Kundapra.com ಕುಂದಾಪ್ರ ಡಾಟ್ ಕಾಂ

ಕರ್ಣಾಟಕ ಬ್ಯಾಂಕ್‌ ಗೆ ಐಎಸ್‌ಒ 27001: 2013 ಪ್ರಮಾಣ ಪತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಬ್ರಿಟನ್‌ ಮೂಲದ ಮೆ| ಎನ್‌ಕ್ಯುಎ ಯುಕೆಎಎಸ್‌ ಸಂಸ್ಥೆಯಿಂದ ಐಎಸ್‌ಒ 27001:2013 ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ.

ಸಂಸ್ಥೆಯ ನಿರ್ದೇಶಕ ಗಣೇಶ್‌ ಶಾಸ್ತ್ರಿ ಅವರು ಈ ಪ್ರಮಾಣ ಪತ್ರವನ್ನು ಬ್ಯಾಂಕಿನ ಆಡಳಿತ ನಿರ್ದೇಶಕ ಪಿ. ಜಯರಾಂ ಭಟ್‌ ಅವರಿಗೆ ಪ್ರದಾನ ಮಾಡಿದರು. ಚೀಫ್‌ ಜನರಲ್‌ ಮ್ಯಾನೇಜರ್‌ ಮಹಾಬಲೇಶ್ವರ ಎಂ.ಎಸ್‌., ಸೀನಿಯರ್‌ ಜನರಲ್‌ ಮ್ಯಾನೇಜರ್‌ ಪಿ. ಜೈರಾಂ ಹಂದೆ, ಜನರಲ್‌ ಮ್ಯಾನೇಜರ್‌ಗಳಾದ ಎನ್‌. ಉಪೇಂದ್ರ ಪ್ರಭು, ಡಾ| ಮೀರಾ ಎಲ್‌.ಬಿ. ಅರಾನ್ಹಾ, ರಘುರಾಮ, ಡಿಜಿಎಂಗಳಾದ ಅನಂತ ಪದ್ಮನಾಭ (ಐಟಿ ವಿಭಾಗ) ಮತ್ತು ಸುರೇಶ್‌ ಕೆ. (ಆರ್‌ಎಂಡಿ), ಚೀಫ್‌ ಮ್ಯಾನೇಜರ್‌ (ಸಿಐಎಸ್‌ಒ) ವಾದಿರಾಜ ಕೆ. ಉಪಸ್ಥಿತರಿದ್ದರು.

ಆತ್ಯಾಧುನಿಕ ಸೌಲಭ್ಯ ಕರ್ಣಾಟಕ ಬ್ಯಾಂಕ್‌ ಶೇ. 100 ಕೋರ್‌ ಬ್ಯಾಂಕಿಂಗ್‌ ಸೊಲ್ಯೂಶನ್‌ ವ್ಯವಸ್ಥೆ ಹೊಂದಿದೆ. 681ಕ್ಕೂ ಅಧಿಕ ಶಾಖೆಗಳು ಮತ್ತು 1,020ಕ್ಕೂ ಮಿಕ್ಕಿ “ಮನಿ ಪ್ಲಾಂಟ್‌’ ಎಟಿಎಂಗಳಿದ್ದು, ಇಂಟರ್‌ ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌, ಎಸ್‌ಎಂಎಸ್‌ ಬ್ಯಾಂಕಿಂಗ್‌ ಮುಂತಾದ ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಿದೆ. ಪ್ರಸ್ತುತ ಡಿಜಿ ಟಲ್‌ ಬ್ಯಾಂಕಿಂಗ್‌ನ ಈ ಯುಗದಲ್ಲಿ ಮಾಹಿತಿ ತಂತ್ರಜ್ಞಾನವು ವ್ಯವಹಾರದ ಪ್ರಮುಖ ಮೂಲಸೌಕರ್ಯವಾಗಿದೆ. ಹೊಸ ತಂತ್ರಜ್ಞಾನಗಳು ಗ್ರಾಹಕರಿಗೆ ಅತ್ಯಾಧುನಿಕ ಸೇವಾ ಸೌಲಭ್ಯಗಳನ್ನು ಒದಗಿಸುತ್ತವೆಯಾದರೂ ಈ ಅನುಕೂಲಗಳು ದುಬಾರಿ ಹಾಗೂ ಅಪಾಯಕಾರಿಯೂ ಆಗಿವೆ. ಜಗತ್ತಿನ ಯಾವುದೇ ಭಾಗದಿಂದ ದುಷ್ಕರ್ಮಿಗಳ ದಾಳಿಯನ್ನು ನಾವು ಅಲ್ಲಗಳೆಯುವಂತಿಲ್ಲ. ಇಂತಹ ಸನ್ನಿವೇಶದಲ್ಲಿ ಗ್ರಾಹಕರ ಹಿತಾಸಕ್ತಿಯನ್ನು ಕಾಪಾ
ಡಲು ಬ್ಯಾಂಕ್‌ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಆಡಳಿತ ನಿರ್ದೇಶಕ ಪಿ. ಜಯರಾಂ ಭಟ್‌ ಹೇಳಿದರು.

ಬ್ಯಾಂಕಿಂಗ್‌ ಉದ್ಯಮದಲ್ಲಿರುವ ಅತ್ಯುತ್ತಮ ಎನ್ನಲಾದ ಐಎಸ್‌ಎಂಎಸ್‌ ಚೌಕಟ್ಟನ್ನು ಅಂದರೆ ಐಎಸ್‌ಒ 27001 ಇದರ ಮಾರ್ಗಸೂಚಿಗಳನ್ನನುಸರಿಸಿ ಬ್ಯಾಂಕ್‌ ತನ್ನ ಸುರಕ್ಷತಾ ನೀತಿಗಳನ್ನು ಆಗಿಂದಾಗ್ಗೆ ಪುನರ್‌ ಪರಿಶೀಲಿಸುತ್ತಿದೆ. ಬ್ಯಾಂಕಿಗೆ ಈ ಹಿಂದೆ ತನ್ನ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿ ಐಎಸ್‌ಒ 27001:2015 ಪ್ರಮಾಣ ಪತ್ರವನ್ನು ನೀಡಲಾಗಿದ್ದು, ಇತ್ತೀಚೆಗೆ ಹೊಸ ಮಾನದಂಡಗಳನ್ವಯ ಐಎಸ್‌ಒ 27001:2013 ಪ್ರಮಾಣ ಪತ್ರವನ್ನು ಕೊಡಲಾಗಿದೆ ಎಂದು ವಿವರಿಸಿದರು.

Exit mobile version