Site icon Kundapra.com ಕುಂದಾಪ್ರ ಡಾಟ್ ಕಾಂ

72 ಸ್ಫರ್ಧಿಗಳು, 13 ಮ್ಯಾಚ್, ವಿಶ್ವ ಸಂಗೀತ ಲೋಕದಲ್ಲೇ ಪ್ರಪ್ರಥಮ ಪ್ರಯೋಗ ಎಸ್ಪಿಎಲ್23ಕ್ಕೆ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಂಗಳೂರು:
ಅರುಣ್ಯ ಫೌಂಡೇಶನ್ ಹಾಗೂ ದಾಸ್ ಕುಡ್ಲ ಇವೆಂಟ್ಸ್ ಜಂಟಿಯಾಗಿ ಆಯೋಜಿಸಿರುವ ‘ಎಸ್ಪಿಎಲ್23 ಕರಾವಳಿ ಕೋಯಲ್ ಚಾಂಪಿಯನ್ಸ್’ ಎರಡು ದಿನಗಳ ಸಂಗೀತ ಸಂಭ್ರಮಕ್ಕೆ ಗಣ್ಯರು, ಸ್ಫರ್ಧಿಗಳು, ಸಭಿಕರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಜ್ಞಾನೋದಯದ ಉದಯ ಗುರೂಜಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, “ಸಂಗೀತ ಮನಸ್ಸನ್ನು ಮುದಗೊಳಿಸುವ ಕಲೆಯಾಗಿದ್ದು, ಕೆಲವರಿಗಷ್ಟೇ ಒಲಿದಿರುತ್ತದೆ. ಆದರೆ ಪ್ರತಿಯೊಬ್ಬರೂ ಸಂಗೀತವನ್ನು ಅಸ್ವಾದಿಸುವ ಕಲೆಯನ್ನು ಹೊಂದಿರುತ್ತಾರೆ” ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುರೇಶ್ ಬಳ್ಳಾಲ್, ” ದಾಸ್ ಕುಡ್ಲ ಹಾಗೂ ಅರುಣ್ಯ ಫೌಆಂಡೇಶನ್ ಕಾರಣದಿಂದಾಗಿ, ಕೊರೊನೋತ್ತರ ಕಾಲದಲ್ಲಿ ಸಂಗೀತಕ್ಕೆ ಬೇಕಿರುವ ವೇದಿಕೆ ಪುನಃ ಲಭಿಸಿದ್ದು, ಕಲಾವಿದರು ಇಂತಹ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ” ಎಂದು ಯುವ ಕಲಾವಿದರಿಗೆ ಕರೆ ನೀಡಿದರು.

ದೊಡ್ಮನೆ ಅಪ್ಪು ಯುವ ಸೇನೆಯ ಸ್ಥಾಪಕಾಧ್ಯಕ್ಷರಾದ ಕೆ. ಆರ್. ಜನಾರ್ಧನ್ ಬಾಬು ಮಾತನಾಡಿ, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಹಾಗೂ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.

ಜೀವಸಾರ್ಥಕತೆ ಯೋಜನೆಯ ಸಂಯೋಜಕೆ ಪದ್ಮ ವೇಣೂರು ಅಂಗಾಂಗ ಹಾಗೂ ನೇತ್ರದಾನ ನೋಂದಣಿ ಪ್ರಕ್ರಿಯೆಯನ್ನು ವಿವರಿಸಿದರು.

ತೀರ್ಪುಗಾರರಾಗಿರುವ ಖ್ಯಾತ ಹಿನ್ನೆಲೆ ಗಾಯಕರಾಗಿರುವ ಡಾ. ಜಯಶ್ರೀ ಅರವಿಂದ್ ಮತ್ತು ಶಶಿಧರ ಕೋಟೆ, ದಾಸ್ ಕುಡ್ಲ ಇವೆಂಟ್ಸ್ನ ಸದಾಶಿವದಾಸ್ ಪಾಂಡೇಶ್ವರ್, ಅರುಣ್ಯ ಫೌಂಡೇಶನ್ ಮ್ಯಾನೆಜಿಂಗ್ ಟ್ರಸ್ಟಿ ವಿಕ್ರಮ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಸಂಯೋಜಕ ರಮೇಶ್ಚಂದ್ರ ಪ್ರಾರ್ಥಿಸಿದರು. ಟ್ರಸ್ಟಿನ ಕಾರ್ಯದರ್ಶಿ ಹಾಗೂ ವೆರಿಟೋ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿದರು. ಆರ್ಜೆ ಪ್ರಸನ್ನ ಹಾಗೂ ಆರ್ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.

ಮೊದಲನೆಯ ದಿನ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ನಾಳೆ ಬೆಳಿಗ್ಗೆ ಸೆಮಿಫೈನಲ್, ಮಧ್ಯಾಹ್ನ ಫೈನಲ್ ಪಂದ್ಯ ಜರುಗಲಿದೆ. ಸಂಜೆ 4 ಗಂಟೆಯಿಂದ ಅಮೋಘ ‘ಪಂಚಭಾಷಾ ರಸಮಂಜರಿ’ ನಡೆಯಲಿದ್ದು, ಇದೇ ವೇದಿಕೆಯಲ್ಲಿ 46 ಗಣ್ಯರಿಗೆ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮದ ಅವಧಿಯಲ್ಲಿ ಅಂಗಾಂಗ ಹಾಗೂ ನೇತ್ರದಾನ ನೋಂದಣಿ ಶಿಬಿರವಿದ್ದು, ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: ► ಮೇ 31, ಜೂನ್ 1 ರಂದು ’ಸಿಂಗರ್ಸ್ ಪ್ರೀಮಿಯರ್ ಲೀಗ್ ಕರಾವಳಿ ಕೋಯಲ್ ಚಾಂಪಿಯನ್ಸ್’ – https://kundapraa.com/?p=66964 .

Exit mobile version