Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಂಬಂಧಗಳ ಬಂಧ ಗಟ್ಟಿಗೊಳಿಸಿದ ‘ನಮ್ಮನಿ ಮದಿ’

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಮದುವೆ ಮನೆ ಅಂದ ಮೇಲೆ ಬಂಧು ಬಳಗ ಸ್ನೇಹಿತರೆಲ್ಲಾ ಸೇರಿ ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳೋದು ಮಾಮೂಲು. ಆದರೆ ಕುಂದಾಪುರದಲ್ಲಿ ನಡೆದ ಮದುವೆಯೊಂದು ಇವೆಲ್ಲದಕ್ಕೂ ಸಾಕ್ಷಿಯಾಗುವುದರ ಜೊತೆಗೆ ತೀರಾ ಭಿನ್ನವಾಗಿ ನಡೆದು ಸಂಬಂಧಗಳ ಬಂಧ ಗಟ್ಟಿಗೊಳಿಸಿದ್ದು ಮಾತ್ರವಲ್ಲದೇ ಸಮಾಜಕ್ಕೂ ಉತ್ತಮ ಸಂದೇಶ ನೀಡಿದೆ.

ಹೌದು ಇಂತಹದ್ದೊಂದು ಮಾದರಿ ಮದುವೆ ನಡೆದದ್ದು ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಅವರ ಕುಟುಂಬದಲ್ಲಿ. ಕಿಶೋರ್ ಅವರ ಸಹೋದರ ಚಂದ್ರಶೇಖರ್ ಹಾಗೂ ಶೈಲಾ ದಂಪತಿಗಳ ಪುತ್ರ ಸಾತ್ವಿಕ್ ಅವರ ವಿವಾಹ ಶ್ರೀದೇವಿ ಅವರೊಂದಿಗೆ ಜನವರಿ 20ರಂದು ಸಂಭ್ರಮದಿಂದ ನಡೆಯಿತು. ಅದು ಇತರ ಮದುವೆಗಳಂತೆ ತೋರಿಕೆಯ, ಪ್ರತಿಷ್ಠೆ ಪ್ರದರ್ಶನದ ಮದುವೆ ಆಗಿರದೇ ಸಂಬಂಧಗಳನ್ನು ಬೆಸೆದ, ನಿಜಾರ್ಥದಲ್ಲಿ ಸಂಭ್ರಮವನ್ನು ತುಂಬಿದ, ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿದ ಮುದುವೆಯಾಗಿತ್ತು.

ನಮ್ಮನಿ ಮದಿ!
ನಮ್ಮನಿ ಮದಿ ಒಂದೆರಡು ದಿನದ ಸಂಭ್ರಮಕ್ಕಷ್ಟೇ ಸೀಮಿತವಾಗಿರಲಿಲ್ಲ. ವಾರ ಪೂರ್ತಿ ತಿಂಡಿ, ತಿನಿಸು, ಅಲಂಕಾರ, ಮಾತು, ಕಥೆ, ನಾಟಕ, ಹಾಡು ಹರಟೆ, ನೀತಿ ಪಾಠ ಎಲ್ಲರಕ್ಕೂ ಒಂದು ವೇದಿಕೆಯಾಯಿತು. ಮುಂಬೈ, ಬೆಂಗಳೂರು, ಕಾರ್ಕಳ, ಉಡುಪಿ ಮೊದಲಾದೆಡೆ ಇರುವ ಬಂಧುಗಳು ವಾರಗಳ ಕಾಲ ನಮ್ಮನಿ ಮದಿಯಲ್ಲಿದ್ದು ಸಂಭ್ರಮಿಸಿದರು. ಸಾತ್ವಿಕ್ ಹಾಗೂ ಶ್ರೀದೇವಿ ಅವರ ಬದುಕಿನ ಪುಟದಲ್ಲಿ ಅಂತಹದ್ದೊಂದು ಸಂಭ್ರಮದ ಅಧ್ಯಾಯ ದಾಖಲಾಯಿತು.

7 ದಿನ ತಹರೇವಾರು ಖಾದ್ಯಗಳು:
ಜನವರಿ 16 ರಿಂದ 23ರ ತನಕ ನಡೆದ ಮದುವೆ ಸಂಭ್ರಮದಲ್ಲಿ ತಿಂಡಿ ತಿನಿಸು ಪಾನಿಯಗಳದ್ದೇ ಕಾರುಬಾರು. ಬೆಳಿಗ್ಗೆ ಮಧ್ಯಾಹ್ನ ಸಂಜೆ ಹಾಗೂ ರಾತ್ರಿ ಬಗೆ ಬಗೆಯ ಖಾದ್ಯಗಳನ್ನು ಸವಿದ ಬಂಧುಗಳು. ಕೇಳಿದಂತೆ ತಯಾರಿಸಿಕೊಡುವ ಬಾಣಸಿಗರು ಕೂಡ ಅಲ್ಲಿ ಸಿದ್ಧವಿದ್ದುದರಿಂದ ಕುಟುಂಬಿಕರಿಗೆ ಮೆನುವಿನಲ್ಲಿ ಇಲ್ಲದೇ ತಿನ್ನಲೇಬೇಕು ಅಂತನಿಸಿದ ಹಲವು ಖಾದ್ಯಗಳು ಕೂಡ ತಯಾರಾಗಿದ್ದವು. ಒಟ್ಟಿನಲ್ಲಿ ಇಂತಹದ್ದನ್ನು ತಿನ್ನಬೇಕು ಎಂದುಕೊಂಡದ್ದು ತಕ್ಷಣದಲ್ಲಿ ತಯಾರಾಗುತ್ತಿತ್ತು. ಮಿಠಾಯಿ ಮನೆ, ಹನೆಹಣ್ಣು ಕೂಡ ಮದುವೆ ಮನೆಯಲ್ಲಿ ಸ್ಥಾನ ಪಡೆದದ್ದು ವಿಶೇಷ.

ಸಾಂಸ್ಕೃತಿಕ ಕಾರ್ಯಕ್ರಮದ ರಂಗು:
ಮದುವೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಸ್ಥಾನ ಪಡೆದುಕೊಂಡಿದ್ದವು. ಭಜನೆ, ಸಮೂಹ ನೃತ್ಯ, ವೈಯಕ್ತಿಕ ನೃತ್ಯ, ವಿಶೇಷ ವಾದ್ಯ ಸಂಗೀತ, ಅಂತ್ಯಾಕ್ಷರಿ ಛದ್ಮವೇಷ, ಕಿರು ಪ್ರಹಸನ, ಅಷ್ಟೇ ಅಲ್ಲದೇ ಮೋಹ ಎಂಬ ನಾಟಕವೂ ಕುಟುಂಬಿಕರಿಂದಲೇ ಪ್ರದರ್ಶನಗೊಂಡಿತು.

ಸಂಸಾರದಲ್ಲಿ ಸರಿಗಮ:
ನಮ್ಮನಿ ಮದಿಯಲ್ಲಿ ಖಾದ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ಮಾತ್ರವೇ ಇರದೇ ಸಂಸಾರದಲ್ಲಿ ಸರಿಗಮ ಎಂಬ ಕೌಟುಂಬಿಕ ಸೌಹಾರ್ದತೆಯ ಕುರಿತ ಚಿಂತನವನ್ನೂ ಏರ್ಪಡಿಸಲಾಗಿತ್ತು. ಖ್ಯಾತ ವಾಗ್ಮಿ ಓಂಗಣೇಶ್ ಉಪ್ಪುಂದ ಅವರ ಉಪನ್ಯಾಸ ಕಾರ್ಯಕ್ರಮಕ್ಕೆ ಮೆರಗು ನೀಡಿತು.

ನಿಜಾರ್ಥದ ಕುಟುಂಬ ಮಿಲನ:
ಮದುವೆ ಎಂದ ಕೂಡಲೇ ಹತ್ತಿರದ ಬಂಧುಗಳು ಕೂಡ ಮದುವೆ ಛತ್ರಕ್ಕೆ ಬಂಧು ಹೋಗುವುದು ಇತ್ತಿಚಿಗೆ ತೀರಾ ಸಾಮಾನ್ಯವಾಗಿ ಹೋಗಿದೆ. ಹೀಗಿರುವಾದ ಬಂಧುಗಳನ್ನಲ್ಲಾ ಒಟ್ಟಿಗೆ ಸೇರಿದ ವಾರಗಳ ಕಾಲ ಮದುವೆಯನ್ನು ಸಂಭ್ರಮಿಸುವುದು ತೀರಾ ಅಪರೂಪ. ಹಾಗಾಗಿಯೇ ನಮ್ಮನಿ ಮದಿ ಭಿನ್ನವಾಗಿ ಕಾಣಿಸಿಕೊಂಡಿತು. ಅದು ಕುಟುಂಬಿಕರ ಪ್ರತಿ ನಡೆಯಲ್ಲೂ ವ್ಯಕ್ತವಾಗುತ್ತಿತ್ತು. ಸಂಬಂಧಿಕರೆಲ್ಲಾ ವಿದಾಯ ಕೂಟದಲ್ಲಿ ಭಾರವಾದ ಹೃದಯದೊಂದಿಗೆ ತೆರಳುವಲ್ಲಿ ಸಂಭ್ರಮ ಸಾರ್ಥಕ್ಯವನ್ನು ಪಡೆದುಕೊಂಡಿತ್ತು.

“ಮದುವೆಯೆಂದರೆ ಮೆಹಂದಿಯಷ್ಟೇ ಮಹತ್ವ ಪಡೆಯುತ್ತಿರುವ ದಿನಗಳಲ್ಲಿ ನಿಜವಾದ ಮದುವೆ ಸಂಭ್ರಮ ಬೇರೆಯದ್ದೇ ಇದೆ ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ವಾರಗಳ ಕಾಲ ಸಂಬಂಧಿಗಳೆಲ್ಲಾ ಸೇರಿ ಸಂತಸದ ಕ್ಷಣಗಳನ್ನು, ಮನಸ್ಸಿನ ಭಾವನೆಗಳನ್ನು ಹಂಚಿಕೊಂಡೆವು. ಮದುವೆ ನಡೆಯುವುದರೊಂದಿಗೆ ಪರಸ್ಪರ ಭಾಂದವ್ಯವೂ ಗಟ್ಟಿಗೊಂಡಿತು ಎಂಬ ಸಾರ್ಥಕ್ಯವಿದೆ. – ಕಿಶೋರ್ ಕುಮಾರ್, ಅಧ್ಯಕ್ಷರು ಕಲಾಕ್ಷೇತ್ರ ಕುಂದಾಪುರ

“ನಮ್ಮನಿ ಮದಿ ನಮಗೊಂದು ವಿಶಿಷ್ಟ ಅನುಭವ ದೊರಕಿಸಿಕೊಟ್ಟಿದೆ. ಕುಟುಂಬಿಕರೊಂದಿಗೆ ಬೆರೆದು ಸಂಭ್ರಮಿಸುವುದಕ್ಕೆ ಇದು ಸಾಧ್ಯವಾಯಿತು. ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. – ಶ್ರೀದೇವಿ ಹಾಗೂ ಸಾತ್ವಿಕ್, ನೂತನ ವಧುವರರು

Exit mobile version