ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಹಾಗೇ ಅದೇ ರೀತಿ ಪ್ರಸ್ತುತ ವ್ಯವಸ್ಥೆಯಲ್ಲಿ ಮಕ್ಕಳ ಜೀವನ ಕ್ರಮಗಳ ಬಗ್ಗೆ ಪೋಷಕರು ಆಗಾಗ ಕಾಳಜಿ ವಹಿಸುವ ಅಗತ್ಯತೆ ಇದೆ ಎಂದು ಕುಂದಾಪುರ ಯಡಾಡಿ ಮತ್ಯಾಡಿಯ ಸುಜ್ಞಾನ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ರಮೇಶ್ ಶೆಟ್ಟಿ ನುಡಿದರು.
ಅವರು ಸೋಮವಾರ ಕೋಟ ಗ್ರಾ.ಪಂ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ, ಪಂಚವರ್ಣ ಸಂಘಟನೆ ಕೋಟ, ಕೋಟ ಗ್ರಾಮಪಂಚಾಯತ್, ಡಿಜಿಟಲ್ ಗ್ರಂಥಾಲಯ ಕೋಟ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಆಶ್ರಯದಲ್ಲಿ ಬೇಸಿಗೆ ಶಿಬಿರ ಚಿತ್ತಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಮಕ್ಕಳಲ್ಲಿ ಮೊಬೈಲ್ ವ್ಯಾಮೂಹ ಅತಿಯಾಗಿ ವಿಜೃಂಭಿಸುತ್ತಿದೆ ಇದರ ಗೀಳಿನಿಂದ ಹೊರತರಬೇಕಾದ ಪೋಷಕರ ಪಾತ್ರ ಮಹತ್ವವಾದದ್ದು ಅಲ್ಲದೆ ಇತ್ತೀಚಿಗೆ ರಜಾ ದಿನಗಳಲ್ಲಿ ಶಿಬಿರಗಳ ಆಯೋಜನೆಯಿಂದ ಮೊಬೈಲ್ ವ್ಯಾಮೂಹವನ್ನು ತೊಡೆದುಹಾಕಬಹುದಾಗಿದೆ ಎಂದರಲ್ಲದೆ ಸಂಘಸಂಸ್ಥೆಗಳು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಕ್ಲಿಷ್ಟಕರ ಈ ದಿಸೆಯಲ್ಲಿ ಇಂಡಿಕಾ, ಪಂಚವರ್ಣ ಸಂಘಟನೆಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಚಿತ್ತಾರ ಚಿಣ್ಣರ ಚಿಲಿಪಿಲಿ ಶಿಬಿರವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ, ಕಾರ್ಯದರ್ಶಿ ಶೇಖರ್ ಮರವಂತೆ, ಸದಸ್ಯರಾದ ಚಂದ್ರ ಆಚಾರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಕೋಟ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಗ್ರಾ.ಪಂ ಡಿಜಿಟಲ್ ಗ್ರಂಥಾಲಯದ ಗ್ರಂಥಪಾಲಕಿ ಜ್ಯೋತಿ ಗಿಳಿಯಾರು, ಸಂಪನ್ಮೂಲ ವ್ಯಕ್ತಿಗಳಾದ ಜಯಲಕ್ಷ್ನೀ ಟೀಚರ್, ನಾಗರತ್ನ ಉಡುಪ ಕೋಟೇಶ್ವರ ಉಪಸ್ಥಿತರಿದ್ದರು.
ಇಂಡಿಕಾ ಕಲಾ ಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ ನಿರೂಪಿಸಿ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ, ರವೀಂದ್ರ ಕೋಟ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಸುಜಾತ ಗೋಪಾಲ್ ಸಹರಿಸಿದರು.