಭರವಸೆಯ ಹಿನ್ನಲೆಯಲ್ಲಿ ಸರಕಾರದ ಗಮನ ಸೆಳೆದು ಹಟ್ಟಿಕುದ್ರುವಿಗೆ ಸಂಪರ್ಕ ಸೇತುವೆ ನಿರ್ಮಿಸಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದರು. ಆದರೆ ಈ ಯೋಜನೆ ಹಟ್ಟಿಕುದ್ರು ಮತ್ತು ಹಟ್ಟಿಯಂಗಡಿಯ ನಡುವಿನ ಸಂಪರ್ಕ ಸೇತುವೆಯಾಗಿ ಆ ಭಾಗದಲ್ಲಿ ಸಂಚರಿಸುವವರಿಗೆ ವರದಾನವಾಗಿತ್ತು.

ಎಲ್ಲದಕ್ಕೂ ಬಸ್ರೂರು ಆಸರೆ:
ಸುತ್ತಲೂ ಜಲಾವ್ರತಗೊಂಡಿರುವ ಹಟ್ಟಿಕುದ್ರುವಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಜನರ ಸಂಪರ್ಕ, ಸಂಚಾರವೆಲ್ಲ ಬಸ್ರೂರನ್ನು ಅವಲಂಬಿಸಿದೆ. ಹಟ್ಟಿಕುದ್ರು ಹಾಗೂ ಬಸ್ರೂರು ನಡುವೆ ಅಂತರ ಕೇವಲ ಮುನ್ನೂರು ಮೀಟರ್ ದೂರ. ಹಟ್ಟಿಕುದ್ರುವಿನ ಜನತೆ ದೈನಂದಿನ ಅಗತ್ಯತೆಗಳಾದ ಪಡಿತರ, ಗೃಹಬಳಕೆ, ಆಸ್ಪತ್ರೆ, ಶಿಕ್ಷಣಕ್ಕಾಗಿ ಬಸ್ರೂರಿಗೆ ಬರಬೇಕು. ಅಲ್ಲದೇ ಯಾರಾದರೂ ಮರಣಿಸಿದ ಸಂದರ್ಭ ಅವರ ಅಂತ್ಯಕ್ರಿಯೆಯನ್ನು ಮಾಡಲು ಬಸ್ರೂರು ಅಥವಾ ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ.

ಜೀವಭಯದಲ್ಲಿ ಓಡಾಟ:
ಮಳೆಗಾಲದ ನಾಲ್ಕು ತಿಂಗಳು ಕಳೆಯುವುದೆಂದರೆ ಸಾಹಸವೇ ಸರಿ. ಬಸ್ರೂರನ್ನು ಸಂಪರ್ಕಿಸಲು ದೋಣಿಯನ್ನೇ ಅವಲಂಬಿಸಿರುವುದರಿಂದ ಪ್ರತಿ ನಿತ್ಯ ಹಟ್ಟಿಕುದ್ರುವಿನಿಂದ ಹಾಲಾಡಿ ಹೊಳೆಯನ್ನು ದಾಟಿ ಜೀವ ಭಯದಲ್ಲಿ ಬಸ್ರೂರು ತಲುಪಬೇಕಾದ ಅನಿವಾರ್ಯತೆ ಇದೆ. ಸುಮಾರು ೧೫೦ರಿಂದ ೧೬೦ ಮಂದಿ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಈ ಹೊಳೆಯನ್ನು ದೋಣಿ ಮೂಲಕ ದಾಟಿಕೊಂಡು ಬಸ್ರೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿನ ಜನರ ಸ್ಥಿತಿ ದೇವರಿಗೆ ಪ್ರೀತಿ. ಮಳೆಗಾಳಿ ಹೆಚ್ಚಿದಲ್ಲಿ ದೋಣಿ ನಡೆಸಲು ಸಾಧ್ಯವಿಲ್ಲ. ವಿಧ್ಯಾರ್ಥಿಗಳಿಗೆ ಶಾಲಾ ಕಾಲೇಜು ತಲುಪಲು ಸಾಧ್ಯವಿಲ್ಲ. ಅಲ್ಲದೇ ಕೃಷಿ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಬಸ್ರೂರನ್ನು ಸೇರಲು ನಿತ್ಯ ತ್ರಾಸಪಡಬೇಕಾದ ದುಸ್ಥಿತಿ.

25 ಕಿ.ಮೀ ಪ್ರಯಣ ದುಸ್ತರ:
ಹಟ್ಟಿಕುದ್ರು – ಹಟ್ಟಿಯಂಗಡಿ ಸಂಪರ್ಕ ಸೇತುವೆ ಮೂಲಕ ಹಟ್ಟಿಯಂಗಡಿಗೆ ಹೋಗಿ ಅಲ್ಲಿಂದ ತಲ್ಲೂರು-ಕುಂದಾಪುರ ಮಾರ್ಗವಾಗಿ ಸುತ್ತು ಬಳಸಿ ಬಸ್ರೂರು ತಲುಪಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದು. ಕೇವಲ ಮೂನ್ನೂರು ಮೀಟರ್ ದೂರವಿರುವ ಬಸ್ರೂರನ್ನು ತಲುಪಲು ೨೫ ಕಿ. ಮೀ ಸುತ್ತು ಬಳಸಿ ಪ್ರಯಣಿಸಿಸುವುದು ಕಷ್ಟಸಾಧ್ಯವಾದ ಹಿನ್ನಲೆಯಲ್ಲಿ ಇಲ್ಲಿನ ಜನತೆ ಅಪಾಯವನ್ನು ಲೆಕ್ಕಿಸಿದೇ ದೋಣಿಯನ್ನು ಆಶ್ರಯಿಸಿದ್ದಾರೆ. ಆದುದರಿಂದ ಹಟ್ಟಿಕುದ್ರು – ಬಸ್ರೂರು ಸಂಪರ್ಕ ಸೇತುವೆ ನಿರ್ಮಾಣವಾದರೆ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿ ನೆಮ್ಮದಿ ಜೀವನ ನಡೆಸಬಹುದು ಇಲ್ಲವಾದಲ್ಲಿ ಬದುಕು ದುಸ್ತರವಾಗಿ ಅಭದ್ರತೆಯಿಂದ ನಿತ್ಯ ನರಳುವಂತಾಗುತ್ತದೆ. ಮೂಲ ಸೌಕರ್ಯದ ಕೊರತೆಯಿಂದ ಬಹಳಷ್ಟು ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಟ್ಟಿಕುದ್ರುವಿನ ಜನರಿಗೆ ಆಸರೆಯಾಗಬೇಕಿದೆ.

ಅಂಬಿಗನಿಲ್ಲದಿದ್ದರೆ ವಿದ್ಯಾರ್ಥಿಗಳಿಗೆ ರಜೆ:
ಹಟ್ಟಿಕುದ್ರುವಿನಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಬೇಕಾದರೆ ಬಸ್ರೂರಿಗೆ ಬರಲೇಬೇಕು. ಆತ್ತ ಹಟ್ಟಿಯಂಗಡಿ ಮಾರ್ಗದ ಮೂಲಕ ಹೋಗುವುದೆಂದರೆ ಅದು ಸುತ್ತುಗಟ್ಟಿದ ಮಾರ್ಗ. ಕುಂದಾಪುರದ ಕಾಲೇಜುಗಳಿಗೆ ಹೋಗಬೇಕಾದರೆ ದೋಣಿ ಮೂಲಕ ಬಸ್ರೂರು ತಲುಪಿ ಅಲ್ಲಿಂದ ಕುಂದಾಪುರ ತಲುಪುತ್ತಾರೆ. ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಬಸ್ರೂರಿನಲ್ಲಿರುವ ಫ್ರೌಡಶಾಲೆ, ಪ. ಪೂ. ಕಾಲೇಜು, ಪದವಿ ಕಾಲೇಜುಗಳಿಗೆ ಹೋಗುತ್ತಾರೆ. ಅವರೆಲ್ಲರೂ ದೋಣಿಯ ಮೂಲಕವೇ ಬಸ್ರೂರು ತಲುಪಬೇಕು. ದೋಣಿ ನಡೆಸುವ ಅಂಬಿಗನಿಗೆ ಅಸೌಖ್ಯವಾದರೆ ಅವತ್ತು ವಿದ್ಯಾರ್ಥಿಗಳಿಗೆ ರಜೆ.

Exit mobile version