Kundapra.com ಕುಂದಾಪ್ರ ಡಾಟ್ ಕಾಂ

ತರಕಾರಿ ಬೆಲೆಯಲ್ಲಿ ಭಾರಿ ಏರಿಕೆ

ಕೊರೋನಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಜೊತೆ ಇದೀಗ ತರಕಾರಿಗಳ ಬೆಲೆಯೂ ಏರಿಕೆಯಾಗಿದ್ದು, ಗ್ರಾಹಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಕೊರೋನಾದಿಂದ ಮಾರುಕಟ್ಟೆಯ ವಸ್ತುಗಳ ಬೆಲೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದಿನ ನಿತ್ಯ ಬಳಕೆಯ ವಸ್ತುಗಳೊಂದಿಗೆ ಪ್ರತಿದಿನ ಏರುತ್ತಿರುವ ತರಕಾರಿಯ ಬೆಲೆಯಿಂದ ಖರೀದಿದಾರರಿಗೆ ತೊಂದರೆಯಾಗಿ, ಖರೀದಿ ಮಾಡದೇ ಬೇರೆದಾರಿಯಿಲ್ಲ ಎಂಬಂತಾಗಿದೆ. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಕುಸಿದಿದ್ದ ತರಕಾರಿಗಳ ಬೆಲೆ, ಇದೀಗ ತುಂಬಾ ಏರಿಕೆಯನ್ನು ಕಂಡಿದೆ. ಕೊರೋನಾದಿಂದ ಸರಿಯಾದ ಸಂಚಾರ ವ್ಯವಸ್ಥೆಯಿಲ್ಲದೆ ಒಂದು ಸ್ಥಳದಿಂದ ಇನ್ನೊಂದು ಕಡೆಗೆ ರವಾನೆಯಾಗುತ್ತಿದ್ದ ತರಕಾರಿಗಳ ಸಾಗಾಣಿಕೆಯಲ್ಲೂ ಇಳಿಮುಖವಿದೆ.

ಟೊಮ್ಯಾಟೊ ಕೆಜಿಗೆ 35ರೂ, ಈರುಳ್ಳಿ 80ರ ಆಸುಪಾಸಿಲ್ಲಿದ್ದರೆ, ಕ್ಯಾರೆಟ್, ಬೀಟ್ರೂಟ್ ಸಹ ಕೆಜಿಗೆ 40ರ ಸನಿಹದಲ್ಲಿದೆ. ಇನ್ನು ಬೀನ್ಸ್ 150ರ ಗಡಿ ದಾಟಿದೆ. ಜೊತೆಗೆ ಮಾಂಸ, ಮೊಟ್ಟೆಯ ಬೆಲೆಯಲ್ಲೂ ಭಾರಿ ಏರಿಕೆಯಾಗಿದ್ದು ಜನರಿಗೆ ಬಹಳ ಸಮಸ್ಯೆಯಾಗಿದೆ.

ಅತೀಯಾದ ಮಳೆಯಿಂದ ಬೆಳೆ ನಾಶ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕೊರತೆ ಹಾಗೂ ಭಾರತದಿಂದ ರಫ್ತಾಗುತ್ತಿದ್ದ ವಸ್ತುಗಳ ವಹಿವಾಟು ನಿಂತಿರುವುದು ತರಕಾರಿಗಳ ಬೆಲೆ ಏರಿಕೆಗೆ ಮುಖ್ಯ ಕಾರಣಗಳು ಎನ್ನಲಾಗುತ್ತಿದೆ.

‘ಎಲ್ಲಾ ತರಹದ ತರಕಾರಿಗಳು ಅಂಗಡಿಗೆ ಬರುತ್ತಿಲ್ಲ. ಅಲ್ಲದೇ ಮಳೆಯಿಂದ ಹಾನಿಯಾಗಿದೆ. ಕಳೆದೆರಡು ವಾರದಿಂದ ಬೆಲೆಯೂ ಜಾಸ್ತಿಯಾಗಿ ಕೆಲ ತರಕಾರಿಗಳೂ ಅಷ್ಟಾಗಿ ಮಾರಾಟವಾಗುತ್ತಿಲ್ಲ, ಸ್ವಲ್ಪಕಷ್ಟವಾಗಿದೆ’ ಎನ್ನುವುದುತರಕಾರಿ ಮಾರಾಟಗಾರರ ಗೋಳಾದರೆ, ’ತರಕಾರಿ ಬೆಲೆ ಜಾಸ್ತಿಯಾಗಿದೆ, ಒಂದೇ ತರಹದ ತರಕಾರಿಯನ್ನು ದಿನ ತಿನ್ನಲೂ ಕಷ್ಟ. ಬೆಲೆ ಜಾಸ್ತಿಯಾದರೂ ಅದನ್ನೂ ಖರೀದಿಸದೇ ಬೇರೆ ಉಪಾಯವಿಲ್ಲ’ ಎನ್ನುವುದು ಗ್ರಾಹಕರ ಸಮಸ್ಯೆ.

ಕೊರೋನಾ ಕಾರಣ ಕೆಲಸ ಕಳೆದುಕೊಂಡಿರುವವರಿಗೆ, ಹಾಗೂ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಈ ಬೆಲೆ ಏರಿಕೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿ ಜೀವನ ನಡೆಸಲು ಸಂಕಷ್ಟವಾಗಿದೆ.

Exit mobile version