Kundapra.com ಕುಂದಾಪ್ರ ಡಾಟ್ ಕಾಂ

ನಿವೃತ್ತ ಪ್ರಾಂಶುಪಾಲ ಸಿ.ಎಸ್. ಮಧ್ಯಸ್ಥ ಅವರಿಗೆ ಸನ್ಮಾನ

ಕುಂದಾಪುರ: ಹೆಮ್ಮಾಡಿ ಶ್ರೀ.ವಿ.ವಿ.ವಿ.ಮಂಡಳಿ ಆಡಳಿತಕ್ಕೆ ಒಳಪಟ್ಟ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏಳು ವರ್ಷ ಕಾಲ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಸೀತಾರಾಮ ಮಧ್ಯಸ್ಥ ಅವರನ್ನು ಶುಕ್ರವಾರ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು. ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಎಸ್.ಜನಾರ್ದನ ಮರವಂತೆ ಮತ್ತು ಅವರ ಧರ್ಮಪತ್ನಿ ನಿವೃತ್ತ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಐ.ವಸಂತ ಕುಮಾರಿ ಮಧ್ಯಸ್ಥ ಅವರನ್ನು ಸನ್ಮಾನಿಸಿದರು. ಸನ್ಮಾನಿಸಿದ ಎಸ್.ಜನಾರ್ದನ ಮರವಂತೆ ಮಾತನಾಡಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಮಧ್ಯಸ್ಥರ ಶಿಸ್ತು ಬಧ್ಧ ಆಡಳಿತದಿಂದ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಗ್ರಾಮೀಣ ಬಡ ವಿಧ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ ಪ್ರಾಮಾಣಿಕ ವ್ಯಕ್ತಿ ಇಂದಿನ ಸಮಾಜದಲ್ಲಿ ಸಿಗುವುದು ಬಹಳ ಅಪರೂಪ. ಪ್ರಸ್ತುತ ಶಿಕ್ಷಣ ಸಂಸ್ಥೆಗಳಿಗೆ ಮಧ್ಯಸ್ಥರಂತಹ ವ್ಯಕ್ತಿಗಳ ಸೇವೆ ಇನ್ನೂ ಅವಶ್ಯಕತೆ ಇದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಧ್ಯಸ್ಥರು ವೃತ್ತಿ ಜೀವನದಲ್ಲಿ ನನ್ನ ಪ್ರಾಮಾಣಿಕ ಸೇವೆ ಆತ್ಮ ಸಂತೃಪ್ತಿ ತಂದಿದೆ. ನನ್ನ ಸೇವೆಯಿಂದ ನಾಲ್ಕಾರು ಜನ ಪ್ರಯೋಜನ ಪಡೆದುಕೊಂಡರೆ ಅದುವೇ ನನ್ನ ಜೀವನದ ಸಾರ್ಥಕತೆ ಮತ್ತು ನನಗೆ ನೀಡಿದ ಗೌರವ ಎಂದರು.
ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನತಾ ಪ್ರೌಢ ಶಾಲಾ ಹಿರಿಯ ಶಿಕ್ಷಕ ದಿನಕರ.ಎಸ್ ಸಭೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನಿತರ ಕುರಿತು ಉಪನ್ಯಾಸಕರಾದ ಗೀತಾ ಜೋಷಿ, ಜೆಸ್ಸಿ ಡಿಸಿಲ್ವ, ಮಂಜುನಾಥ.ಕೆ.ಎಸ್, ಮಂಜುನಾಥ ಚಂದನ್ ಮತ್ತು ವಿದ್ಯಾರ್ಥಿಗಳಾದ ಅವಿನಾಶ, ಅಭಿಷೇಕ, ರಂಜಿತ, ನಿತೇಶ್, ಅಶ್ವತ, ಅನುಷ, ಪ್ರಶಾಂತಿ, ಶ್ವೇತ, ಸುಕೇಶ ಸನ್ಮಾನಿತರ ಕುರಿತು ಮಾತನಾಡಿದರು. ಕನ್ನಡ ಭಾಷಾ ಉಪನ್ಯಾಸಕ ಮಂಜುನಾಥ.ಕೆ.ಎಸ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ಚಂದನ್ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ಉಪನ್ಯಾಸಕ ಹರೀಶ್ ಕಾಂಚನ್ ಅತಿಥಿಗಳನ್ನು ಗೌರವಿಸಿದರು. ಇತಿಹಾಸ ಉಪನ್ಯಾಸಕಿ ಗಿರಿಜಾ ಕೊಡೇರಿ ವಂದಿಸಿದರು.

Exit mobile version