Kundapra.com ಕುಂದಾಪ್ರ ಡಾಟ್ ಕಾಂ

ಸ್ವಂತ ಸೂರು ನಿರ್ಮಿಸುವ ಕನಸು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾಕಾರ

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ನೆಮ್ಮದಿಯಿಂದ ವಾಸಿಸಲು ಸುಸಜ್ಜಿತ ಸೂರು ನಿರ್ಮಿಸಿಕೊಳ್ಳಬೇಕೆಂಬ ಹಂಬಲವೊಂದು ಆ ಕುಟುಂಬಕ್ಕೆ ಗಗನಕುಸುಮವಾಗಿದ್ದ ಹೊತ್ತಿನಲ್ಲಿ, ತಾಲೂಕಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮಾನವೀಯ ನೆರವು ಅವರ ಕನಸನ್ನು ನನಸಾಗಿಸಿದೆ. ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಕೇವಲ ಒಂದೆರಡು ತಿಂಗಳುಗಳಲ್ಲಿ ಸುಂದರ ಮನೆಯೊಂದು ಸಿದ್ಧಗೊಂಡಿದೆ.

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಎಂಬುವವರ ಕುಟುಂಬ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಈ ಮಹತ್ವಾಕಾಂಕ್ಷಿ ಯೋಜನೆಯ ಫಲಾನುಭವಿಗಳು.

2 ತಿಂಗಳಿನಲ್ಲಿ ಗೃಹ ನಿರ್ಮಾಣ ಪೂರ್ಣ:
ಬೇಬಿ ದೇವಾಡಿಗ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಇತ್ತಿಚಿನ ವರ್ಷಗಳಲ್ಲಿ ಅದು ತೀರ ದುಸ್ಥಿತಿಗೆ ತಲುಪಿದ್ದರಿಂದ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅವರಿಗೆ ಆರ್ಥಿಕ ಅಡಚಣೆ ಎದುರಾಗಿತ್ತು. ಆರಂಭದಲ್ಲಿ ಮನೆಯ ತಳಪಾಯ ನಿರ್ಮಾಣಕ್ಕೆ ಅವರು ಕೂಡಿಸಿಟ್ಟಿದ್ದ ಒಂದಿಷ್ಟು ಹಣದೊಂದಿಗೆ ವಂಡ್ಸೆಯ ರಮೇಶ್ ದೇವಾಡಿಗ ಹಾಗೂ ಒಂದಿಷ್ಟು ದಾನಿಗಳು ನೆರವಾಗಿದ್ದರು. ಮನೆಯ ತಳಪಾಯ ಹಾಗೂ ಅರೆಬರೆ ಗೋಡೆ ನಿರ್ಮಾಣವಾಗಿತ್ತು. ಆದರೆ ಮನೆ ಪೂರ್ಣಗೊಳಿಸಲು ಮತ್ತೆ ಆರ್ಥಿಕ ಸಂಕಷ್ಟ ಎದುರಾಗಿ ಅರ್ಧಕ್ಕೆ ಕಾಮಗಾರಿ ನಿಂತಿತ್ತು. ಎರಡು ತಿಂಗಳ ಹಿಂದೆ ಸ್ಥಳೀಯ ಜನಪ್ರತಿನಿಧಿಯೋರ್ವರ ಮೂಲಕ ಕುಟುಂಬದ ಸಂಕಷ್ಟ ಟ್ರಸ್ಟ್‌ನ ಗಮನಕ್ಕೆ ಬಂದಿದ್ದು, ಮನೆಯನ್ನು ಪೂರ್ಣಗೊಳಿಸುವ ಭರವಸೆ ದೊರೆತಿತ್ತು. ಕುಂದಾಪ್ರ ಡಾಟ್ ಕಾಂ ವರದಿ.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರ ಅವರ ನಿರ್ದೇಶನದಂತೆ ಅರ್ಧಕ್ಕೆ ನಿಂತಿದ್ದ ಕಾಮಗಾರಿಯನ್ನು ಇದೀಗ ಪೂರ್ಣಗೊಳಿಸಲಾಗಿದೆ. ಮನೆಯ ಗೋಡೆ ಪೂರ್ಣಗೊಳಿಸಿ ಗಾರೆ, ಮನೆಯ ಮೇಲ್ಛಾವಡಿ, ನೆಲಕ್ಕೆ ಟೈಲ್ಸ್ ಹಾಗೂ ವಿಟ್ರಿಫೈಡ್, ಪೇಟಿಂಗ್ ಮಾಡಿಸಲಾಗಿದ್ದು ಸುಸಜ್ಜಿತವಾಗಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸದ್ಯದಲ್ಲೇ ಫಲಾನುಭವಿಗಳಿಗೆ ಮನೆಯನ್ನು ಹಸ್ತಾಂತರಿಸುವ ಹಾಗೂ ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದೆ.

ಟ್ರಸ್ಟ್ ಮೂಲಕ ಹತ್ತಾರು ನೆರವು:
ಗೋವಿಂದ ಬಾಬು ಪೂಜಾರಿ ಅವರು ಯಶಸ್ವಿ ಉದ್ಯಮಿ. ಅಸಾಧ್ಯವಾದುದನ್ನು ಸಾಧಿಸಿ ಉದ್ಯಮ ಕ್ಷೇತ್ರದಲ್ಲಿ ಯುವಕರಿಗೆ ಮಾದರಿಯಾದವರು. ಉದ್ಯಮದ ಜೊತೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಅದರ ಮೂಲಕ ಶಿಕ್ಷಣ, ಧಾರ್ಮಿಕ, ಆರೋಗ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಪ್ರಸ್ತುತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ವಿದ್ಯಾರ್ಥಿ ವೇತನ, ವಿದ್ಯಾರ್ಥಿ ದತ್ತು ಸ್ವೀಕಾರ, ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹದಂತಹ ಮಹತ್ವಕಾಂಕ್ಷೆಯ ಕಾರ್ಯವನ್ನು ನಿರಂತವಾಗಿ ಮಾಡಿಕೊಂಡು ಬರಲಾಗುತ್ತಿದೆ/ಕುಂದಾಪ್ರ ಡಾಟ್ ಕಾಂ ವರದಿ/

ಇದನ್ನೂ ಓದಿ:
► ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ನಿರ್ಮಿಸಿದ ಶ್ರೀ ಕೃಷ್ಣ ನಿಲಯ ಉದ್ಘಾಟನೆhttps://kundapraa.com/svct-constructed-new-home-handovered-to-benifisher/

Exit mobile version