Kundapra.com ಕುಂದಾಪ್ರ ಡಾಟ್ ಕಾಂ

ಎಚ್. ಶ್ರೀಧರ ಹಂದೆ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ವರುಣತೀರ್ಥ ಕೆರೆ ಸಮೀಪ ಕೋಟದ ಪಂಚವರ್ಣ ಯುವಕ ಮಂಡಲದ 23ನೇ ವರ್ಷದ ಕನ್ನಡ ರಾಜ್ಯೋತ್ಸವ ಸದ್ಭಾವನಾ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕನ್ನಡದ ಶಬ್ಧಕೋಶ ಶುದ್ಧವಾಗಿ ಉಳಿಯಲು ಯಕ್ಷಗಾನವೇ ಮೂಲ ಕಾರಣ ಬೆಂಗಳೂರಿನಂತಹ ನಗರದಲ್ಲಿ ಶೇ60ರಷ್ಟು ಹೊರಭಾಷಿಗರು ಇದ್ದರೂ, ಕನ್ನಡವನ್ನು ನಮ್ಮ ಕಲೆ, ಸಂಸ್ಕೃತಿ, ಯಕ್ಷಗಾನದಂತಹ ಕಲೆಗಳು ಉಳಿಸಿವೆ ಎಂದು ಹೇಳಿದರಲ್ಲದೆ ಸ್ಥಳೀಯವಾಗಿ  ಭಾಗದಲ್ಲಿ ಕನ್ನಡಪರ ಕಾರ್ಯಕ್ರಮಗಳೊಂದಿಗೆ ಸಮಾಜಮುಖಿ ಚಿಂತನೆಗಳೊಂದಿಗೆ ಪರಿಸರ ಕಾಳಜಿ,ಸ್ವಚ್ಛತಾ ಕಾರ್ಯ,ರೈತರನ್ನು ಗುರುತಿಸುವ ವಿಭಿನ್ನ ರೀತಿಯ ಕಾರ್ಯಕ್ರಮಗಳಿಂದ ಮನೆಮಾತಾಗಿ ಬೆಳೆದ ಸಂಸ್ಥೆ ಪಂಚವರ್ಣ ಯುವಕರ ಪಡೆಯ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು

ಕೆರೆಗಳ ಅಭಿವೃದ್ಧಿಗೆ ಅನುದಾನ: ಸರ್ಕಾರ ಈ ಬಾರಿ ಕೆರೆಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಹಾಕಿಕೊಂಡಿದೆ. ರೂ25ಲಕ್ಷವನ್ನು ಕೆರೆಗಳ ಸರ್ವೇ ಮಾಡಲು ಅನುದಾನ ನೀಡಿದೆ. ಸುಮಾರು 200ಕೋಟಿ ಯೋಜನೆಯಲ್ಲಿ ಬಾರ್ಕೂರಿನ ಚೌಳಿಕೆರೆ, ಕೋಟದ ವರುಣತೀರ್ಥ ಸೇರಿದಂತೆ ೨೫ಕೆರೆಗಳನ್ನು ಅಭಿವೃದ್ಧಿ ಪಡಿಸಿ ವಾರಾಹಿಯ ನೀರನ್ನು ಈ ಕೆರೆಗಳಿಗೆ ತರುವ ಪ್ರಯತ್ನದ ಯೋಜನೆಯನ್ನು ಅನುಷ್ಟಾನಕ್ಕೆ ತರುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.

ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಉದ್ಘಾಟಿಸಿ ಮಾತನಾಡಿ ಯಾವುದೇ ಸಂಘ ಸಂಸ್ಥೆಗಳು ಎಲ್ಲರನ್ನೂ ಒಗ್ಗೂಡಿಸಿ ಸಮಾಜಮುಖಿ ಕಾರ್ಯ ಮಾಡಿದಲ್ಲಿ ಎಲ್ಲರಿಂದಲೂ ಪ್ರೋತ್ಸಾಹ ಸಿಗುತ್ತದೆ ಎನ್ನುವುದಕ್ಕೆ ಪಂಚವರ್ಣ ಸಾಕ್ಷಿ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್. ಶ್ರೀಧರ ಹಂದೆ ಮನೆಯಲ್ಲಿ ಕನ್ನಡ ಬಳಕೆ ಹೆಚ್ಚಿದಲ್ಲಿ ನಮ್ಮ ಮಕ್ಕಳೂ ಅದನ್ನೇ ಕಲಿಯುತ್ತಾರೆ. ಆಂಗ್ಲ ಭಾಷೆಯ ವ್ಯಾಮೋಹವಿದ್ದರೂ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಹೇಳಿದರು.

ಇದೇ ಸಂದರ್ಭ ಪಂಚವರ್ಣ ವಿಶೇಷ ಪುರಸ್ಕಾರವನ್ನು ಗೋಪಾಡಿ ಯುವಕ ಮಂಡಲ, ಸಮಾಜಸೇವೆಗಾಗಿ ನಿತ್ಯಾನಂದ ವಳಕಾಡು, ಪ್ರಗತಿಪರ ಯುವ ಕೃಷಿಕ ಶೀಲರಾಜ ಕಾಂಚನ್‌ಗೆ ಯುವ ಕೃಷಿಕ ಗೌರವ, ಖೇಲೊ ಇಂಡಿಯಾ ಖ್ಯಾತಿಯ ಅಖಿಲೇಶ್ ಅವರಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷದೇಗುಲದ ಸುದರ್ಶನ ಉರಾಳ ಅವರನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು.

ಸಂಘದ ಸ್ಥಾಪಕರಲ್ಲೊಬ್ಬರಾದ ದಿ. ಮಣೂರು ಉದಯ ಪೂಜಾರಿ ಸ್ಮರಣಾರ್ಥ ಆರೋಗ್ಯ ನಿಧಿ, ವಿದ್ಯಾರ್ಥಿ ವೇತನ, ಕೋಟ ಸಿ ಎ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಕೋಟದ ಶಿಶುಮಂದಿರದ ಮಕ್ಕಳಿಗೆ ಸಮವಸ್ತ್ರ ನೀಡಲಾಯಿತು.

ಸಂಘದ ಅಧ್ಯಕ್ಷ ಗಿರೀಶ ಆಚಾರ್ಯ ಅಧ್ಯಕ್ಷತೆ ವಹಸಿದ್ದರು. ಪಾಂಡೇಶ್ವರದ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ ಶುಭಾಶಂಸನೆಗೈದರು.ಮುಖ್ಯ ಅತಿಥಿಗಳಾಗಿ ಶೃಂಗೇರಿ ಗೌರಿಗದ್ದೆಯ ಮಹಾತ್ಮಗಾಂಧಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ.ಬಿ.ರಾಘವೇಂದ್ರ ಶೆಟ್ಟಿ, ಸೃಷ್ಠಿ ಇಂಜಿನಿಯರಿಂಗ್‌ನ ನಿರ್ದೇಶಕ ಜಯರಾಜ್ ವಿ ಶೆಟ್ಟಿ, ಜಯಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ, ಉದ್ಯಮಿ ಪ್ಲೆಸೆಂಟ್‌ನ ಇಬ್ರಾಹಿಂ ಸಾಹೇಬ್, ಪಂಚವರ್ಣ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಗೌರವಾಧ್ಯಕ್ಷ ಕೆ.ವೆಂಕಟೇಶ ಪ್ರಭು ಉಪಸ್ಥಿತರಿದ್ದರು.

ಸಂಘದ ಸಲಹಾ ಸಮಿತಿಯ ಸದಸ್ಯ ಕೆ.ಚಂದ್ರ ಆಚಾರ್ಯ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಅಜಿತ್ ಆಚಾರ್ಯ ವರದಿ ವಾಚಿಸಿದರು. ಸಂಘದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿಯ ಸದಸ್ಯ ಚಂದ್ರ ಪೂಜಾರಿ ವಂದಿಸಿದರು. ಪ್ರಸಾದ್ ಬಿಲ್ಲವ ಹಾಗೂ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.

ವಿಶಿಷ್ಟ ರೀತಿಯ ಸನ್ಮಾನ
ಪ್ರಶಸ್ತಿ ಪುರಸ್ಕೃತ ಎಚ್.ಶ್ರೀಧರ ಹಂದೆ ಅವರ ಬಗ್ಗೆ ಕೋಟ ಜನಾರ್ಧನ ಹಂದೆ ಯಕ್ಷಗಾನ ಶೈಲಿಯಲ್ಲಿ ರಚಿಸಿದ ಹಾಡನ್ನು ಭಾಗವತ ಚಂದ್ರಕಾಂತ ರಾವ್ ಮೂಡುಬೆಳ್ಳೆ ಅವರ ಅದ್ಭುತ ಭಾಗವತಿಕೆ ಎಲ್ಲರ ಗಮನ ಸೆಳೆಯಿತು.

Exit mobile version