Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಹಣೆಬರವನ್ನು ನಂಬಿ ಬದುಕಿದವರು ನಾವಲ್ಲ ಹಣೆಯ ಬೆವರನ್ನು ನಂಬಿ ಬದುಕುತ್ತಿರುವ ರೈತರು ನಾವು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು ಹೇಳಿದರು.

ಅವರು ಕೋಟದ ಪಂಚವರ್ಣ ಯುವಕ ಮಂಡಲ ಇವರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ಮಣೂರು ಇವರ ಸಹಯೋಗದೊಂದಿಗೆ 6 ತಿಂಗಳ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅದೃಷ್ಟವನ್ನು ನಂಬಿ ಬದುಕಿದವರು ನಾವಲ್ಲ ದೂರದೃಷ್ಟಿಯನ್ನು ಇಟ್ಟುಕೊಂಡು ಕೃಷಿ ಕ್ಷೇತ್ರದಲ್ಲಿ ಒಂದೊಂದೆ ವಿಧಾನವನ್ನು ಕಂಡುಕೊಂಡು ಬದುಕುತ್ತಿರುವ ರೈತರು ಅಂತಹ ರೈತರನ್ನು ಗುರುತಿಸುವುದು ಪ್ರೋತ್ಸಾಹಿಸುವುದು ಅತ್ಯಗತ್ಯ ,ಇನ್ನು ಕೃಷಿಯಲ್ಲಿ ನಷ್ಟ ಅನ್ನೋದು ಸತ್ಯಕ್ಕೆ ದೂರವಾದ ವಿಚಾರ ,ಸಾಂಪ್ರಾದಾಯಕ ಕೃಷಿ ಪದ್ಧತಿಯಿಂದ ಹಿಂದಿನ ಹಿರಿಯರು ಯಶಸ್ಸು ಕಂಡಿದ್ದಾರೆ. ಆದರೆ ಇಂದಿನ ಆಧುನಿಕ ಕೃಷಿ ಪದ್ದತಿಯಲ್ಲಿ ಮತ್ತಷ್ಟು ಯಶಸ್ಸು ಕಾಣಲು ಸಾಧ್ಯ ಎಂದರಲ್ಲದೆ ಕೃಷಿ ಒಂದನ್ನೆ ಅವಲಂಬಿಸದೆ ಅದಕ್ಕೆ ಪೂರಕವಾದ ಹೈನುಗಾರಿಕೆ, ಕೋಳಿ ಸಾಕಾರಣೆ ಇದನ್ನೆಲ್ಲ ನಂಬಿ ಬದುಕಿದೆ ಜೀವನ ಪರಿಯಂತ ಯಶಸ್ಸು ಕಾಣಲು ಸಾಧ್ಯ ಎಂದು ಇಲ್ಲಿನ ಎಲ್ಲಾ ಸಂಘಟಕರು ಮನೆಯ ಬಾಗಿಲಿಗೆ ಬಂದು ಗೌರವಿಸುವ ಕಾರ್ಯ ಎಲ್ಲಾ ಪ್ರಶಸ್ತಿಗಳಿಗಿಂತ ಶ್ರೇಷ್ಠವಾದದ್ದು ಎಂದು ಭಾವಿಸಿ ಇದು ನಿರಂತವಾಗಿ ನಡೆಯುವಂತಾಗಲಿ ಎಂದರು.

ಈ ದೇಶದ ಬೆನ್ನೆಲುಬು ಎಂದು ಬರಿ ಬಾಯಲ್ಲಿ ಹೇಳಿದರೆ ಸಾಲದು ಅದಕ್ಕೆ ಸಮನಾದ ಪ್ರೋತ್ಸಾಹ ಅತ್ಯಗತ್ಯ ಈ ದಿಸೆಯಲ್ಲಿ ಸರಕಾರ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಅವನ ಸಮಸ್ಯೆಯನ್ನು ಮನಗಾಣಬೇಕು.ರೈತರು ಬೆಳೆದ ಫಸಲಿಗೆ ಸರಿಸಮನಾದ ಬೆಂಬಲ ಬೆಲೆ ಕಾಲಕ್ಕನುಗುಣವಾಗಿ ಸಿಗಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಸಾಸ್ತಾನದ ಉದ್ಯಮಿ ಬಾಲಕೃಷ್ಣ ಪೂಜಾರಿ ಮಾತನಾಡಿ, ಕೃಷಿಕರನ್ನು ಗೌರವಿಸುವುದು ಬಲು ಅಪರೂಪವಾದರೂ ಇಲ್ಲೊಂದು ಸಂಘಟಕರು ಮನೆಗೆ ತೆರಳಿ ಗೌರವಿಸುವ ಕಾರ್ಯಕ್ರಮ ಇತರ ಸಂಘಟನೆಗಳಿಗೂ ಪ್ರೇರಣೆಯಾಗಬೇಕು. ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಅಧ್ಯಕ್ಷ ಚೆಂಪಿ ವೆಂಕಟೇಶ ಭಟ್,ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಕುಸುಮ ಎಮ್ ಪೂಜಾರಿ, ಸಾಸ್ತಾನದ ಉದ್ಯಮಿ ಮನೋಜ್ ಪೂಜಾರಿ, ಕೋಟ ರೈತ ಧ್ವನಿ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಪಾಂಡೇಶ್ವರದ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಗಿಳಿಯಾರು ಯುವಕ ಮಂಡಲ ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರ್,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಂಚಾಲಕಿ ಸುಜಾತ ಬಾಯಿರಿ, ಮಣೂರು ಪರಿಸರದ ಹಿರಿಯ ಕೃಷಿಕ ಕೃಷ್ಣಯ್ಯ ಶೆಟ್ಟಿ, ಕೋಟ ಗ್ರಾ.ಪಂ ಮಾಜಿ ಸದಸ್ಯ ವಿಜಯ ಕುಂದರ್ ಉಪಸ್ಥಿತರಿದ್ದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಯುವಕ ಮಂಡಲ ಸಂಘಟನಾಕಾರ್ಯದರ್ಶಿ ಅಜಿತ್ ಆಚಾರ್ಯ ನಿರೂಪಿಸಿ ವಂದಿಸಿದರು.

Exit mobile version