Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಕೋರಗರ ಹಲ್ಲೆ ಪ್ರಕರಣದ ಸಿಓಡಿ ತನಿಕೆಗೆ, ಸಂತ್ರಸ್ಥರಿಗೆ 2 ಲಕ್ಷ ಪರಿಹಾರ, ತಪ್ಪಿತಸ್ಥರಿಗೆ ಶಿಕ್ಷೆ – ಗೃಹಸಚಿವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಇಲ್ಲಿನ ಕೊರಗ ಕಾಲನಿಯಲ್ಲಿ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದಕ್ಕೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಲಾಗಿದೆ. ಪೊಲೀಸರು ಮಾಡಿದ ತಪ್ಪಿಗೆ ತಪ್ಪಿತಸ್ಥರು ಬೆಲೆತೆರಬೇಕು. ಈ ನಿಟ್ಟಿನಲ್ಲಿ ಸಿಓಡಿ ತನಿಖೆಗೆ ಪ್ರಕರಣ ರವಾನಿಸಲಾಗುತ್ತದೆ. ಕೊರಗರು ಅನೇಕ ಸಮಸ್ಯೆಗಳನ್ನು ಹೇಳಿದ್ದು ಅದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಜಾಗರೂಕತೆ ವಹಿಸಲಾಗುತ್ತದೆ. ಪೊಲೀಸರು ನೊಂದವರ ಮೇಲೆ ಹಾಕಿದ ಕೇಸು ಸುಳ್ಳು ಎಂಬುದು ಅರಿವಿದ್ದು ಇದರ ಬಗ್ಗೆ ತನಿಖೆ ನಡೆಯುತ್ತದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕೋಟ ಕೊರಗರ ಮನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ

ಕೋಟತಟ್ಟು ಗ್ರಾಮದ ಬಾರಿಕೆರೆ ಕೊರಗ ಕಾಲನಿಯಲ್ಲಿ ಮೆಹೆಂದಿ ವೇಳೆ ಪೊಲೀಸರಿಂದ ಹಲ್ಲೆಗೊಳಗಾದ ಕೊರಗ ಸಮುದಾಯದವರನ್ನು ಭೇಟಿಮಾಡಿ ಅವರು ಮಾತನಾಡಿ ತಳಮಟ್ಟದ ಸಮುದಾಯದ ಯಾರು ಹೆದರುವ ಅಗತ್ಯವಿಲ್ಲ, ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಬ್ಬರ ಅಮಾನತು ಮಾಡಲಾಗಿದೆ. ಉಳಿದವರ ವರ್ಗಾವಣೆ ಮಾಡಲಾಗಿದ್ದು ಮುಂದಿನ ಕ್ರಮದ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಈ ಪ್ರಕರಣವನ್ನು ನಾನು ಸಿಒಡಿಗೆ ನೀಡುತ್ತೇವೆ. ಈ ಪ್ರಕರಣಕ್ಕೆ ಸಂಬಂದಪಟ್ಟವರು ತನಿಖೆ ನಡೆಸುವುದರಿಂದ ನ್ಯಾಯ ಸಿಗಲಿದೆ. ಪ್ರಕರಣದ ತನಿಖೆ ಕೂಲಂಕುಷವಾಗಿ ನಡೆಯಲಿದೆ. ಘಟನೆ ನಡೆದ 2-3 ದಿನದ ಮೇಲೆ ಪೊಲೀಸ್ ಸಿಬ್ಬಂದಿ ಕೊರಗರು ಸಹಿತ ಇನ್ನು ಕೆಲವರ ಮೇಲೆ ಕೇಸು ದಾಖಲಿಸಿದ್ದು ಇದೊಂದು ಸುಳ್ಳು ಪ್ರಕರಣ ಎಂದು ಎಲ್ಲರಿಗೂ ತಿಳಿಯುತ್ತದೆ. ಸಬ್ ಇನ್ಸ್ಪೆಕ್ಟರ್ ತಾನೇ ಸುಪ್ರೀಂ ಎಂದುಕೊಂಡು ಅಂದಿನ ಘಟನೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸದೇ ಇರುವುದು ನಿಜಕ್ಕೂ ತಪ್ಪನ್ನು ತೋರಿಸುತ್ತದೆ.

ಮನಸ್ಸಿಗೆ ಆದ ನೋವು ನಿವಾರಿಸಲು ಆಗಲ್ಲ. ಆದರೆ ಆದ ತಪ್ಪಿಗೆ ಪ್ರಕರಣದ ಸಂತ್ರಸ್ತರಿಗೆ 6 ಮಂದಿಗೆ ಸರಕಾರದಿಂದ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು ಮುಂಗಡವಾಗಿ 50 ಸಾವಿರ ಪರಿಹಾರ ಮೊತ್ತ ನೀಡಿದ್ದೇವೆ ಎಂದರು.

ಪೊಲೀಸರು ರೌಡಿ ಕೆಲಸ ಮಾಡಬಾರದು. ಇಲಾಖೆಗೆ ಕಪ್ಪು ಚುಕ್ಕೆ ತರುವ ಕೆಲಸ ಇಲಾಖೆಯಿಂದ ಆಗಿದ್ದಕ್ಕೆ ನೋವಾಗಿದೆ. ರಾಜ್ಯದಲ್ಲಿ 1 ಲಕ್ಷದಷ್ಟು ಪೊಲೀಸರಿದ್ದು ಅವರಲ್ಲಿರುವ ಒಳ್ಳೆ ಪೊಲೀಸರಿಗೆ ಅವಮಾನವಾಗುವ ಕೆಲಸ ಮಾಡುವ ಕೆಲವು ಪೊಲೀಸರಿಂದ ಹೀಗಾಗುತ್ತಿದೆ. ಅವರು ಪೊಲೀಸ್ ಇಲಾಖೆಗೆ ಯೋಗ್ಯರೋ ಇಲ್ಲವೋ ಎಂಬುದನ್ನು ಸರಕಾರ ನಿರ್ಧರಿಸುತ್ತದೆ.

ಪೊಲೀಸರ ಭಾಷಾ ಪ್ರಯೋಗದ ಬಗ್ಗೆಯೂ ಗಮನಕ್ಕಿದ್ದು ಅದಕ್ಕೂ ತಕ್ಕ ಶಿಕ್ಷೆಯಾಗುತ್ತದೆ ಎಂದರು. ಕಾನೂನು ಎಲ್ಲರಿಗೂ ಒಂದೆ. ಅದನ್ನು ಅನುಷ್ಟಾನಕ್ಕೆ ತರುವುದು ಇಲಾಖೆ ಕರ್ತವ್ಯ. ಈ ಪ್ರಕರಣವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಗಂಭೀರವಾಗಿ ಪರಿಗಣಿಸಿತ್ತದೆ ಎಂದರು.

ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಡಿಸಿ ಕೂರ್ಮಾರಾವ್ ಎಂ, ಎಸ್ಪಿ ವಿಷ್ಣುವರ್ಧನ್, ಕೊರಗ ಸಂಘಟನೆಯ ಪ್ರಮುಖರು ಇದ್ದರು.

Exit mobile version