Kundapra.com ಕುಂದಾಪ್ರ ಡಾಟ್ ಕಾಂ

ಕೆ.ಸಿ. ಕುಂದರ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಡಾ|| ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ಕರಾವಳಿ ಕಣ್ಮಣಿ ದಿ. ಕೆ.ಸಿ ಕುಂದರ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಯುವ ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ತಳಮಟ್ಟದಿಂದ ಬೆಳೆದು ಯಶಸ್ವಿ ಉದ್ಯಮಿಯಾಗಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಅಶಕ್ತರಿಗೆ ಸಹಾಯ ಮಾಡುತ್ತಿದ್ದಾರೆ.

ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಎಪ್ರಿಲ್ 24 ರಂದು ನಡೆಯುವ ಮಕ್ಕಳ ಬೇಸಿಗೆ ಶಿಬಿರದ ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶ್ರಮದಿಂದಲೇ ಬದುಕು ಕಟ್ಟಿಕೊಂಡ ಗೋವಿಂದ ಬಾಬು ಪೂಜಾರಿ ಅವರು ಹಂತ ಹಂತವಾಗಿ ಸಾಧನೆಯ ಶಿಖರವೇರಿದವರು. ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗೋವಿಂದ ಪೂಜಾರಿ ಅವರು ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಮತ್ಸ್ಯ ಬಂಧನ ಸಂಸ್ಥೆಯ ಮೂಲಕ ಮೀನಿನ ಮೌಲ್ಯವರ್ಧಿತ ಖಾದ್ಯಗಳು. ಪ್ರಗ್ನ್ಯಾ ಸಾಗರ್ ಹೋಟೆಲ್ & ರೆಸಾರ್ಟ್ಸ್ ಸಂಸ್ಥೆ ಮೂಲಕ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ.

ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದರು. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಆರೋಗ್ಯ, ಮನೆ ನಿರ್ಮಾಣ, ಕೋವಿಡ್ ಕಾಲದಲ್ಲಿ ನೆರವು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು ಸೇರಿದಂತೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ವಿವಿಧ ಸೇವಾ ಚಟುವಟಿಕೆಯಲ್ಲಿಯು ತೊಡಗಿಸಿಕೊಂಡಿದ್ದಾರೆ.

Exit mobile version