ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ: ನಮ್ಮ ಸಂಸ್ಕೃತಿ ನಮಗೆ ಅರ್ಥವಾಗಬೇಕಾದರೆ ನಮ್ಮ ಭಾಷೆಯಲ್ಲಿ ನೆಲೆನಿಲ್ಲಬೇಕು. ಆಗ ಮಾತ್ರ ನಮ್ಮ ಪರಂಪರೆ ಸಂಸ್ಕೃತಿಯನ್ನು ನಾವು ಆಳವಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ನಟಿ ಪದ್ಮಶ್ರೀ ಪುರಸ್ಕೃತೆ ಬಿ. ಜಯಶ್ರೀ ಹೇಳಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಿಜಾರು ಎಐಇಟಿ ಆವರಣದಲ್ಲಿ ನಡೆದ ಟ್ರಡಿಶ್ನಲ್ ಡೇ-೨೦೧೯’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ವೈವಿಧ್ಯತೆಯನ್ನು ನಾವು ಈ ಕಾಲೇಜಿನಲ್ಲಿ ಜೀವಂತವಾಗಿ ನೋಡಬಹುದು. ಈ ರೀತಿ ವಿವಿಧ ಸಂಸ್ಕೃತಿಗಳ ಆನಾವರಣದಿಂದ ಸಂಸ್ಕೃತಿ ಮತ್ತು ಪರಂಪರೆಯ ಕೊಡುಕೊಳ್ಳುವಿಕೆಯಾಗಿ ನಮ್ಮ ಭವ್ಯ ಪರಂಪರೆ ನೂರ್ಕಾಲ ಮುಂದುವರೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಮಾತನಾಡಿ ನಮ್ಮ ಪೂರ್ವಜರು ನಮಗೆ ನೀಡಿರುವ ಸಂಸ್ಕೃತಿಯನ್ನು ನಾವು ಜಾಗರೂಕತೆಯಿಂದ ಮುದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಮೂಲ ಕರ್ತವ್ಯ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ನಂತರ ಕಲ್ಲಡ್ಕ ಗೊಂಬೆ ಕುಣಿತ, ಮಹಾರಾಷ್ಟ್ರ ಮತ್ತು ಗುಜರಾತ್ ಭಾಗದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲವಣಿ, ಕೋಯಿ, ಗರ್ಭ, ಗೋನ್ ದಂಡ ನೃತ್ಯ ನಡೆಯಿತು. ಕರಾವಳಿ ಸಾಂಸ್ಲೃತಿಕ ಕಾರ್ಯಕ್ರಮ ಜಾಗಂಟೆ, ಶಂಖ ವಾದನದೊಂದಿಗೆ ಪ್ರಾರಂಭವಾಗಿ ಬಲೀಂದ್ರ ಕರೆಯುವುದು, ಯಕ್ಷಗಾನ, ಆಟಿಕಳಂಜ, ಬ್ಯಾರಿ ದಫ್ಮುಟ್, ಕಂಬಳ, ಹುಲಿವೇಷದ ವಿಶೇಷತೆಗಳೊಂದಿಗೆ ಪ್ರದರ್ಶನಗೊಂಡಿತು. ನಂತರ ಕೇರಳದ ಕಲಾರಿ, ಮೋಹಿನಿಅಟ್ಟಂ, ಚೆಂಡೆ, ಕಥಕಳಿ, ಶೃಂಗಾರಿ ನೃತ್ಯದ ಮೂಲಕ ಕೇರಳದ ಪ್ರವಾಹದ ಚಿತ್ರಣವನ್ನು ಕಟ್ಟಿಕೊಡಲಾಯಿತು. ನಂತರ ಕುಡುಬಿ ನೃತ್ಯ, ಮಲ್ಲಕಂಬ, ಈಶಾನ್ಯ ರಾಜ್ಯಗಳ ನೃತ್ಯ, ಡ್ರಾಮ್ಜಾಮ್, ರೆಸ್ಟ್ ಆಫ್ ಇಂಡಿಯಾ, ಶ್ರೀಲಂಕಾದ ಸಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡವು.
ಕಾರ್ಯಕ್ರಮದಲ್ಲಿ ರಾಜೀವಗಾಂಧಿ ವಿಶ್ವವಿದ್ಯಾಲಯಕ್ಕೆ ಸಂಬಂಧ ಪಟ್ಟ ಕಾಲೇಜುಗಳಲ್ಲಿ ನಡೆದ ವಿವಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಂಜಿಗ್ ಟ್ರಸ್ಟಿ ವಿವೇಕ್ ಆಳ್ವ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ನಿರೂಪಿಸಿದರು. ಆರ್ಯವೇದ ವಿಭಾಗದ ಜಿತೇಂದ್ರ ಪೂಜಾರಿ ವಂದಿಸಿದರು.
*ಸಭಾ ಕಾರ್ಯಕ್ರಮದ ಮೊದಲು ಭವ್ಯ ಮೆರವಣಿಗೆಯಲ್ಲಿ ಕಂಬಳದ ಕೋಣಗಳು, ಕುದುರೆ, ಕಲ್ಲಡ್ಕ ಗೊಂಬೆ, ಕೇರಳ ತಂಡ, ಮಹಾರಾಷ್ಟ್ರ-ಗುಜರಾತ್ ತಂಡ, ಕೇರಳ ತಂಡ, ಕರಾವಳಿ ತಂಡ, ಈಶಾನ್ಯ ರಾಜ್ಯಗಳ ತಂಡ, ಶ್ರೀಲಂಕಾ ತಂಡ, ರೆಸ್ಟ್ ಆಫ್ ಇಂಡಿಯಾದ ಸಾಂಸ್ಕೃತಿಕ ತಂಡಗಳು ಸಾಗಿಬಂದವು.
*ವಿದ್ಯಾರ್ಥಿಗಳು ಕರಾವಳಿ, ಈಶಾನ್ಯ ರಾಜ್ಯಗಳ, ಕೇರಳ, ಉತ್ತರ ಕರ್ನಾಟಕ ಮತ್ತು ರೆಸ್ಟ್ ಆಫ್ ಇಂಡಿಯಾದ ಖಾದ್ಯಗಳನ್ನು ಸಿದ್ಧಪಡಿಸಿ ಪ್ರತ್ಯೇಕ ಸ್ಟಾಲ್ನಲ್ಲಿ ಮಾರಾಟ ಮಾಡಿದರು. *ವಿದ್ಯಾರ್ಥಿಗಳು ವಿವಿಧ ಶೈಲಿಯ ಆಹಾರವನ್ನು ಕಡಿಮೆ ದರದಲ್ಲಿ ಖರೀದಿ ಸಂಭ್ರಮಿಸಿದರು.
*ವಿವಿಧ ಸಂಪ್ರಾದಾಯದ ಉಡುಗೆ ತೊಡುಗೆಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಈಶಾನ್ಯದ ರಾಜ್ಯದ ಉಡುಗೆ, ಆಭರಣ, ಸಂಗೀತ ಸಂಬಂಧಿಸಿದ ಪರಿಕರಗಳು ಎಲ್ಲರ ಗಮನ ಸೆಳೆದವು.
* ಲಕ್ಕಿ ಚೇರ್ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ರಮದಾದ್ಯಂತ ವಿಜೇತರಿಗೆ ಬಹುಮಾನ ನೀಡಲಾಯಿತು.