Kundapra.com ಕುಂದಾಪ್ರ ಡಾಟ್ ಕಾಂ

ಬಿ.ಜಿ. ಮೋಹನದಾಸ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ವಿದೇಶದಲ್ಲಿ ನೆಲೆಸಿ ಕನ್ನಡ ಹಾಗೂ ಕನ್ನಡಿಗರ ಪರವಾಗಿ ಹತ್ತು ಹಲವು ಸಂಘಟನೆಗಳ ಮೂಲಕ ನಿರಂತರವಾಗಿ ಶ್ರಮಿಸಿದ ಬಿ. ಜಿ. ಮೋಹನದಾಸ್ ಅವರಿಗೆ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಸ್ನೇಹಿತರ ವಲಯದದಲ್ಲಿ ಬೀಜಿ ಎಂದೇ ಪರಿಚಿತರಾಗಿರುವ ಬಿಜೂರು ಗೋವಿಂದಪ್ಪ ಮೋಹನ್ ದಾಸ್ ಅವರು ಜನರ ಸೇವೆಯೇ ಜನಾರ್ಧನ ಸೇವೆ ಎಂಬ ತತ್ವವನ್ನು ಬಲವಾಗಿ ನಂಬಿದವರು. ಎಂಭತ್ತರ ದಶಕದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ವಲಸೆ ಹೋದ ಬೀಜಿಯವರು, ಫಾರ್ಮಸಿಯ ವಿವಿಧ ಸಂಸ್ಥೆಗಳಲ್ಲಿ ಅವಿರತವಾಗಿ ದುಡಿದಿದ್ದು ತಮ್ಮ ಬಿಡುವಿನ ವೇಲೆಯಲ್ಲಿ ಅಧಿಕ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ.

ಮಣಿಪಾಲದಿಂದ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಬೀಜಿಯವರು ಗಲ್ಫ್ನಾಡಿಗೆ ವಲಸೆ ಬರುವ ಮುನ್ನ ಮಣಿಪಾಲದಲ್ಲಿ ಫಾರ್ಮಸಿ ವಿಭಾಗದ ಸಹಾಯಕ ಪ್ರೊಪೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

1985ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ಮುಂದೆ 1988 ರಲ್ಲಿ ಸಂಘದ ಸಂವಿಧಾನ ರೂಪಿಸಿದ ರೂವಾರಿಗಳಲ್ಲೊಬ್ಬರಾದರು. 1989 ರಲ್ಲಿ ದುಬೈ ಕರ್ನಾಟಕ ಸಂಘದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಾಂವಿಧಾನಿಕವಾಗಿ ಚುನಾಯಿತರಾದ ಅಧ್ಯಕ್ಷರಾದರು. ಇವರ ಅಧ್ಯಕ್ಷತೆಯಲ್ಲಿ ಹಲವು ಪ್ರತಿಭೆಗಳು ಅರಳಲು ಅವಕಾಶ ದೊರಕಿತು. ಇವರ ಸ್ಪೂರ್ತಿದಾಯಕ ಮಾರ್ಗದರ್ಶನದಿಂದಾಗಿ ಮನೋರಂಜನೆ ಹಾಗೂ ಆಟೋಟ ಚಟುವಟಿಕೆಗಳ ಬುಗ್ಗೆಯೇ ಹರಿಯಿತು. 1992-94 ರವರೆಗೆ ಕಾರ್ಯದರ್ಶಿಯಾಗಿಯೂ 1996-98ರ ವರೆಗೆ ಉಪಾಧ್ಯಕ್ಷರಾಗಿ ದುಬೈ ಕರ್ನಾಟಕ ಸಂಘದಲ್ಲಿ ಸೇವೆ ಸಲ್ಲಿಸಿರುವ ಯು.ಎ. ಇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಗಲ್ಪ್ ರಾಷ್ಟ್ರಗಳಲ್ಲಾಗುವ ಕನ್ನಡ ಚಟುವಟಿಕೆಗಳನ್ನು ಪ್ರತಿಬಿಂಬಿಸಿ ಕರ್ನಾಟಕ ಮತ್ತು ಕೊಲ್ಲಿ ರಾಷ್ಟ್ರಗಳ ನಡುವಣ ಸೇತುವೆಯಾದ ಉದಯವಾಣಿ ದಿನಪತ್ರಿಕೆಯ ‘ಗಲ್ಪ್ ವಾರ್ತಾ ಸಂಚಯ’ಅಂಕಣ ವನ್ನು ಪ್ರಾರಂಭಿಸುವಲ್ಲಿ ಪ್ರೇರಣೆಯಾದರು. ಗಲ್ಪ್ ಕನ್ನಡಿಗರ ಅಭಿಮಾನಕ್ಕೆ ಸಾಂಸ್ಕೃತಿಕ ಶ್ರ್ರೀಮಂತಿಕೆಗೆ ಕನ್ನಡಿಯಾದ ಈ ಅಂಕಣವು ಬೀಜಿಯವರು ಕನ್ನಡ ಬಾಂಧವರಿಗಿತ್ತ ಒಂದು ಅತ್ಯಮೂಲ್ಯ ಕೊಡುಗೆ.

ಬೀಜಿಯವರ ಸಾರ್ಥಕ ಸೇವೆಯನ್ನು ಪರಿಗಣಿಸಿ ಶಾರ್ಜಾ ಕರ್ನಾಟಕ ಸಂಘ 2007 ರ ಪ್ರತಿಷ್ಟಿತ- ’ಮಯೂರ ಪ್ರಶಸ್ತಿ’ ಯನ್ನು ನೀಡಿ ಸನ್ಮಾನಿಸಿದೆ.

ತಮ್ಮ ಜೀವನದ್ದುದ್ದಕ್ಕೂ ಪ್ರಶಸ್ತಿಗಳನ್ನು ಪಡೆಯುತ್ತಾ ಬಂದಿರುವ ಬೀಜಿಯವರನ್ನು 2002 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯವು ತನ್ನ ಅತ್ಯುನ್ನತ ಪ್ರಶಸ್ತಿಯಾದ ‘ಅತ್ಯುತ್ತಮ ಪೂರ್ವ ವಿದ್ಯಾರ್ಥಿ’ ಪ್ರಶಸ್ತಿಯೊಂದಿಗೆ ಸನ್ಮಾನಿಸಿದೆ. ಹಾಗೆಯೇ ನ.14 2008 ರಂದು ಬಹರೈನ್ ಕನ್ನಡ ಸಂಘದ ಅದ್ದೂರಿಯ ಕಾರ್ಯಕ್ರಮ “ಕನ್ನಡ ವೈಭವ” ದಲ್ಲಿ ಮುಖ್ಯ ಅತಿಥಿ ಕರ್ನಾಟಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯುರಪ್ಪನವರಿಂದ ಕನ್ನಡ ಸೇವೆಗಾಗಿ ನಮ್ಮ ’ಬೀಜಿ’ಯವರು ಸನ್ಮಾನಿತರಾದರು. ಅಂತೆಯೇ ಯು.ಎ.ಯಿಯ ಪ್ರತಿಷ್ಟ ಕನ್ನಡ ಸಂಸ್ಥೆ ಅಬುದಾಭಿ ಕರ್ನಾಟಕ ಸಂಘ ಆಯೋಜಿಸಿದ ರಾಜ್ಯೋತ್ಸವ 2009 ರಲ್ಲಿಯೂ ಸನ್ಮಾನಿತರಾದರು. ’ಧ್ವನಿ ಪತಿಷ್ಠಾನ ತನ್ನ ಬೆಳ್ಳಿಹಬ್ಬದ ಪ್ರಯುಕ್ತ ವಿಜ್ರಂಭ್ರಂಣೆಯಿಂದ ಆಯೋಜಿಸಿದ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಹೊಸ ಹವ್ಯಾಸ ’ ಕನ್ನಡ ಪತ್ರಿಕೋದ್ಯಮ’ ಸಾಧನೆಯನ್ನು ಗುರುತಿಸಿ ಸನ್ಮಾನಿತರಾದರು. ಹಾಗೆಯೇ ಯು.ಎ.ಯಿಯ ಪ್ರತಿಷ್ಟ ಕನ್ನಡ ಸಂಸ್ಥೆ ಅಬುದಾಭಿ ಕರ್ನಾಟಕ ಸಂಘ ಆಯೋಜಿಸಿದ ಪ್ರಥಮ ’ ದ. ರಾ. ಬೇಂದ್ರೆ ಪ್ರಶಸ್ತಿ ’ ಯ ಪ್ರಥಮ ವಿಜೇತರಾಗಿ ಸನ್ಮಾನಿತರಾದರು.

ದೇವಾಡಿಗ ಸಮುದಾಯಕ್ಕೂ ಹತ್ತು ಹಲವು ರೀತಿಯಲ್ಲಿ ಸಹಾಯ ನೀಡಿರುವ ಬೀಜಿಯವರು ದೇವಾಡಿಗ ಸಂಘ ಯು.ಎ.ಇ ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅಂತರ್ಜಾಲ ತಾಣ ದೇವಾಡಿಗ.ಕಾಂ ಕಾರ್ಯನಿರ್ವಾಹಣೆಯಲ್ಲೂ ತಮ್ಮ ಶ್ರಮದಾನ ನೀಡುತ್ತಿದ್ದಾರೆ. ಇನ್ನೊಂದು ತಾಣವಾದ ಕೊಲ್ಲೂರು.ಕಾಮ್ ನಿರ್ಮಾಣದಲ್ಲೂ ತಮ್ಮ ಯೋಗದಾನ ನೀಡಿದ್ದಾರೆ.

ಅವರನ್ನು ಮುಂಬೈ ದೇವಾಡಿಗ ಸಂಘ ’ ದೇವಾಡಿಗ ಭೂಷಣ’ ಎಂದು ಸನ್ಮಾನ ಮಾಡಿದೆ. ಕಾಂತಾವರ ಕನ್ನಡ ಸಂಘ ಅವರ ಸಾಧನೆಗಳನ್ನು ’ ಗಲ್ಫ್ ಕನ್ನಡಿಗ – ಬಿ.ಜಿ.ಮೋಹನ್ ದಾಸ್ ’–ಎಂಬ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಊರಿಗೆ ವಾಪಾಸ್ ಬಂದು (2014) ಮಣಿಪಾಲದಲ್ಲಿ ನೆಲಸಿರುವ ಬೀಜಿ ಯವರು ಮಣಿಪಾಲ ಲಯನ್ಸ್ ಸೇರಿ ಅದರ ಅದ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಆಂಗ್ಲ ಭಾಷೆಯ ಮೇಲೆ ಅಪ್ರತಿಮ ಹಿಡಿತವಿರುವ ಬೀಜಿಯವರು ಉತ್ತಮ ಅಂಕಣಕಾರರೂ ಆಗಿದ್ದಾರೆ. ಬೀಡುವಿನ ವೇಳೆಯಲ್ಲಿ ಹಲವು ಅಂತರ್ಜಾಲ ತಾಣಗಳನ್ನು ಜಾಲಾಡುವುದು ಮಾತ್ರವಲ್ಲದೇ ಕೆಲವು ತಾಣಗಳನ್ನು ಹೊರಡಿಸುತ್ತಲೂ ಇದ್ದಾರೆ.

ಪತ್ನಿ ಯಶೋದಾ, ಪುತ್ರ ಅಖಿಲ್ ಹಾಗೂ ಪುತ್ರಿ ಯಶಸ್ವಿ ಯವರನ್ನೊಡಗೂಡಿದ ಚಿಕ್ಕದಾದ ಸುಖೀ ಸಂಸಾರ ಅವರದ್ದು.

► ಚಿನ್ನದ ಹುಡುಗ ವಿಶ್ವನಾಥ್‌ಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ – https://kundapraa.com/?p=33500 .

Exit mobile version