Kundapra.com ಕುಂದಾಪ್ರ ಡಾಟ್ ಕಾಂ

ಕಲೆಗಿಲ್ಲ ಕರದ ಹಂಗು. ಗಿರೀಶ್ ಕುಂಚದಲ್ಲಿ ಮೂಡುವುದು ನೈಜತೆಯ ರಂಗು

ಎನ್. ಪೂಜಾ ಪಕ್ಕಳ.

ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗನನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಬೈಂದೂರಿನ ತಗ್ಗರ್ಸೆ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಪೂರ್ತಿ. 25ರ ಹರೆಯದ ಈತನಿಗೆ ಆರಂಭದಲ್ಲಿ ಗೆರೆಗಳ ಆಟವಾಗಿ ತೋರಿದ ಈ ಕಲೆ ಮುಂದೆ ಬದುಕಿನ ದಾರಿಯಾಯಿತು.

ಗಿರೀಶ್ ಎಂಬ ಚಿತ್ರಕಾರನ ಕಲಾಕುಂಚ ಆರಂಭಗೊಂಡಿದ್ದು ಬಾಲ್ಯದಲ್ಲಿ. ಮಣ್ಣಿನ ಕಲಾಕೃತಿಗಳನ್ನು ರಚಿಸುವುದರಲ್ಲಿ ಪ್ರಾವಿಣ್ಯತೆ ಹೊಂದಿದ್ದ ಗಿರೀಶ್ ತನ್ನ ಶಾಲಾ ದಿನಗಳಲ್ಲಿಯೇ ಹಲವು ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದವರು. ಯಾರೋ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸಿಡಿಮದ್ದು ಈತನ ಕೈಬೆರಳುಗಳನ್ನು ಕಿತ್ತುಕೊಂಡಿತ್ತು. ಆ ಘಟನೆಯ ನಂತರ ಬಾಲ್ಯದ ಆಸಕ್ತಿಯ ಕಲೆಯನ್ನು ಮುಂದುವರಿಸಲು ಇವರ ಕೈಗಳು ಅಂದುಕೊಂಡ ಹಾಗೆ ಸಹಕರಿಸಲಿಲ್ಲ. ಹಾಗೆಂದು ಗಿರೀಶ್ ಛಲ ಬಿಡಲಿಲ್ಲ. ಫಲವಾಗಿ ತಾವು ಬಯಸಿದ ಕಲಾಕುಂಚ ಲೋಕಕ್ಕೆ ತನ್ನನ್ನು ಪರಿಚಯಿಸಿಕೊಂಡರು.

ತಗ್ಗರ್ಸೆಯ ಗಣೇಶ್ ಗಾಣಿಗ ಮತ್ತು ತಾಯಿ ಸೀತಾ ದಂಪತಿಗಳ ಮಗನಾದ ಗಿರೀಶ್  ಬಿ.ವಿ.ಎ ಪದವೀಧರಾಗಿ ಪ್ರವೃತ್ತಿಯನ್ನು ವೃತ್ತಿಯಾಗಿ ಆರಿಸಿಕೊಂಡಿದ್ದಾರೆ. ಸದ್ಯ ಕುಂದಾಪುರದ ಬಸ್ರೂರಿನ ಶಾರದಾ ಆಂಗ್ಲಮಾದ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ತಾನು ಕಲಿತ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎನ್ನುವ ಉತ್ಕಟ ಬಯಕೆ ಇವರದ್ದು. ಪೆನ್ನು ಮತ್ತು ಬಿಳಿಹಾಳೆಯಲ್ಲಿ ತಪ್ಪಿಲ್ಲದ ಚಿತ್ರ ಬರೆವ ಇವರ ಚಿತ್ರಗಳು ಆಳ್ವಾಸ್ ನುಡಿಸಿರಿಯಲ್ಲಿನ ಆರ್ಟ್‌ಗ್ಯಾಲರಿಯ ಪ್ರಮುಖ ಆಕರ್ಷಣೆಯಾಗಿತ್ತು.

ಹಿಂದೆ ವಾಟರ್ ಪೈಂಟ್‌ನಲ್ಲಿ ಚಿತ್ರ ರಚಿಸುತ್ತಿದ್ದ ಗಿರೀಶ್ ಸಧ್ಯ ಎಕ್ರಲೇಕ್ ಮೂಲಕ ಚಿತ್ರರಚನೆಯಲ್ಲಿ ತೊಡಗಿದ್ದಾರೆ. ಉಳಿದಂತೆ ಮರಳುಶಿಲ್ಪ, ಮಣ್ಣಿನ ಕಲಾಕೃತಿ, ಲ್ಯಾಂಡ್ ಸ್ಕೇಪ್ ನಲ್ಲಿ ಪರಿಣತಿ ಸಾಧಿಸಿರುವ ಗಿರೀಶ್ ಹಲವು ವಸ್ತು ಪ್ರದರ್ಶನಗಳಲ್ಲಿ ಈಗಾಗಲೇ ತಮ್ಮ ಕಲಾರಚನೆಗಳನ್ನು ಪ್ರದರ್ಶಿಸಿ ಮಾನ್ಯತೆ ಪಡೆದಿದೆ. ಇವರು ರಚಿಸಿರುವ 40ಪ್ರಮುಖ ಚಿತ್ರಗಳನ್ನು ನುಡಿಸಿರಿ ಆರ್ಟ್‌ಗ್ಯಾಲರಿಯಲ್ಲಿನ  ಬಾರಿ ಪ್ರದರ್ಶನಕ್ಕೆ ಇಡಲಾಗಿದೆ.

ಚಿತ್ರಕಲಾ ಮಾಧ್ಯಮವು ಉತ್ತಮವಾದರು ಇಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ. ಯಾವುದೇ ಸರಕಾರಿ ಶಾಲೆಗಳಲ್ಲಿ ಇತ್ತೀಚಿನ ಹತ್ತು ವರ್ಷದಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗೆ ನೇಮಕ ವಾಗಿಲ್ಲ ಇದು ಕಲಾಕಾರರ ಬದುಕಿನ ಕುರಿತು ಸರಕಾರದ ನಿಲುವನ್ನು ತೋರಿಸುತ್ತದೆ ಎನ್ನುತ್ತಾರೆ ಗಿರೀಶ್.

ಪೂಜಾ ಪಕ್ಕಳ ಉಜಿರೆ ಎಸ್.ಡಿ.ಎಂ. ಕಾಲೇಜಿನ ದ್ವಿತೀಯ ಎಮ್.ಸಿ.ಜೆ. ವಿದ್ಯಾರ್ಥಿನಿ

Exit mobile version