Kundapra.com ಕುಂದಾಪ್ರ ಡಾಟ್ ಕಾಂ

ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಬಹುದೊಡ್ಡ ರೈಲ್ವೆ ಬೆಂಕಿ ಅವಘಡ

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ತಾಲೂಕಿನ ಕಂಬದಕೋಣೆ ಗೋವಿಂದ ದೇವಸ್ಥಾನದ ಬಳಿ ಶನಿವಾರ ತಡರಾತ್ರಿ ಬೆಂಕಿಗೆ ತುತ್ತಾಗಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ದೊಡ್ಡ ಬೆಂಕಿ ಅವಘಡವನ್ನು ತಪ್ಪಿಸುವಲ್ಲಿ ಸ್ಥಳೀಯ ಯುವಕರ ಸಮಯ ಪ್ರಜ್ಞೆ ಮತ್ತು ಕಾರ್ಯತತ್ಪರತೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದೆ.

ಕೊಂಕಣ್ ರೈಲ್ವೆ ವಿಭಾಗದಲ್ಲಿ ಮೊದಲ ಭಾರಿಗೆ ಆದ ರೈಲು ಬೆಂಕಿ ಅವಘಡದ ಬಗ್ಗೆ ತಡರಾತ್ರಿಯಲ್ಲಿ ಹರಸಾಹಸಪಟ್ಟು ಬೆಂಕಿ ನಂದಿಸಲು ಶ್ರಮಿಸಿದ್ದ ಯುವಕರ ತಂಡವನ್ನು ಕುಂದಾಪ್ರ ಡಾಟ್ ಕಾಂ ಸಂಪಾದಕರು ಸಂದರ್ಶಿಸಿದ್ದು, ಅವರು ತಡರಾತ್ರಿ ಘಟನೆಯ ವೇಳೆ ಬೆಂಕಿ ನಂದಿಸಿದ ಬಗೆಯನ್ನು ನಿಧಾನವಾಗಿ ಬಿಚ್ಚಿಟ್ಟರು.

ಘಟನೆಯ ಬಗ್ಗೆ ಯುವಕರು ವಿವರಿಸಿದ್ದು ಹೀಗೆ:
ರಾತ್ರಿ 1:15ರ ಹೊತ್ತಿಗೆ ಒಮ್ಮೆಲೇ ಜನರ ಕೂಗಾಟ ಕೇಳಿಸಿತು. ಅದರ ಬೆನ್ನಲ್ಲೇ ಮನೆಗಳ ದನಕರುಗಳು ಕೂಗಿಕೊಂಡುವು. ಎಚ್ಚರಗೊಂಡ ನಿವಾಸಿಗಳಿಗೆ ರೈಲಿನ ಒಂದು ಬೋಗಿಯ ಭಾಗ ಹೊತ್ತಿ ಉರಿಯುತ್ತಿರುವುದು ಗೋಚರಿಸಿತು. ಇಕ್ಕಡೆಯ ಎರಡೂ ಬಾಗಿಲುಗಳಿಂದ ಬೆಂಕಿ ಹೊರಸೂಸುತ್ತಿತ್ತು. ಸುತ್ತಲಿನ ಹದಿನೈದೂ ಮನೆಗಳ 25ರಷ್ಟು ಯುವಕರು ಹೊರಗೋಡಿ ಬಂದರು. ಹರ್ಕೇರಿಮನೆ ಮಂಜುನಾಥ ದೇವಾಡಿಗ ಉರಿಯುತ್ತಿರು ಬೋಗಿಯ ಬಳಿಗೆ ಓಡಿ ಅದರಲ್ಲಿ ಇದ್ದ ಎಲ್ಲರನ್ನು ಹೊರ ಬರಲು ಸಹಾಯ ಮಾಡಿದರು, ಕೆಲವರು ಪ್ರಯಾಣಿಕರ ಸಾಮಾಗ್ರಿಗಳನ್ನು ಹೊರತರಲು ನೆರವಾದೆವು. ಸುದೈವವಶಾತ್ ರೈಲು ಧಾರಾಳ ನೀರು, ವಿದ್ಯುತ್ ಪಂಪ್ ಇರುವ ಹರ್ಕೆರೆಮನೆ, ಕಬ್ಬನಗದ್ದೆಮನೆ ಬಳಿ ನಿಂತಿತ್ತು. ಹರ್ಕೆರೆಮನೆ ಮಂಜು ದೇವಾಡಿಗ, ರಮೇಶ ದೇವಾಡಿಗ ಪೈಪುಗಳನ್ನು ಜೋಡಿಸಿ, ಪಂಪು ಚಾಲನೆ ಮಾಡಲಾಯಿತು. ರಮೇಶ ದೇವಾಡಿಗ, ಧರ್ಮೇಂದ್ರ ದೇವಾಡಿಗ, ಶ್ರೀನಿವಾಸ ದೇವಾಡಿಗ, ನಾಗೇಂದ್ರ ದೇವಾಡಿಗ, ಹೊಸಮನೆ ನಾಗ ದೇವಾಡಿಗ ನೀರು ಹಾಯಿಸಿ ಬೆಂಕಿಯನ್ನು ಶಮನಗೊಳಿಸತೊಡಗಿದರು. ಹತ್ತಿರದ ಬೋಗಿಗಳಿಗೆ ಬೆಂಕಿ ಹರಡುವುದನ್ನ ತಡೆದರು. ಸಂದೀಪ ದೇವಾಡಿಗ ಹಕ್ಲಾಡಿಮನೆ, ಲಕ್ಷ್ಮಣ ದೇವಾಡಿಗ ಮರವಂತೆಮನೆ ಬೈಂದೂರು ಪೊಲೀಸರಿಗೆ, ಕುಂದಾಪುರ ಮತ್ತು ಭಟ್ಕಳ ಅಗ್ನಿ ಶಾಮಕ ಠಾಣೆಗೆ, 108 ಅಂಬುಲನ್ಸ್ ವಾಹನಕ್ಕೆ ಕರೆ ಮಾಡಿದರು. ರೈಲಿನಿಂದ ಹೊರಬಂದ ನೂರಾರು ಜನರಿಗೆ ಕುಡಿಯಲು ನೀರು ವಿತರಿಸಿದರು. ಅವರು ಒಂದೂವರೆ ಗಂಟೆ ಬೆಂಕಿಯೊಂದಿಗೆ ಹೋರಾಡಿ ಅದನ್ನು ಅಡಗಿಸಲು ಶಕ್ತರಾದರು. ಮನೆಗಳ ಮಹಿಳೆಯರು ಕಾಲಿಗೆ ಮುಳ್ಳು ಚುಚ್ಚಿದ್ದ ಮಹಿಳೆಯನ್ನು, ಕೈಯಲ್ಲಿ ಗಾಯಗೊಂಡಿದ್ದ ಬಾಲಕನನ್ನು ಉಪಚರಿಸಿದರು. ಎಲ್ಲ ಮುಗಿಯುವಾಗ ನಸುಕಿನ 3 ಗಂಟೆ ಆಗಿತ್ತು. ಆ ಬಳಿಕ ರೈಲನ್ನು ಹಿಮ್ಮೊಗವಾಗಿ ಬಿಜೂರು ನಿಲ್ದಾಣಕ್ಕೆ ಒಯ್ಯಲಾಯಾಯಿತು. ಅಲ್ಲಿ ವೈದ್ಯರು ಗಾಯಗೊಂಡವರಿಗೆ ಅಸ್ವಸ್ಥರಾದವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಕುಂದಾಪ್ರ ಡಾಟ್ ಕಾಂ ವರದಿ.

ಭಟ್ಕಳದ ಹತ್ತಿರ ಬೋಗಿಗೆ ಬೆಂಕಿ ತಗಲಿರುವುದು ಗೊತ್ತಾಯಿತು ಮತ್ತು ಎರಡು ಬಾರಿ ಚೈನ್ ಎಳೆದ ಮೇಲೆ ಇಲ್ಲಿ ರೈಲು ನಿಂತಿತು ಎಂದು ಕೇರಳದ ಒಬ್ಬ ಪ್ರಯಾಣಿಕರು ತಿಳಿಸಿದರು. ರೈಲು ಬಿಜೂರು ನಿಲ್ದಾಣ ಮತ್ತು ಎರಡು ಗೇಟ್‌ಗಳನ್ನು ದಾಟಿ ಬಂದಿದ್ದರೂ ಅಲ್ಲಿನ ಸಿಬ್ಬಂದಿಗೆ ಒಂದು ಬೋಗಿಗೆ ಬೆಂಕಿ ತಗಲಿರುವುದು ತಿಳಿಯದಿದ್ದುದು ಆಶ್ಚರ್ಯದ ಸಂಗತಿ ಎಂದು ಯುವಕರು ವಿಷಾದ ವ್ಯಕ್ತಪಡಿಸಿದರು.

ಸಮಯಕ್ಕೆ ಬಾರದ ಪೊಲೀಸ್, ಅಗ್ನಿಶಾಮಕ ಹಾಗೂ ಅಂಬುಲೆನ್ಸ್: ಯುವಕರ ಅಸಮಾಧಾನ
ಸ್ಥಳೀಯ ಯುವಕರು ಕೂಡಲೇ ಎಲ್ಲರಿಗೂ ವಿಷಯ ಮುಟ್ಟಿಸಿದ ಹೊರತಾಗಿಯೂ ಬೇಸರದ ಸಂಗತಿಯೆಂದರೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು 108 ವಾಹನ ಕರೆ ಮಾಡಿದ ಒಂದೂವರೆ ತಾಸಿನ ಬಳಿಕ ಸ್ಥಳಕ್ಕೆ ಬಂದರು. ಅಷ್ಟರಲ್ಲಿ ಸೇರಿದ್ದ ನೂರಾರು ಯುವಕರು ಬೆಂಕಿ ನಂದಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ ಮೇಲೆ ಬಂದರೆ ಏನು ಪ್ರಯೋಜನ. ಬೈಂದೂರು ಹಾಗೂ ಕಂಬದಕೋಣೆಯಲ್ಲಿ ಸರಕಾರಿ ಅಂಬುಲೆನ್ಸ್ ಇದ್ದರೂ ಸಕಾಲದಲ್ಲಿ ಬಾರದೆ ಇದ್ದುದರ ಕಾನರಣವೇನು ಎಂದು ಇಲಾಖೆಯ ಸ್ಪಂದನೆಯ ಬಗೆಗೆ ಅಲ್ಲಿನ ಯುವಕರು ಕಿಡಿಕಾರಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಒಂದು ಬದಿ ನೀರಿಲ್ಲ, ಮುಂದೆ ಹೋಗಿದ್ದರೆ ಹೊಳೆಗೆ ಹಾರಬೇಕಿತ್ತು:
ಬೆಂಕಿ ಅವಘಡಕ್ಕೆ ಸಿಲುಕಿದ ರೈಲ್ವೆ ಪ್ರಯಾಣಿಕರ ಅದೃಷ್ಟ ಚನ್ನಾಗಿತ್ತು. ರೈಲು ಸ್ವಲ್ಪ ಹಿಂದೆ ನಿಂತಿದ್ದರೂ ಬೆಂಕಿ ನಂದಿಸುವುದು ಕಷ್ಟವಾಗುತ್ತಿತ್ತು. ಒಂದು ಕಿ.ಮೀ ಮುಂದೆ ಚಲಿಸಿದರೂ ಎಡಮಾವಿನ ಹೊಳೆ ಬರುತ್ತಿದ್ದುದರಿಂದ ಕತ್ತಲಲ್ಲಿ ಆ ಹೊಳೆಗೆ ಹಾರಬೇಕಿತ್ತು. ಅದು ಮತ್ತಷ್ಟು ಅವಘಡಗಳಿಗೆ ಕಾರಣವಾಗುತ್ತಿತ್ತು. ರೈಲ್ವೆ ಹಳಿಯ ಇನ್ನೊಂದು ಪಾರ್ಶ್ವದ ಮನೆಯ ಬಾವಿಗಳಲ್ಲಿ ನೀರು ಕೂಡ ಇರಲಿಲ್ಲ. ಅದೃಷ್ಟವೋ ಎಂಬಂತೆ ರೈಲಿನ ಬೋಗಿ ಸರಿಯಾಗಿ ನೀರು ತುಂಬಿದ್ದ ಮನೆಯ ಬಾವಿಯ ಎದುರೇ ನಿಂತಿತ್ತು. ಕೂಡಲೇ ಪೈಪುಗಳನ್ನು ಜೋಡಿಸಿಕೊಂಡು ನೀರು ಹಾಯಿಸಲು ಸಾಧ್ಯವಾಯಿತು ಎನ್ನುತ್ತಾರೆ ಸ್ಥಳೀಯರು.

Also read ► ಮಂಗಳ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಆಕಸ್ಮಿಕ: ಪ್ರಯಾಣಿಕರು ಅಪಾಯದಿಂದ ಪಾರು – https://kundapraa.com/?p=31952 .

ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಸ್ತುನಿಷ್ಠ, ತನಿಕಾ ವರದಿಗಳು, ಹತ್ತು ಹಲವು ಸುದ್ದಿಗಳಿಗಾಗಿ ಓದಿ ಕುಂದಾಪ್ರ ಡಾಟ್ ಕಾಂ

Exit mobile version