Kundapra.com ಕುಂದಾಪ್ರ ಡಾಟ್ ಕಾಂ

ಇನಾಮ್ದಾರ್ ಸಿನೆಮಾ ಚಿತ್ರೀಕರಣ ಪೂರ್ಣ. ಕೆಲ ದಿನಗಳಲ್ಲಿ ತೆರೆಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬಹುನಿರೀಕ್ಷಿತ ಸಿನೆಮಾ ‘ಇನಾಮ್ದಾರ್’ ಚಿತ್ರೀಕರಣ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಬರಲಿದೆ. ಕರಾವಳಿಯ ಕನಸು ಕಂಗಳ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸಿದ್ದಪಡಿಸಿದ ಕಥೆಯನ್ನು ತೆರೆಯ ಮೇಲೆ ತರುವ ನಿಟ್ಟಿನಲ್ಲಿ ಐದು ತಿಂಗಳುಗಳ ಕಾಲ ಬಯಲು ಸೀಮೆಯಿಂದ ಹಿಡಿದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ತನಕ ಚಿತ್ರೀಕರಣದಲ್ಲಿ ತೊಡಗಿ ಸಾಕಷ್ಟು ಶ್ರಮವಹಿಸಿದ್ದಾರೆ.

ನಿರ್ದೇಶಕರ ಆಸೆಗೆ ಮತ್ತು ಶ್ರಮಕ್ಕೆ ಪೂರಕವಾಗಿ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು. ಸಾಥ್ ನೀಡುವುದರ ಜೊತೆಗೆ 24/7 ನಿರ್ದೇಶಕರ ಬೆನ್ನೆಲುಬಾಗಿ ನಿಂತಿರುವುದು ಚಿತ್ರತಂಡದ ಸಂತಸ ಕ್ಕೆ ಕಾರಣವಾಗಿದೆ. ಮೂಲತಃ ಯೋಗ ಪಟುವಾಗಿರುವ ನಿರಂಜನ್ ಶೆಟ್ಟಿ ತಲ್ಲೂರು ಈಗಾಗಲೆ ತಮ್ಮ ಅದ್ಬುತ ಯೋಗ ಭಂಗಿಗಳ ಮೂಲಕ ವಿಶ್ವ ದಾಖಲೆ ಮಾಡಿದ್ದು, ಹೊಸ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ, ಹೊಸತನಕ್ಕೆ ಹಾರೈಸುವ ಅದ್ಭುತ ವ್ಯಕ್ತಿ ಎನ್ನುವುದು ಚಿತ್ರ ತಂಡದ ಹೇಳಿಕೆಯಾಗಿದೆ.

ಇನ್ನು ಇನಾಮ್ದಾರ್ ಕಥೆಗೆ ಪೂರಕವಾದ ಫ್ರೇಮ್ ಮೂಲಕ ಕಣ್ಣಿಗೆ ಕಟ್ಟಿಕೊಡುವ ರೀತಿಯ ಚಿತ್ರಣ ಸೆರೆ ಹಿಡಿದಿರುವ ಕ್ಯಾಮೆರಾಮ್ಯಾನ್ ಮುರುಧರ ಅವರು ಚಿತ್ರದ ಇನ್ನೊಂದು ಪಿಲ್ಲರ್ ಎಂದರೆ ತಪ್ಪಾಗಲಾರದು. ಬಯಲುಸೀಮೆಯ ಗಟ್ಟಿ ನೆಲೆದಿಂದ ಹಿಡಿದು ಪಶ್ವಿಮ ಘಟ್ಟದ ತಪ್ಪಲಿನ ಕಾಡಿನಲ್ಲಿಯೂ ವಯಸ್ಸಿಗೆ ಮೀರಿದ ಉತ್ಸಾಹ ತೋರುತ್ತಾ, ಚಿತ್ರತಂಡವನ್ನು ಹುರಿದುಂಬಿಸಿ ಚಿತ್ರೀಕರಣ ಮಾಡಿಸ ಶ್ರೇಯ ಮುರುಳಿ ಅವರಿಗೆ ಸಲ್ಲುತ್ತದೆ. ಬೆಳಗಾವಿಯ ಗಟ್ಟಿಮಣ್ಣಿನ ಖಡಕ್ ಸ್ಟಾರ್ ರಂಜನ್ ಛತ್ರಪತಿ ಇನಾಮ್ದಾರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ಕಥೆಗೆ ಬೇಕಾದಂತೆ ತಮ್ಮ ಪ್ರತಿಭೆಯನ್ನು ಓರೆ ಹಚ್ಚಿದ್ದಾರೆ. ಕಪ್ಪು ಸುಂದರಿಯಾಗಿ ಅಭಿನಯಿಸಬೇಕಾಗಿದ್ದ ಭೂಮಿ ಶೆಟ್ಟಿ ಬದಲು ಕುಡ್ಲದ ಬೆಡಗಿ ನಗುಮುಖದ ಸುಂದರಿ ಶಿರಶ್ರೀ ಅಂಚನ್ ಇನಾಮ್ದಾರ್ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಕನ್ನಡ, ತುಳು, ತಮಿಳು ಸಿನೆಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದು, ಸದ್ಯ ಇನಾಮ್ದಾರ್ ಸಿನೆಮಾದ ನಾಯಕಿಯಾಗಿ ಕುಡ್ಲದ ಕಂಪು ಹರಿಸಿದ್ದಾರೆ.

ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು ಎಸ್ತಾರ್ ನೆರೋನಾ , ಎಂಕೆಮಠ ಅವರಂತ ಹಿರಿಯ ನಟರಿದ್ದು, ರಘುಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ,ನಾಗರಾಜ್ ರಾವ್, ಹಾಲಂಬಿ ಅವರಂತ ಕರಾವಳಿಯ ಪ್ರತಿಭೆಗಳ ಸಮಾಗಮ ಚಿತ್ರದಲ್ಲಿ ನೋಡಬಹುದಾಗಿದೆ. ಚಿತ್ರಕ್ಕೆ ಲಕ್ಕಿ ನಾಗೇಶ್ ಹೇರಾಂಜಾಲು, ಆರ್. ಕೆ. ಮಂಗಳೂರು ಸಹಕಾರ ನೀಡಿದ್ದು, ಸಹ ನಿರ್ದೇಶನದಲ್ಲಿ ರಾಜ್ ಕೃಷ್ಣ ಮತ್ತು ಮಿಥುನ್ ತೀರ್ಥಹಳ್ಳಿ ಶ್ರೀಧರ್ ಶ್ರೀ, ನವೀನ್ ಸಾಥ್ ನೀಡಿದ್ದಾರೆ. ಚಿತ್ರತಂಡದಲ್ಲಿ ವಿನಯ್ ಉಳ್ಳೂರು, ಸನತ್ ಉಪ್ಪುಂದ, ಅನೀಶ್ ಡಿಸೋಜಾ, ಮತ್ತಿತರರು ಸಹಕಾರ ನೀಡಿದ್ದಾರೆ.

ಬಯಲುಸೀಮೆಯ ಒಂದು ಜನಾಂಗ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಇನ್ನೊಂದು ಜನಾಂಗ ನಡುವೆ ನಡೆಯುವ ವರ್ಣ ಭೇದದ ಕಥೆಯ ಜೀವಾಳ. ಚಿತ್ರದುದ್ದಕ್ಕೂ ಪಶ್ಚಿಮ ಘಟ್ಟದ ತಪ್ಪಲಿನ ಸೌಂದರ್ಯ ಕಾಣಬಹುದಾಗಿದ್ದು, ಬಯಲು ಸೀಮೆಯ ಸೊಬಗು ಚಿತ್ರ ರಸಿಕರಿಗೆ ಮೆಚ್ಚಿಗೆಯಾಗಲಿದೆ. ಸದ್ಯ ಇನಾಮ್ದಾರ್ ಚಿತ್ರ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಇನ್ನು ಕೆಲವು ತಿಂಗಳುಗಳಲ್ಲಿ ಕರಾವಳಿ ಪ್ರತಿಭೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಎರಡನೇಯ ಚಿತ್ರ ತೆರೆಯ ಮೇಲೆ ಮೂಡಿಬರಲಿದೆ.

Exit mobile version