ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಕ್ರಮ ಗೋಸಾಗಾಟದ ಅಪರಾಧಿಗಳಿಗೆ ಸಿಂಹಸ್ವಪ್ನವಾಗಬೇಕಿದ್ದ ಪೊಲೀಸರೇ ಮಾಹಿತಿದಾರರಾಗಿರುವ ಕಳವಳಕಾರಿ ಅಂಶ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂಧಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರಿಗಾಗಿ ಬಲೆ ಬೀಸಲಾಗಿದೆ. ಮಲ್ಪೆ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆಯ ಸಿಬ್ಬಂದಿ ವಿನೋದ್ ಗೌಡ ಬಂಧಿತರು.
ಘಟನೆಯ ಹಿನ್ನೆಲೆ:
ಜು12 ರಂದು ಬೆಳಗ್ಗಿನ ಜಾವ ಉತ್ತರ ಕರ್ನಾಟಕ ಭಾಗದಿಂದ ಕಾಸರಗೋಡು ಕಸಾಯಿಖಾನೆಗೆ ಲೈಲ್ಯಾಂಡ್ ಲಾರಿಯಲ್ಲಿ ೧೩ ಕೋಣ ಹಾಗೂ 7 ಎಮ್ಮೆ ಸೇರಿ ಒಟ್ಟು 20 ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಸಾಸ್ತಾನ ಟೋಲ್ಗೇಟ್ ಬಳಿ ಕಾರ್ಯಾಚರಣೆ ನಡೆಸಿದ್ದ ಕೋಟ ಠಾಣಾ ಪಿಎಸ್ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂಧಿಗಳು ಬಂಧಿಸಿದ್ದರು. ಕಾರ್ಯಾಚರಣೆಯಲ್ಲಿ ಲಾರಿ ಚಾಲಕ ಸೈನುದ್ದಿನ್ ಹಾಗೂ ಜೊತೆಗಿದ್ದ ಹಮೀದ್, ಗಣೇಶನ್, ಸಮೀರ್ ಮತ್ತು ಕಾರಿನ ಚಾಲಕ ಶಿವಾನಂದ್, ಮಾರುತಿ ನಾರಾಯಣ ನಾಯ್ಕ್ ಎಂಬುವವರನ್ನು ಬಂಧಿಸಲಾಗಿತ್ತು.
ಆರೋಪಿಗಳನ್ನು ವಿಚಾರಣೆ ನಡೆಸುವಾಗ ಜಾನುವಾರುಗಳನ್ನು ಸಾಗಾಟ ನಡೆಸುವ ಸಂದರ್ಭ ಪೊಲೀಸರ ಚಲನವಲನದ ಕುರಿತು ತಮಗೆ ಪೊಲೀಸ್ ಪೇದೆಗಳೇ ಮಾಹಿತಿ ನೀಡುತ್ತಿದ್ದರು ಎನ್ನುವ ಕಳವಳಕಾರಿ ಅಂಶ ಬಾಯಿಬಿಟ್ಟಿದ್ದರು. ಯಾವ ಠಾಣೆಯ ಯಾವೆಲ್ಲ ಸಿಬ್ಬಂದಿಗಳು ಮಾಹಿತಿ ನೀಡುತ್ತಿದ್ದರು ಎಂಬ ಮಾಹಿತಿ ಸಂಗ್ರಹಿಸಿದ ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ವಿಷಯ ತಿಳಿಸಿ ಅವರ ನಿರ್ದೇಶನದಂತೆ ತತ್ಕ್ಷಣ ಕಾರ್ಯ ಪ್ರವತ್ತರಾಗಿ ಮಲ್ಪೆ ಕರಾವಳಿ ಕಾವಲು ಪಡೆಯ ಸಿಬಂದಿ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆ ಸಿಬಂದಿ ವಿನೋದ್ ಗೌಡ ಎಂಬ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ನಾಲ್ಕು ಮಂದಿ ಪೊಲೀಸ್ ಪೇದೆಗಳ ಕೈವಾಡವಿದ್ದು ಅವರು ತಲೆಮರೆಸಿಕೊಂಡಿದ್ದಾರೆ. ಇವರೆಲ್ಲ ಹಲವಾರು ಸಮಯದಿಂದ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ.
ಇಬ್ಬರು ಪೊಲೀಸರಿಗೆ ನ್ಯಾಯಾಂಗ ಬಂಧನ:
ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಹುತೇಕ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಅಕ್ರಮ ಗೋ ಸಾಗಾಟ ಮಾಡುವವರಿಗೆ ಪೊಲೀಸ್ ಅಧಿಕಾರಿಗಳು ಎಲ್ಲಿ ನಿಂತಿದ್ದಾರೆ, ನೀವು ಯಾವ ದಾರಿಯಲ್ಲಿ ಹೋದರೆ ಒಳಿತು ಎಂಬ ಮಾಹಿತಿಯನ್ನು ಕೆಲವು ಪೊಲೀಸ್ ಸಿಬ್ಬಂದಿಗಳೇ ನೀಡುತ್ತಿದ್ದರೆಂಬ ಅಂಶ ಬಯಲಾಗಿದೆ. ಇಂತಹ ಸಿಬ್ಬಂದಿಗಳ ಜಾಡು ಹಿಡಿದು ಹೊರಟಿದ್ದು, ಪತ್ತೆಗೆ ಹಿರಿಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ತಮ್ಮದೇ ಇಲಾಖೆಯ ಸಿಬ್ಬಂಧಿಗಳು ಅಕ್ರಮ ಗೋಸಾಗಾಟಕ್ಕೆ ಸಾಥ್ ನೀಡುತ್ತಿರುವ ಅಂಶ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾಗಿ ಈರ್ವರನ್ನು ಬಂಧಿಸಿರುವ ಕೋಟ ಆರಕ್ಷಕ ಠಾಣಾ ಪಿಎಸ್ಐ ನಿತ್ಯಾನಂದ ಗೌಡ ಅವರನ್ನು ಸಾರ್ವಜನಿಕರು ಶ್ಲಾಘೀಸಿದ್ದಾರೆ. ಜೊತೆಗೆ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಇತರ ಸಿಬ್ಬಂದಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ. ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಗೋಕಳ್ಳ ಪೆರಡ್, ಚೆಕ್ ಪೋಸ್ಟ್ ಮೊದಲಾದವುಗಳನ್ನು ಬಲಪಡಿಸುತ್ತಿದ್ದರೆ, ಇಲಾಖೆಯವರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ.

