Kundapra.com ಕುಂದಾಪ್ರ ಡಾಟ್ ಕಾಂ

ಬೆಂಗ್ಳೂರಂಗೂ ಕುಂದಾಪ್ರದ್ದೇ ಮಾತ್. ಕುಂದಾಪ್ರ ಕನ್ನಡ ಹಬ್ಬದಲ್ಲಿ ಮೇಳೈಸಿದ ಭಾವ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು:
ವಿಶ್ವ ಕುಂದಾಪ್ರ ಕನ್ನಡ ಪ್ರತಿಷ್ಠಾನದ ನೇತೃತ್ವದಲ್ಲಿ ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಸಂಘದಲ್ಲಿ ಅದ್ದೂರಿ ಕುಂದಾಪುರ ಕನ್ನಡ ಹಬ್ಬ ಭಾನುವಾರ ಯಶಸ್ವಿಯಾಗಿ ನೆರವೇರಿತು. ಸಾವಿರಾರು ಕುಂದಾಪ್ರ ಕನ್ನಡಿಗರು ಒಂದುಗೂಡಿ ಸಂಭ್ರಮಿಸಿ ಬೆಂಗಳೂರಿನಲ್ಲಿಯೂ ಅಭಿವ್ಯಕ್ತಿಯ ಮೂಲಕವೇ ಕುಂದಾಪುರವನ್ನು ಸೃಷ್ಟಿಸಿದರು.

ಬೆಳಿಗ್ಗೆ ಕುಂದಾಪುರದ ರಥವನ್ನು ಶಾಸಕರುಗಳಾದ ಗುರುರಾಜ್ ಗಂಟಿಹೊಳೆ ಕಿರಣ್ ಕುಮಾರ್ ಕೊಡ್ಗಿ , ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರು ಅವರು ಜತೆಯಾಗಿ ಎಳೆದು ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮವನ್ನೂ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು.

ಇದನ್ನೂ ಓದಿ: ► ಕುಂದಾಪ್ರ ಡಾಟ್ ಕಾಂ & ಕುಂದ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನ – https://kundapraa.com/?p=67728 .

ಉದ್ಘಾಟನೆ ಬಳಿಕ ಯಕ್ಷಗಾನ, ಹಾಡು ನಾಟಕ ಪ್ರದರ್ಶನಗೊಂಡವು. ನೃತ್ಯ, ಮಾತಿನ ಚಾವಡಿ, ಟೀಮ್ ಕುಂದಾಪುರಿಯನ್ಸ್ ತಂಡದಿಂದ ಮಿಂಚುಳ ಎಂಬ ವಿಶೇಷ ನಾಟಕವನ್ನು ನೆರೆದವರಿಗೆ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಸಾರಿದರು.

ಕರಾವಳಿಯ ಗ್ರಾಮೀಣ ಕ್ರೀಡೆಗಳನ್ನು ಆಯೋಜನೆ ಹಬ್ಬಕ್ಕೆ ಮೆರಗು ನೀಡಿತ್ತು. ಗ್ರಾಮೀಣ ಕ್ರೀಡಾಕೂಟದಲ್ಲಿ ಹನೆ ಬೊಂಡ ಓಟದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ ಅವರು ಭಾಗವಹಿಸಿ ತಮ್ಮ ಬಾಲ್ಯವನ್ನು ನೆನೆಸಿಕೊಂಡರು. ವಯಸ್ಕರರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹನೆಬೊಂಡ ಓಟ, ಗಿರ್ಗಿಟ್ಲೆ ಓಟ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕಟ್ಟುವುದು ಇನ್ನಿತರ ಸ್ಪರ್ಧೆಗಳು ನಡೆದವು. ಕುಂದಾಪ್ರ ಡಾಟ್ ಕಾಂ

ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್, ಸುಕ್ಕಿನ್ ಉಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ ನಂತಹ ವಿವಿಧ ಪಾನಕಗಳು ವಿಶೇಷವಾಗಿತ್ತು. ಹಾಗೇ ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯಗಳು ಬಾಯಲ್ಲಿ ನೀರೂರಿಸುವಂತಿತ್ತು.

ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅನುದಾನಕ್ಕಾಗಿ ಒತ್ತಾಯ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆ ಆಗಿರುವ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕಾಗಿ ಅನುದಾನ ನೀಡುವಂತೆ ಒತ್ತಾಯ ಕುಂದಾಪ್ರ ಕನ್ನಡ ಹಬ್ಬದಲ್ಲಿ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಹಿಂದುಳಿದ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಅನುದಾನ ಒದಗಿಸುವ ಕುರಿತ ಈ ಮನವಿ ಮುಖ್ಯಮಂತ್ರಿಯವರಿಗೆ ಒಪ್ಪಿಸಿ, ನಾನು ಕೂಡ ಕೋರಿಕೊಳ್ಳುವುದಾಗಿ ತಿಳಿಸಿದರು. ಕುಂದಾಪುರ ಕನ್ನಡ ಕುರಿತು ಎಲ್ಲರ ಜೊತೆ ಚರ್ಚೆ ಮಾಡಿ ಪರಿಣತರು ತಜ್ಞರನ್ನು ಅಧ್ಯಯನ ಸಮಿತಿಯಲ್ಲಿ ಹಾಕಿಕೊಳ್ಳಲಾಗುವುದು ಎಂದರು. ಊರ ಸನ್ಮಾನಕ್ಕೆ ಪಾತ್ರರಾದ ಪ್ರೊ.ಎ.ವಿ.ನಾವಡ ಅವರು ಕೂಡ ಅನುದಾನ ಒದಗಿಸುವಲ್ಲಿ ವಿಳಂಬ ಆಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿ, ಸರ್ಕಾರ ಬೇಗ ಅನುದಾನ ನೀಡುವಂತಾಗಬೇಕು ಎಂದು ಆಗ್ರಹಿಸಿದರು. ಕುಂದಾಪ್ರ ಡಾಟ್ ಕಾಂ

ಕಾಶೀನಾಥ್, ಉಪೇಂದ್ರ, ರಿಷಬ್, ಪ್ರಮೋದ್ ಶೆಟ್ಟಿ ಎಲ್ಲರೂ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ನೀವೆಲ್ಲ ಮಕ್ಕಳಿಗೆ ಬರೀ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಒತ್ತಾಯ ಮಾಡದೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡಿ. ಈ ಸಾಧಕರೆಲ್ಲರೂ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮುಂದೆ ಬಂದರು ಎಂದ ಜಯಪ್ರಕಾಶ್ ಹೆಗ್ಡೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ► ಕುಂದಾಪ್ರ ಡಾಟ್ ಕಾಂ & ಕುಂದ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನ – https://kundapraa.com/?p=67728 .

ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ, ಜೀವ ಕೊಟ್ಟಿದ್ದು ಕುಂದಾಪುರ, ಜೀವನ ಕೊಟ್ಟಿದ್ದು ಬೆಂಗಳೂರು. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡರೂ ನಾವು ಕುಂದಾಪುರ ಭಾಷೆಯನ್ನು ಬಿಡಲಿಲ್ಲ ಎಂದರು.

ನಮ್ಮೂರು ಕುಂದಾಪುರದ ಕೆರಾಡಿ ಸರ್ಕಾರಿ ಶಾಲೆಯಲ್ಲೇ ಶಿಕ್ಷಕರಿಲ್ಲ. ಮುಖ್ಯಮಂತ್ರಿಯವರು ಬಂದಿದ್ದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದಿರುವ ಕುರಿತು ಗಮನ ತರಬೇಕಂತಿದ್ದೆ. ಅವರು ಬರಲಿಲ್ಲ, ಈ ವಿಷಯ ಅವರಿಗೆ ಮಾಧ್ಯಮದ ಮೂಲಕ ತಲುಪಿ ಪರಿಹಾರ ಒದಗುತ್ತದೆ ಅಂತ ಆಶಿಸುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು. ಕುಂದಾಪ್ರ ಡಾಟ್ ಕಾಂ

ಕನ್ನಡ ಚಿತ್ರರಂಗಕ್ಕೆ ಕುಂದಾಪುರದ ಕೊಡುಗೆ ದೊಡ್ಡದು. ಆಗಷ್ಟೇ ಮಾತನಾಡಿದ ಉಪೇಂದ್ರ ಅವರು ನನ್ನ ಗುರು ಕಾಶಿನಾಥ್ ಎಂದರು. ಅವರಿಬ್ಬರೂ ಕುಂದಾಪುರದವರು. ಉಪೇಂದ್ರ ಅವರಿಗೆ ಕಾಶೀನಾಥ್ ಗುರುವಾದರೆ ನಮಗೆ ಉಪೇಂದ್ರ ಅವರು ಗುರುಗಳು. ಅವರಿಂದ ಸ್ಫೂರ್ತಿಗೊಂಡೇ ಚಿತ್ರರಂಗಕ್ಕೆ ಬಂದೆ, ನಮ್ಮೂರಿನಿಂದ ಇನ್ನಷ್ಟು ಮಂದಿ ಚಿತ್ರರಂಗಕ್ಕೆ ಬರುವಂತಾಗಲಿ, ನಿಮ್ಮ ಈ ಬೆಂಬಲ ಇದೇ ರೀತಿ ಇರಲಿ, ಇನ್ನಷ್ಟು ಸಿನಿಮಾ ಮಾಡುವ ಶಕ್ತಿ ಬರುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದರು.

ನಟ ನಿರ್ದೇಶಕ ಉಪೇಂದ್ರ ಮಾತನಾಡಿ, ನಾನು ಹುಟ್ಟಿದ್ದು ಬೆಂಗಳೂರಲ್ಲಾದರೂ ನನ್ನ ಮೂಲ ಕುಂದಾಪುರದ ತೆಕ್ಕಟ್ಟೆ. ಅಲ್ಲಿನ ಕಡಲು, ತಿನಿಸು ಎಲ್ಲ ನೆನಪಾಗುತ್ತಿರುತ್ತದೆ. ಭಾಷೆ ಕುರಿತ ಈ ಅಭಿಮಾನ ನೋಡಿ ಖುಷಿ ಆಗುತ್ತಿದೆ ಎಂದರು. ಕುಂದಾಪ್ರ ಡಾಟ್ ಕಾಂ

ಊರಿನ ಸಾಧಕರಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಪ್ರೊ.ಎ.ವಿ.ನಾವಡ ಅವರನ್ನು ಸನ್ಮಾನಿಸಲಾಯಿತು. ಇಡೀ ದಿನ ವಿವಿಧ ಸಾಂಸ್ಕೃತಿಕ-ಮನೋರಂಜನಾ ಕಾರ್ಯಕ್ರಮಗಳಿದ್ದು, ಕುಂದಾಪ್ರ ಸಂಸ್ಕೃತಿ, ಭಾಷೆ-ಬದುಕಿನ ಅನಾವರಣವಾಯಿತು.

ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ನಟ ಪ್ರಮೋದ್ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರಮೋದಚಂದ್ರ ಭಂಡಾರಿ, ಅಧ್ಯಕ್ಷ ಎಂ. ಮುರಳೀಧರ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಮೊದಲಾದವರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ

ಇದನ್ನೂ ಓದಿ: ► ಕುಂದಾಪ್ರ ಡಾಟ್ ಕಾಂ & ಕುಂದ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನ – https://kundapraa.com/?p=67728 .

ಇದನ್ನೂ ಓದಿ: ► ಮಹಾನಗರಿಯಲ್ಲಿ ಜುಲೈ 23ರಂದು ’ಕುಂದಾಪ್ರ ಕನ್ನಡ ಹಬ್ಬ’. ಗಡ್ಜ್ ಇತ್ತ್ ಅಂಬ್ರ್ ಹೋಯ್ – https://kundapraa.com/?p=67825 .

Exit mobile version