Kundapra.com ಕುಂದಾಪ್ರ ಡಾಟ್ ಕಾಂ

ಹುಟ್ಟೂರಿನ ಜನರ ನೀರಿನ ದಾಹ ತಣಿಸುತ್ತಿರುವ ಜಲದಾತ ಗೋವಿಂದ ಬಾಬು ಪೂಜಾರಿ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಆ ಊರಲ್ಲಿ ಒಂದೆಡೆ ಉಪ್ಪು ನೀರಿನ ಸಮಸ್ಯೆ, ಜೊತೆಗೆ ಹೆಚ್ಚುತ್ತಿರುವ ಬೇಸಿಗೆಯ ಕಾವು. ಕುಡಿಯುವ ನೀರಿಗಾಗಿ ನಿತ್ಯವೂ ಪರದಾಡುವ ಸ್ಥಿತಿ. ಹೀಗಿರುವಾಗಲೇ ಗ್ರಾಮದ ಜನರ ಸಂಕಟ ಅರಿತು ಸ್ಪಂದಿಸಿದವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ, ಉದ್ಯಮಿ ಗೋವಿಂದ ಬಾಬು ಪೂಜಾರಿ.

ಬಿಜೂರು ಗ್ರಾಮದ 3 ಹಾಗೂ 4ನೇ ವಾರ್ಡ್ ವ್ಯಾಪ್ತಿಯ ಗರಡಿ, ನಿಸರ್ಗಕೇರಿ, ಕಳಿಸಾಲು ಸೇರಿದಂತೆ ಹಲವು ಭಾಗಗಳಲ್ಲಿ ವರ್ಷಪೂರ್ತಿ ನೀರಿನ ಸಮಸ್ಯೆ ಇದ್ದೇ ಇದೆ. ಗ್ರಾಮ ಪಂಚಾಯತಿಯಿಂದ ನಳ್ಳಿ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ ಸದ್ಯ ಬಾವಿಯಲ್ಲಿ ನೀರು ಬತ್ತಿ ಹೋಗಿರುವುದರಿಂದ ಅದನ್ನು ನಿಲ್ಲಿಸಲಾಗಿತ್ತು. ಪಂಚಾಯತ್‌ನಿಂದ ಎರಡು ದಿನಗಳಿಗೊಮ್ಮೆ ಟ್ಯಾಂಕರ್ ನೀರು ಇನ್ನಷ್ಟೇ ಪೂರೈಕೆಯಾಗಬೇಕಿತ್ತು. ಈ ನಡುವೆಯೇ ತನ್ನೂರಿನ ಜನರಿಗೆ ಜಲದಾತವಾಗಿ ಬಂದವರು ಗೋವಿಂದ ಬಾಬು ಪೂಜಾರಿ. ಅವರ ಈ ತಕ್ಷಣದ ಸ್ಪಂದನೆಯಿಂದಾಗಿ ಆ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ತಾತ್ಕಾಲಿಕ ಮುಕ್ತಿ ದೊರೆತಂತಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

60 ಮನೆಗಳಿಗೆ 1 ತಿಂಗಳು ನೀರು ಪೂರೈಕೆ:
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ವಾಹನದಲ್ಲಿ ಬಿಜೂರು 3 ಹಾಗೂ 4ನೇ ವಾರ್ಡಿನ ಸುಮಾರು 60 ಮನೆಗಳಿಗೆ ನಿತ್ಯವೂ ನೀರು ಪೂರೈಸಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಈ ಕಾಯಕಕ್ಕೆ ಚಾಲನೆ ದೊರೆತಿದ್ದು, ಊರಿನ ಯುವಕರು ಈ ಕಾಯಕಕ್ಕೆ ಸಾಥ್ ನೀಡಿದ್ದಾರೆ. ಗ್ರಾಮ ಪಂಚಾಯತಿಯಿಂದ ಟ್ಯಾಂಕ್‌ನ ನೀರು ಪೂರೈಕೆಯಾಗುವ ತನಕ ಒಂದು ತಿಂಗಳುಗಳ ಕಾಲ ಕುಡಿಯುವ ನೀರು ವಿತರಿಸುವ ಕಾಯಕದಲ್ಲಿ ಅವರು ತೊಡಗಿಕೊಂಡಿದ್ದಾರೆ. ವಾಹನ, ಡಿಸೇಲ್, ಚಾಲಕ ಹಾಗೂ ನೀರು ಪೂರೈಕೆಯ ಖರ್ಚುವೆಚ್ಚವನ್ನು ಸಂಪೂರ್ಣ ಟ್ರಸ್ಟ್‌ನಿಂದಲೇ ಭರಿಸಲಾಗುತ್ತಿದೆ.

ಕೋರೋನಾತಂಕದ ನಡುವೆ ನಿರಂತರ ಉಚಿತ ಊಟ:
ದೇಶದಲ್ಲಿ ಕೊರೋನಾ ಆತಂಕ ಹೆಚ್ಚುತ್ತಿದ್ದಂತೆ ಬೈಂದೂರು ತಾಲೂಕಿನ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾಯಕದಲ್ಲಿ ಸ್ವತಃ ಗೋವಿಂದ ಬಾಬು ಪೂಜಾರಿ ಅವರ ನಿರತರಾಗಿದ್ದರು. ಇಲ್ಲಷ್ಟೇ ಅಲ್ಲದೇ ಬೆಂಗಳೂರು ಹಾಗೂ ಮುಂಬೈ ನಗರದ ಬಹುತೇಕ ಪೊಲೀಸ್ ಠಾಣೆಗಳಿಗೆ, ಬಡವರಿಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕವೇ ಮಧ್ಯಾಹ್ನ ಹಾಗೂ ರಾತ್ರಿಗೆ ನಿತ್ಯವೂ ಸುಮಾರು 4,000 ಊಟ ಪೂರೈಕೆ ಮಾಡಲಾಗುತ್ತಿದೆ. ಬೈಂದೂರು ಭಾಗದ ಸುಮಾರು 60ಕ್ಕೂ ಹೆಚ್ಚು ಆಶಾ ಕಾರ್ಯಕರ್ತರು, ನಸ್‌ಗಳು ಹಾಗೂ ಆಸ್ಪತ್ರೆ ಸಿಬ್ಬಂಧಿಗಳಿಗೆ ಆಹಾರದ ಕಿಟ್‌ಗಳನ್ನು ನೀಡಿರುವುದಲ್ಲದೇ, ಅವರಿಗೆ ಪ್ರೋತ್ಸಾಹಧನವನ್ನೂ ವಿತರಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಶ್ರೀ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವು:
ಗೋವಿಂದ ಬಾಬು ಪೂಜಾರಿ ಅವರು ಯಶಸ್ವಿ ಉದ್ಯಮಿ. ಅಸಾಧ್ಯವಾದುದನ್ನು ಸಾಧಿಸಿ ಉದ್ಯಮ ಕ್ಷೇತ್ರದಲ್ಲಿ ಯುವಕರಿಗೆ ಮಾದರಿಯಾದವರು. ಉದ್ಯಮದ ಜೊತೆಗೆ ಜೊತೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಅದರ ಮೂಲಕ ಶಿಕ್ಷಣ, ಧಾರ್ಮಿಕ, ಆರೋಗ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಪ್ರಸ್ತುತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ವಿದ್ಯಾರ್ಥಿ ವೇತನ, ವಿದ್ಯಾರ್ಥಿ ದತ್ತು ಸ್ವೀಕಾರ, ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹದಂತಹ ಮಹತ್ವಕಾಂಕ್ಷೆಯ ಕಾರ್ಯವನ್ನು ನಿರಂತವಾಗಿ ಮಾಡಿಕೊಂಡು ಬರಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಕೋರೋನಾ ಭೀತಿಯಿಂದ ಎಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿರುವಾಗ ತುರ್ತಾಗಿ ಆಗಬೇಕಿದ್ದುದು ಎರಡು ಹೊತ್ತು ಬಡಜನರ ಹೊಟ್ಟೆ ತುಂಬಿಸುವುದು. ಹಾಗಾಗಿ ಲಾಕ್‌ಡೌನ್ ಆಗುತ್ತಿದ್ದಂತೆಯೇ ಟ್ರಸ್ಟ್ ಹಾಗೂ ಶೇಫ್‌ಟಾಕ್ ಸಂಸ್ಥೆಯ ಮೂಲಕ ಮುಂಬೈ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಡವರು ಹಾಗೂ ನಮ್ಮ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ವಿತರಿಸಲು ಆರಂಭಿಸಿದೆವು. ಬೈಂದೂರು ತಾಲೂಕಿನಲ್ಲಿಯೂ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಆರಂಭಿಸಿದೆವು. ಈಡುವೆಗೆ ನೀರಿಗಾಗಿ ನನ್ನೂರಿನ ಜನ ಸಂಕಷ್ಟ ಪಡುವುದನ್ನು ನೀಡಿ ತಾತ್ಕಾಲಿಕವಾಗಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಸರಕಾರ ಶಾಶ್ವತ ಪರಿಹಾರ ಕಲ್ಪಿಸುವತ್ತ ಆಲೋಚಿಸಬೇಕು. ಈ ಎಲ್ಲದಕ್ಕೂ ನೂರಾರು ಸಹೃದಯಿಗಳು ಜೊತೆಯಾಗುತ್ತಿದ್ದಾರೆ. – ಗೋವಿಂದ ಬಾಬು ಪೂಜಾರಿ, ಮ್ಯಾನೆಜಿಂಗ್ ಟ್ರಸ್ಟೀ, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ

Exit mobile version