Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ತಾಯಿಯೊಂದಿಗೆ ಭೇಟಿ ನೀಡಿದ ಜ್ಯೂನಿಯರ್ ಎನ್‌ಟಿಆರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಇಲ್ಲಿನ ಶ್ರೀ ಕೃಷ್ಣಮಠಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ದ ನಟ ಜ್ಯೂನಿಯರ್ ಎನ್‌ಟಿಆರ್ ಅವರು ತಮ್ಮ ಕುಟುಂಬ, ಪ್ರಶಾಂತ್ ನೀಲ್ ಅವರೊಂದಿಗೆ ಶನಿವಾರ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.

ತಮ್ಮ ತಾಯಿ ಶಾಲಿನಿ ನಂದಾಮುರಿ ಅವರೊಂದಿಗೆ ಉಡುಪಿಗೆ ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ನನ್ನ ಅಮ್ಮನಿಗೆ ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇದ್ದು ಅದು ಇವತ್ತು ಈಡೇರಿದೆ.ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಃಶಾಂತಿ ಸಿಕ್ಕಿದೆ ಎಂದರು.

ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ಅವರೊಂದಿಗೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದ ಅವರು, ರಿಷಬ್ ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿಯಾಗಿದೆ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದರು.

ಜ್ಯೂನಿಯರ್ ಎನ್‌ಟಿಆರ್ ಅವರನ್ನು ಸ್ವಾಗತಿಸಿಕೊಂಡ ರಿಷಬ್ ಶೆಟ್ಟಿ ಒಟ್ಟಿಗೆ ದೇವರ ದರ್ಶನ ಮಾಡಿದ್ದು, ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಜೂನಿಯರ್ ಎನ್‌ಟಿಆರ್ ಜೊತೆ ಅಣ್ಣ ತಮ್ಮನ ಸಂಬಂಧ ಫೀಲ್ ಆಗುತ್ತದೆ. ಅವರು ಆಂಧ್ರಪ್ರದೇಶದವರು ಎಂಬ ಭಾವನೆ ಬರಲ್ಲ. ಬಹಳ ಸಮಯದ ನಂತರ ಭೇಟಿಯಾಗುವ ಅವಕಾಶ ಸಿಕ್ಕಿತು.ಇತ್ತೀಚೆಗೆ ಉಡುಪಿ ಮಠಕ್ಕೆ ಬರಬೇಕು ಎಂದು ಹೇಳಿಕೊಂಡಿದ್ದರು. ನಾನು ಈ ಕಡೆಗೆ ಇದ್ದೆ, ಹಾಗಾಗಿ ಜೊತೆಗೆ ಮಠಕ್ಕೆ ಬಂದೆವು. ಉಡುಪಿ ಅಷ್ಟಮಿಗೆ ಬರಬೇಕಾಗಿತ್ತು, ಸಾಧ್ಯವಾಗಿರಲಿಲ್ಲ. ಎನ್ ಟಿ ಆರ್ ಕುಟುಂಬದ ಜೊತೆ ಬಂದಿರೋದು ಖುಷಿಯಾಗಿದೆ ಎಂದು ಹೇಳಿದರು.

Exit mobile version