Kundapra.com ಕುಂದಾಪ್ರ ಡಾಟ್ ಕಾಂ

ರೀಡರ್ ಮೇಲ್: ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಯಲ್ಲಿ ಮೋಸ

ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯ ಸರಕಾರದ ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾಣೆಯ ಕೌನ್ಸಿಲಿಂಗ್‌ನ ಭ್ರಷ್ಟ ನಾಟಕ ನಡೆಯಿತು. ಪರಸ್ಪರ ವರ್ಗಾವಣೆ; ನಗರ ಗ್ರಾಮಾಂತರ ಪ್ರದೇಶ ಬದಲಾವಣೆ; ದಂಪತಿಗಳು ಒಂದೇ ಕಡೆ ಕೆಲಸ ನಿರ್ವಹಿಸುವ ಅವಕಾಶ; ಅನಾರೋಗ್ಯದ ನೆಲೆಯಲ್ಲಿ ವರ್ಗಾವಣೆ; ನೇರವಾಗಿ ಖಾಲಿ ಇರುವ ಸ್ಥಳಕ್ಕೆ ವರ್ಗಾವಣೆ ಹೀಗೆ ಹಲವು ಪ್ರಕಾರಗಳಿವೆ. ಅರ್ಜಿ ಸಲ್ಲಿಸಿದ ನಂತರ ವರ್ಗಾವಣೆಗೆ ಅರ್ಹರಾದವರ ಪಟ್ಟಿ ಪ್ರಕಟಿಸಲಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ವರ್ಗಾವಣೆಗೆ ಅರ್ಹರಾದವರ ಪಟ್ಟಿಯಿಂದ ಹಿಡಿದು ಬೆಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕೌನ್ಸಿಲಿಂಗ್ ನಡೆದು ವರ್ಗಾವಣೆಯ ಅಂತಿಮ ಆದೇಶ ಹೊರಡಿಸುವ ವರೆಗೆ ಸಾಕಷ್ಟು ಗೋಲ್‌ಮಾಲ್ ನಡೆದಿದೆ.

ದಂಪತಿಗಳು ಒಂದೇ ತಾಲೂಕಿನ ಒಳಗೆ ದೂರ ದೂರದ ಊರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ವರ್ಗಾವಣೆಗೆ ಅವಕಾಶ ಇದ್ದರೂ ಕೆಲವರಿಗೆ ವರ್ಗಾವಣೆ ನಿರಾಕರಿಸಲಾಗಿದೆ. ಸೇವಾ ಹಿರಿತನಕ್ಕೆ ಬೆಲೆ ಇಲ್ಲ. 10-15 ವರ್ಷ ದೂರದ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದವರಿಗೆ ಹತ್ತಿರದ ನಗರ ಪ್ರದೇಶಕ್ಕೆ ಅವಕಾಶವಿದ್ದರೂ ವರ್ಗಾವಣೆ ನಿರಾಕರಿಸಲಾಗಿದೆ. ವರ್ಗಾವಣೆ ಬಯಸಿದ 5ರಿಂದ 10 ಶೇಕಡಾ ಉಪನ್ಯಾಸಕರಿಗೆ ಮಾತ್ರ ವರ್ಗಾವಣೆ ನೀಡಿದ್ದಾರೆ. ಕೌನ್ಸಿಲಿಂಗ್ ವೇಳೆ ಇಲಾಖಾ ಸಿಬ್ಬಂದಿಗಳು ಉಪನ್ಯಾಸಕರನ್ನು ರಾಕ್ಷಸರಂತೆ ಬೆದರಿಸುತ್ತಿದ್ದರು. ಪ್ರತಿಕ್ರಿಯೆಯ ಬಿಸಿ ಏರಿದಾಗ ಹಠಾತ್ ಕೌನ್ಸಿಲಿಂಗ್ ಕಾರ್ಯ ಸ್ಥಗಿತಗೊಳಿಸುತ್ತಿದ್ದರು. ಮೇಲಧಿಕಾರಿಗಳಿಗೆ ದೂರು ನೀಡಲು ಅವಕಾಶ ಕೇಳಿದರೆ ಬೆದರಿಸಿ ಹೊರಗೆ ತಳ್ಳುತ್ತಿದ್ದರು. ಅದೇ ಮುಂಚಿತವಾಗಿ ಮೇಜಿನಡಿಯಿಂದ ಹಣ ನೀಡಿ ಒಳ ಒಪ್ಪಂದ ಮಾಡಿಕೊಂಡವರಿಗೆ ವರ್ಗಾವಣೆ ಸುಲಭ. ಸೀದಾಸಾದಾ ಆಗಿದೆ. ಮೇಲಾಧಿಕಾರಿಗಳಿಗೆ ವರ್ಗಾವಣೆ ನಿರಾಕರಿಸಲು ಹಲವು ಕಾನೂನಿನ ಅಸ್ತ್ರವಿದೆ. ಅದೇ ವರ್ಗಾವಣೆ ನೀಡಲು ಒಂದೇ ಅಸ್ತ್ರ ! ಲಂಚಾಸ್ತ್ರ! ಇದಕ್ಕ ಯಾವುದೇ ಕಾನೂನು ಅಡ್ಡಿಯಾಗುವುದಿಲ್ಲ. ಒಟ್ಟಿನಲ್ಲಿ ಪದವಿಪೂರ್ವ ಇಲಾಖೆಯಲ್ಲಿ ಪಠ್ಯಪುಸ್ತಕದ ತಯಾರಿ, ಪ್ರಶ್ನೆ ಪತ್ರಿಕೆಯ ತಯಾರಿ, ಉತ್ತರ ಪತ್ರಿಕೆ ತಿದ್ದುವುದು, ಉಪನ್ಯಾಸಕರ ಭಡ್ತಿ, ವರ್ಗಾವಣೆ ಎಲ್ಲಾ ಹಂತದಲ್ಲೂ ಭ್ರಷ್ಟಾಸುರ ತಾಂಡವವಾಡುತ್ತಿರುವುದು ನಾಚಿಕೆಗೇಡು.

-ನೊಂದ ಉಪನ್ಯಾಸಕರು
ಉಡುಪಿ ಜಿಲ್ಲೆ

Exit mobile version