Kundapra.com ಕುಂದಾಪ್ರ ಡಾಟ್ ಕಾಂ

ಡಿಸೆಂಬರ್ ಅಂತ್ಯದೊಳಗೆ ತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ಯಶಸ್ಸಿನ ಗುರಿ: ಸಿಇಓ ಪ್ರೀತಿ ಗೆಹಲೋತ್

ಕುಂದಾಪ್ರ ಡಾಟ್ ಕಾಂ ವರದಿ.
ಉಡುಪಿ: ಡಿಸೆಂಬರ್ 2020 ರೊಳಗೆ ಜಿಲ್ಲೆಯ ಎಲ್ಲಾ 158 ಗ್ರಾಮ ಪಂಚಾಯತ್ ಗಳಲ್ಲಿ ಎಸ್.ಎಲ್.ಆರ್.ಎಂ ಘಟಕಗಳನ್ನು ಆರಂಭ ಮಾಡುವ ಮೂಲಕ ಉಡುಪಿ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ಯಶಸ್ಸು ಸಾಧಿಸುವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ 65 ರಿಂದ 70 ಗ್ರಾಮ ಪಂಚಾಯತಿಗಳಲ್ಲಿ ಎಸ್.ಎಲ್.ಆರ್.ಎಂ ಘಟಕಗಳನ್ನು ಆರಂಭಿಸಲಾಗಿದ್ದು, ಅದರಲ್ಲಿ ಕೆಲವೊಂದು ಘಟಕಗಳು ಕಸ ವಿಲೇವಾರಿಯಲ್ಲಿ ಬರುವ ಆದಾಯದಿಂದಲೇ ತಮ್ಮ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸಿಕೊಂಡು ಸಂಪೂರ್ಣ ಸ್ವಾವಲಂಬನೆ ಸಾಧಿಸಿವೆ. ಹಸಿ ಕಸ ಸಂಗ್ರಹಣೆ ನಿಲ್ಲಿಸಲಾಗಿದ್ದು, ಹಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಬಗ್ಗೆ ಅರಿವು ಮೂಡಿಸಲಾಗಿದ್ದು, ಒಣ ಕಸ ಸಂಗ್ರಹಣೆ ಮಾತ್ರ ಮಾಡಲಾಗುತ್ತಿದ್ದು, ಇದಕ್ಕಾಗಿ ಪಂಚಾಯತ್ ಗಳಲ್ಲಿ 20 ರಿಂದ 60 ರೂ ಗಳ ವರೆಗೆ ಮಾಸಿಕ ದರ ವಸೂಲಿ ಮಾಡುತ್ತಿದ್ದು, ಈ ದರವನ್ನು ಆಯಾ ಗ್ರಾಮ ಪಂಚಾಯತ್ ಗಳೇ ನಿರ್ಧರಿಸುತ್ತಿದ್ದು, ಸಾರ್ವಜನಿಕರು ಕಸ ವನ್ನು ಎಲ್ಲೆಂದರಲ್ಲಿ ಬಿಸಾಡದೇ, ಕಸ ಸಂಗ್ರಹಿಸುವ ವಾಹನಗಳಿಗೆ ನೀಡುವುದರ ಮೂಲಕ ತಮ್ಮ ಗ್ರಾಮವನ್ನು ಸ್ವಚ್ಛ ಸುಂದರವಾಗಿಡಲು ಸಹಕರಿಸುವಂತೆ ಸಿಇಓ ತಿಳಿಸಿದ್ದಾರೆ.

ಕಸವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ದಂಡ ವಿಧಿಸುವ ಅಧಿಕಾರ ಗ್ರಾಮ ಪಂಚಾಯತ್ ಗಳಿಗಿದ್ದು, ಈಗಾಗಲೇ ಹಲವು ಪಂಚಾಯತ್ ಗಳಲ್ಲಿ ದಂಡ ವಿಧಿಸಲಾಗುತ್ತಿದೆ,ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು, ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಿಗೆ ಸಹಕಾರ ನೀಡುವಂತೆ ಸಿಇಓ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎಸ್.ಎಲ್.ಆರ್.ಎಂ ಘಟಕ ಸ್ಥಾಪನೆಗೆ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಕಂದಾಯ ಇಲಾಖೆ ಮೂಲಕ ಜಾಗ ನೀಡಲಾಗುತ್ತಿದ್ದು, ಈಗಾಗಲೇ 110 ಪಂಚಾಯತ್ ಗಳಿಗೆ ಜಾಗ ನೀಡಿದೆ, ಉಳಿದ ಪಂಚಾಯತ್ ಗಳಿಗೆ ಜಾಗ ನೀಡುವ ಪ್ರಕ್ರಿಯೆ ವಿವಿಧ ಹಂತದಲ್ಲಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, ಘಟಕಗಳಲ್ಲಿ ಒಣಕಸ ಮಾತ್ರ ಸಂಗ್ರಹವಾಗುತ್ತಿದ್ದು, ಘಟಕ ಸ್ಥಾಪನೆಯಿಂದ ಸಾರ್ವಜನಿಕರಿಗೆ ಯಾವುದೇ ದುರ್ವಾಸನೆ ಅಥವಾ ಆರೋಗ್ಯಕ್ಕೆ ತೊಂದರೆಯಿಲ್ಲ ಎಂದು ಸಿಇಓ ಸ್ಪಷ್ಟಪಡಿಸಿದರು.

ಪ್ರಸ್ತುತ ಸ್ವಚ್ಛತಾ ಕಾರ್ಮಿಕರೂ ಸೇರಿದಂತೆ ಸುಮಾರು 500 ನೌಕರರು ಎಸ್‌ಎಲ್‌ಆರ್‌ಎಂ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುತ್ತಿದೆ. ಕೊರೋನ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್, ಸಾಬೂನು, ಮಾಸ್ಕ್, ಗ್ಲೌಸ್, ಏಪ್ರಾನ್, ಫೇಸ್ ಶೀಲ್ಡ್ ಇತ್ಯಾದಿ ಹೊಂದಿರುವ 4,000 ರೂ. ಮೌಲ್ಯದ ಕಿಟ್ ವಿತರಿಸಲಾಗಿದೆ. ಎಸ್.ಎಲ್.ಆರ್.ಎಂ ಘಟಕದಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರೂ ಉದ್ಯೋಗಿಗಳಾಗಿದ್ದಾರೆ. ಎಲ್ಲ ಗ್ರಾ.ಪಂ.ಗಳಲ್ಲಿ ಘಟಕಗಳು ಆರಂಭವಾದ ಬಳಿಕ ಇನ್ನೂ ಹೆಚ್ಚಿನ ಉದ್ಯೋಗವಕಾಶ ಸೃಷ್ಠಿಯಾಗಲಿದೆ ಎಂದು ಪ್ರೀತಿ ಗೆಹಲೋತ್ ತಿಳಿಸಿದ್ದಾರೆ.

ಎಸ್.ಎಲ್.ಆರ್.ಎಂ ಘಟಕದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ನ್ನು ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜಜೆ ಈಗಾಗಲೇ ಜಾರಿಯಾಗಿದ್ದು, ಅಲೆವೂರು ಮತ್ತು ಮರವಂತೆ 300 ಮೀ ರಸ್ತೆ ನಿರ್ಮಿಸಲಾಗಿದ್ದು, ಜಿಲ್ಲೆಯ ಪ್ರತಿಯಿಂದು ಗ್ರಾಮ ಪಂಚಾಯತ್ ನಲ್ಲೂ ಈ ರೀತಿ ರಸ್ತೆ ನಿರ್ಮಿಸುಯ ಯೋಜನೆಯಿದ್ದು, ಪ್ಲಾಸ್ಟಿಕ್ ನ್ನು ಪುಡಿ ಮಾಡುವ ಯಂತ್ರವನ್ನೂ ಸಹ ಖರೀದಿಸಿದ್ದು, 3 ತಾಲೂಕುಗಳಿಗೆ ಒಂದು ಯಂತ್ರವ್ನು ನೀಡಿದ್ದು, ಗ್ರಾಮ ಪಂಚಾಯತ್ ಗಳು ತಮ್ಮಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ನ್ನು ಇಲ್ಲಿ ಪುಡಿ ಮಾಡಿಸಬಹುದು ಎಂದು ಸಿಇಓ ತಿಳಿಸಿದರು.

ಜಿಲ್ಲೆಯಲ್ಲಿ ಕಸ ನಿರ್ವಹಣೆಯಲ್ಲಿ ಸ್ವಾವಲಂಬಿಯಾಗಿರುವ ಗ್ರಾ.ಪಂ.ಗಳು:
ವಂಡ್ಸೆ, ಹಂಗಳೂರು, ಸಿದ್ದಾಪುರ, ಮರವಂತೆ, ಕಾಡೂರು, 80 ಬಡಗಬೆಟ್ಟು, ಹೆಜಮಾಡಿ, ವರಂಗ, ಎರ್ಲಪಾಡಿ, ನಿಟ್ಟೆ, ಮುಂಡ್ಕೂರು, ಮುಡೂರು ಮೊದಲಾದ ಗ್ರಾ.ಪಂ.ಗಳಲ್ಲಿ ಕಸ ನಿರ್ವಹಣೆ ಖರ್ಚು ತೆಗೆದು ಉಳಿಕೆಯಾಗುವ ಹಂತದಲ್ಲಿದೆ. ಇಲ್ಲಿ ಕೆಲಸಗಾರರ ವೇತನ ಎಸ್‌ಎಲ್‌ಆರ್‌ಎಂ ಘಟಕದಿಂದಲೇ ನಡೆಯುತ್ತಿದೆ. ಸ್ವಲ್ಪ ಉಳಿಕೆಯೂ ಆಗುತ್ತದೆ. ಕೊಕ್ಕರ್ಣೆ, ಪಡುಬಿದ್ರಿ, ಬಸ್ರೂರು ಮೊದಲಾದ ಗ್ರಾ.ಪಂ.ಗಳಲ್ಲಿ ಗ್ರಾ.ಪಂ.ಗೆ ಯಾವುದೇ ಖರ್ಚಿಲ್ಲದೆ ನಡೆಯುತ್ತಿದೆ.

ಬಸ್ರೂರಿನಲ್ಲಿ ವಾರ್ಷಿಕ ಆದಾಯ 4.64 ಲ.ರೂ., ಖರ್ಚು 3.37 ಲ.ರೂ., ವಂಡ್ಸೆಯಲ್ಲಿ ಎಂಟು ಮಂದಿ ಕೆಲಸಕ್ಕಿದ್ದು ತಿಂಗಳ ಆದಾಯ 1.15 ಲ.ರೂ., ಖರ್ಚು 1 ಲ.ರೂ., ಕಾಡೂರಿನಲ್ಲಿ ವಾರ್ಷಿಕ ವ್ಯವಹಾರ 2.52 ಲ.ರೂ., ಸಿದ್ದಾಪುರದಲ್ಲಿ 4.66 ಲ.ರೂ., ಹಂಗಳೂರಿನಲ್ಲಿ 2.24 ಲ.ರೂ., 80 ಬಡಗಬೆಟ್ಟುವಿನಲ್ಲಿ 21 ಲ.ರೂ., ಹೆಜಮಾಡಿಯಲ್ಲಿ 11.49 ಲ.ರೂ. ಇದೆ. 80 ಬಡಗಬೆಟ್ಟು ಗ್ರಾ.ಪಂ. ಜಿಲ್ಲೆಯ ಅತಿ ಹೆಚ್ಚು ವ್ಯವಹಾರ ಕುದುರಿಸುವ ಗ್ರಾ.ಪಂ. ಇಲ್ಲಿ 10-12 ಮಂದಿ ಕೆಲಸಕ್ಕಿದ್ದು 12 ಲ.ರೂ. ಬಳಕೆದಾರರ ಶುಲ್ಕದಿಂದ, 5.65 ಲ.ರೂ. ಕಸಗಳ ಮಾರಾಟದಿಂದ ಬರುತ್ತಿದೆ. ಸಿದ್ದಾಪುರದಲ್ಲಿ 3.63 ಲ.ರೂ. ಶುಲ್ಕದಿಂದ, 70,000 ರೂ. ಕಸ ಮಾರಾಟದಿಂದ ಆದಾಯ ಸಂಗ್ರಹವಾಗುತ್ತಿದೆ.

ಜಿಲ್ಲೆಯ ಎಸ್.ಎಲ್.ಆರ್.ಎಂ ಘಟಕಗಳ ಕಾರ್ಯ ವೈಖರಿಯನ್ನು ರಾಜ್ಯದ ವಿವಿಧ ಗ್ರಾಮ ಪಂಚಾಯತ್ ಗಳ ಸದಸ್ಯರು ಮತ್ತು ಪಿಡಿಓಗಳು ಆಗಮಿಸಿ ವೀಕ್ಷಿಸಿದ್ದು, ಹಲವು ಪಂಚಾಯತ್ ಗಳು ಇದೇ ಮಾದರಿಯನ್ನು ಅಳವಡಿಸಿಕೊಂಡಿವೆ , ಸಮರ್ಪಕ ತ್ಯಾಜ್ಯ ಸಂಗ್ರಹಣ ಮತ್ತು ವಿಲೇವಾರಿಗೆ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮಾದರಿಯಾಗಿದ್ದು, ಜಿಲ್ಲೆಯಲ್ಲಿ ಎಸ್.ಎಲ್.ಆರ್.ಎಂ ಘಟಕ ಆರಂಭಿಸದ ಗ್ರಾಮ ಪಂಚಾಯತ್ ಗಳು ಡಿಸೆಂಬರ್ ಒಳಗೆ ಎಸ್.ಎಲ್.ಆರ್.ಎಂ ಘಟಕಗಳನ್ನು ಸಂಪೂರ್ಣವಾಗಿ ಕಾರ್ಯಾರಂಭ ಮಾಡುವ ಮೂಲಕ ಜಿಲ್ಲೆಯನ್ನು ಸ್ವಚ್ಚ ಸುಂದರಗೊಳಿಸಲು ತಮ್ಮದೇ ಆದ ಕೊಡುಗೆ ನೀಡುವಂತೆ ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಗಳ ಗ್ರಾಮಸ್ಥರು ಪಂಚಾಯತ್ ಗಳಿಗೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ತಿಳಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ವರದಿ/

ಇದನ್ನೂ ಓದಿ:
► ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ಯಶಸ್ಸಿನ ಗುರಿ: ಸಿಇಓ ಪ್ರೀತಿ ಗೆಹಲೋತ್ – https://kundapraa.com/?p=38966 .
► ಕೋವಿಡ್-19 ಚಿಕಿತ್ಸೆ ನೀಡಲು ಖಾಸಗಿ ಆಸ್ಪ್ಪತ್ರೆಗಳು ಸಿದ್ದವಾಗಬೇಕು: ಡಿ.ಸಿ ಜಿ. ಜಗದೀಶ್ – https://kundapraa.com/?p=38961 .
► ಉಡುಪಿ ಜಿಲ್ಲೆ ಕೋವಿಡ್ ಅಪ್ಡೇಟ್: ಬುಧವಾರ 14 ಪಾಸಿಟಿವ್ ದೃಢ – https://kundapraa.com/?p=38955 .

Exit mobile version