Kundapra.com ಕುಂದಾಪ್ರ ಡಾಟ್ ಕಾಂ

ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರ ನೀಡಲು ಸೂಚನೆ: ಸಚಿವ ಆರ್. ಅಶೋಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಸಾಕಷ್ಟು ಹಾನಿಯಾಗಿದ್ದು ನೆರೆಯಿಂದ ನೀರು ನುಗ್ಗಿದ ಮನೆಗಳಿಗೆ 10 ಸಾವಿರ, ಭಾಗಶಃ ಹಾನಿಯಾದ ಮನೆಗಳಿಗೆ 1 ಲಕ್ಷ ರೂ. ಪೂರ್ಣ ಹಾನಿಯಾದ ಮನೆಗಳಿಗೆ ಮೊದಲ ಕಂತಿನಲ್ಲಿ 1 ಲಕ್ಷ ರೂ. ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಅವರು ಮರವಂತೆ ಹೊರಬಂದರು ಸಮೀಪ ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ ಮರವಂತೆಯಲ್ಲಿ ಸಮುದ್ರದಲೆಯ ಅಬ್ಬರಕ್ಕೆ ಸಾಕಷ್ಟು ಹಾನಿಯಾಗಿದೆ. ಹೊಸತಾಗಿ ನಿರ್ಮಿಸಿದ ರಸ್ತೆ ಸಾಕಷ್ಟು ಹಾನಿಯಾಗಿದೆ. ಬೈಂದೂರು ತಾಲೂಕಿನಲ್ಲಿ 106ಕ್ಕೂ ಹೆಚ್ಚು ಮನೆಗಳು, ಸಾರ್ವಜನಿಕ ಕಟ್ಟಡ, ರಸ್ತೆ, ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ಮನೆ ಹಾಗೂ ಇನ್ನಿತರ ಪ್ರದೇಶಗಳ ವರದಿಯನ್ನು ತಕ್ಷಣ ನೀಡುವಂತೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಿಪತ್ತು ಪರಿಹಾರ ನಿಧಿಯ ಹಣವನ್ನು ಬಳಸಿಕೊಂಡು ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ► ಮರವಂತೆಯಲ್ಲಿ ಸ್ಥಳೀಯರ ಅಹವಾಲು ಕೇಳದ ಸಚಿವರು: ಆಕ್ರೋಶ ಹೊರಹಾಕಿದ ಮೀನುಗಾರರು – https://kundapraa.com/?p=48370 .

ಲಾಕ್‌ಡೌನ್‌ನಿಂದಾಗಿ ಕೋವಿಡ್ ಕೆಸ್‌ಗಳು ಇಳಿಮುಖವಾಗುತ್ತಿದೆ. ಲಾಕ್‌ಡೌನ್ ಮುಂದೂವರಿಸಬೇಕೆ ಬೇಡವೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಈ ಸಂದರ್ಭ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿಪಂ ಸದಸ್ಯ ಶಂಕರ ಪೂಜಾರಿ, ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮರವಂತೆ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ, ಮರವಂತೆ ಗ್ರಾಪಂ ಉಪಾಧ್ಯಕ್ಷ ಲೋಕೇಶ್ ಖಾರ್ವಿ, ಮೀನುಗಾರ ಮುಖಂಡರುಗಳಾದ ಶಂಕರ ಖಾರ್ವಿ, ನಾಗ ಖಾರ್ವಿ, ವಾಸು ಖಾರ್ವಿ, ಸತೀಶ್ ಖಾರ್ವಿ, ಸಂಜೀವ ಖಾರ್ವಿ, ಜನಾರ್ದನ ಖಾರ್ವಿ, ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಅನಿತಾ ಆರ್.ಕೆ ಮೊದಲಾದವರು ಇದ್ದರು.

Exit mobile version