ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪಾರಂಪಳ್ಳಿ ನರಸಿಂಹ ಐತಾಳರು ಸಾಹಿತ್ಯ, ಸಂಗೀತ, ನೃತ್ಯ, ಸಂಘಟನೆ, ರಂಗಭೂಮಿ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಐತಾಳರ ಸಾಧನೆ ಅನನ್ಯ ಇಂದಿನ ಯುವ ಸಮೂಹಕ್ಕೆ ದಾರಿದೀಪ ಅಲ್ಲದೆ ಮಕ್ಕಳ ಸ್ನೇಹಿಯಾಗಿ ಅವರು ನೀಡಿರುವ ಚಟುವಟಿಕೆಗಳು ಅನನ್ಯ. ಸುಪ್ರಭಾತ ಐತಾಳರೆಂದೇ ಪ್ರಸಿದ್ಧರಾಗಿರುವ ಅವರ ಸಾಧನೆಗಳು ವಿಶ್ವಕ್ಕೆ ಪ್ರಚಲಿತಗೊಳ್ಳಲಿ ಎಂದು ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು.
ಅವರು ಇತ್ತೀಚಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಿತ್ರ ಮಂಡಳಿ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹುಟ್ಟೂರು ಸಾಧಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಮಿತ್ರ ಮಂಡಳಿಯ ಗಿಳಿಯಾರು ಶ್ರೀನಿವಾಸ ಅಡಿಗ ಅಭಿನಂದನಾ ಭಾಷಣ ಮಾಡಿದರು. ಪಾರಂಪಳ್ಳಿ ನರಸಿಂಹ ಐತಾಳರ ಬದುಕು ಬರಹ ಕೃತಿಗಳ ಕುರಿತು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕವಯಿತ್ರಿ ಸುಮನಾ ಹೇರ್ಳೆ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ, ಕೋಟ ವಿದ್ಯಾಸಂಸ್ಥೆಯ ಸಹಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ ಮಾತನಾಡಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮನೋಹರ ಪಿ., ಮಿತ್ರ ಮಂಡಳಿಯ ರಂಗಪ್ಪಯ್ಯ ಹೊಳ್ಳ, ಶ್ರೀನಿವಾಸ ಉಪಾಧ್ಯ, ಶ್ರೀದೇವಿ ಹಂದೆ, ಶ್ರೀಮತಿ ವಿಜಯಲಕ್ಷ್ಮೀ, ಮುಖ್ಯ ಶಿಕ್ಷಕ ನಾಗೇಶ ಮಯ್ಯ, ಪಾರಂಪಳ್ಳಿ ನರಸಿಂಹ ಐತಾಳರ ಅಭಿಮಾನಿಗಳು, ಹಿತೈಷಿಗಳು, ಬಂಧುಗಳು, ಕಸಾಪ ಉಡುಪಿ ಜಿಲ್ಲೆ, ಮಿತ್ರ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಿತ್ರ
ಮಂಡಳಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಪ್ರಾಸ್ತವಿಕ ಮಾತನಾಡಿ, ಸ್ವಾಗತಿಸಿದರು. ಶ್ರೀದೇವಿ ಹಂದೆ ಪ್ರಾರ್ಥಿಸಿದರು. ಬ್ರಹ್ಮಾವರ ತಾಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

