Kundapra.com ಕುಂದಾಪ್ರ ಡಾಟ್ ಕಾಂ

ಗುಲ್ವಾಡಿ: ‘ಆ 90 ದಿನಗಳು’ ಸಿನೆಮಾ ಮುಹೂರ್ತ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗುಲ್ವಾಡಿಯ ಗುಜರಿ ಅಂಗಡಿಯಲ್ಲಿ ಸೋಮವಾರ ಆ 90 ದಿನಗಳು ಚಿತ್ರದ ಮುಹೂರ್ತ ಸಮಾರಂಭ ಜರುಗಿತು.

ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣಕುಮಾರ್ ಶೆಟ್ಟಿ ಕ್ಯಾಮರಾಗೆ ಚಾಲನೆ ನೀಡಿ ಮಾತನಾಡಿ ಸಿನೆಮಾ ನಿರ್ಮಾಣ ಮಾಡುವುದು ಚಿಕ್ಕ ವಿಷಯವಲ್ಲ. ಪ್ರತಿಭಾನ್ವಿತರೊಂದಿಗೆ ಉತ್ತಮ ತಂಡ ಸಿನೆಮಾ ನಿರ್ಮಿಸುತ್ತಿದ್ದು ತಂಡಕ್ಕೆ ಯಶಸ್ಸು ದೊರೆಯಲಿ ಎಂದವರು ಆಶಿಸಿದರು.

ಪತ್ರಕರ್ತ ಎಸ್. ಜನಾರ್ದನ ಮರವಂತೆ ಮಾತನಾಡಿ ಯಾಕುಬ್ ಅವರ ಜೀವನದೃಷ್ಟಿ ವಿಶೇಷವಾದುದು. ಅವರ ಹಿಂದಿನ ಎರಡು ಸಿನೆಮಾಗಳಿಗೆ ಅಂತರಾಷ್ಟ್ರೀಯ ಮನ್ನಣೆ ದೊರೆತಾಗ ಹಾಗೂ ಕೊರೋನಾ ಕಾಲದಲ್ಲಿ ಅವರು ತಮ್ಮ ಹಿಂದಿನ ಬದುಕಿಗೆ ಮರಳಿದಾಗಲೂ ಅವರಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಎಲ್ಲವನ್ನೂ ಸಕಾರಾತ್ಮಕವಾಗಿ ಗ್ರಹಿಸುವುದರಿಂದಲೇ ಅವರು ಮತ್ತೆ ರೋನಾಲ್ಡ್ ಲೋಬೋ ಅವರೊಂದಿಗೆ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಕುಂದಾಪುರವನ್ನು ಕೇಂದ್ರವಾಗಿರಿಸಿಕೊಂಡು ಅವರ ನಿರ್ಮಿಸುತ್ತಿರುವ ಸಿನೆಮಾಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಪ್ರಕಾಶ್ ತೋಳಾರ್, ಉದಯಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಸಂಘಟಕ ಸುಬ್ರಹ್ಮಣ್ಯ ಶೆಟ್ಟಿ, ನಟರಾದ ಬಿ. ಶಿವಾನಂದ, ಸ್ಥಳೀಯರಾದ ವಿವೇಕಾನಂದ ಭಂಡಾರಿ ಮೊದಲಾದವರು ಇದ್ದರು.

ಚಿತ್ರದ ನಿರ್ದೇಶಕರುಗಳಾದ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ರೋನಾಲ್ಡ್ ಲೋಬೋ ತಮ್ಮ ಸಿನೆಮಾ ಕನಸನ್ನು ತೆರೆದಿಟ್ಟರು. ಗುಲ್ವಾಡಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನೆಮಾಗೆ ಕಥೆ ಚಿತ್ರಕಥೆ ಸಂಭಾಷಣೆಯನ್ನು ರೋನಾಲ್ಡ್ ಲೋಬೋ ಅವರು ಬರೆದಿದ್ದು, ನಿರ್ದೇಶನವನ್ನು ರೋನಾಲ್ಡ್ ಲೋಬೋ ಹಾಗೂ ಯಾಕುಬ್ ಖಾದರ್ ಗುಲ್ವಾಡಿ ಅವರು ಮಾಡುತ್ತಿದ್ದಾರೆ. ಪಿವಿಆರ್ ಸ್ವಾಮಿ ಕ್ಯಾಮರಾ ಜವಾಬ್ದಾರಿ, ನಾಗೇಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರತಿಕ್ ಮುರ್ಡೇಶ್ವರ ನಾಯಕ ನಟನಾಗಿ ನಟಿಸುತ್ತಿದ್ದು, ಚಂದ್ರಿಕಾ ನಾಯಕ ನಟಿಯಾಗಿದ್ದಾರೆ. ಹಿರಿಯ ನಟಿ ಭವ್ಯ ಸಿನೆಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದು, ಕೃತಿಕಾ ಬಾಗಲಕೋಟೆ, ಪ್ರಾಪ್ತಿ ಮಡಪ್ಪಾಡಿ ಸೇರಿದಂತೆ ಹಲವು ಸ್ಥಳೀಯ ನಟ ನಟಿಯರು ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Exit mobile version