ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಾವೆಲ್ಲ ಒಂದೇ ಎನ್ನುವ ಭಾವನೆಯಿಂದ ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ವಿಪ್ಪತ್ತುಗಳ ಬಗ್ಗೆ ಪರಾಮರ್ಶೆ ಮಾಡಿ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾಧನೆ ಖಂಡಿತ ಸಾಧ್ಯ ಎಂದು ಬೆಂಗಳೂರಿನ ಸೋನಾ ಸಮೂಹ ಸಂಸ್ಥೆಗಳ ಸಿ.ಇ.ಓ ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ ಹೇಳಿದರು.
ಅವರು ಸಾಲಿಗ್ರಾಮ ಗುರುನರಸಿಂಹ ಸಭಾಭವನದ ಡಾ. ಕೋಟ ಶಿವರಾಮ ಕಾರಂತ ವೇದಿಕೆಯಲ್ಲಿ ಭಾನುವಾರ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಸಹಯೋಗದಲ್ಲಿ ನಡೆದ ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಕೇಂದ್ರೀಯ ಮಹಾಧಿವೇಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರಲ್ಲಿ ಸಂಘಟನಾ ಶಕ್ತಿ ಹೆಚ್ಚಿದೆ. ಸಂಪನ್ಮೂಲದ ಕೊರತೆ ಇಲ್ಲ. ಆದರೆ ಕಾಲು ಎಳೆಯುವವರ ಸಂಖ್ಯೆ ಹೆಚ್ಚಿದೆ. ಇದನ್ನೆಲ್ಲ ಮೀರಿ ನಾವು ಮುಂದೆ ಬರುವಂತೆ ಯುವ ಜನಾಂಗಕ್ಕೆ ತಿಳಿಸಿಕೊಡುವ ಅಗತ್ಯತೆ ಇದೆ ಎಂದ ಅವರು ನಮ್ಮ ಬ್ಯ್ಯಾಂಡ್ನಾವೇ ಸೃಷ್ಟಿಸಬೇಕು. ನಾವು ಕೋಟ ಬ್ರಾಹ್ಮಣರು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು.
ಇದರಿಂದ ಕೂಟ ಎನ್ನುವುದು ಬ್ರಾಂಡ್ ಆಗುತ್ತದೆ ಎಂದ ಅವರು, ಸಮಾಜದಲ್ಲಿರುವ ಬ್ರಾಂಡ್ಗಳೆಲ್ಲ ಹಳೆಯ ತಲೆಮಾರಿನವರು. ಹೊಸ ಪೀಳಿಗೆಯ ಯಾರೂ ಕೂಡ ಇಲ್ಲ. ಡಾ.ಕೆ. ಶಿವರಾಮ ಕಾರಂತ, ಬಿ.ವಿ ಕಾರಂತ ಮೊದಲಾದವರೆಲ್ಲರೂ ಹಳೆಯವರು. ಹೊಸ ಬ್ರಾಂಡ್ಗಳು ಸಮಾಜದಲ್ಲಿ ಸೃಷ್ಟಿಸಬೇಕಾಗಿದೆ ಎಂದು ಹೇಳಿದರು.
ಕೂಟ ಬಾಂಧವರ ಒಂದು ಸಮೀಕ್ಷೆ ಆಗಬೇಕಾಗಿದೆ. ಕಷ್ಟದಲ್ಲಿರುವ ಸಮಾಜದವರನ್ನು ಗುರುತಿಸಬೇಕು. ಅವರಿಗೆ ಪ್ರತಿ ಅಂಗಸಂಸ್ಥೆಯವರು ದತ್ತು ಪಡೆಯುವುದು ಮೊದಲಾದ ಉಪಕ್ರಮಗಳ ಮೂಲಕ ಸಮಾಜಕ್ಕೆ ಸಹಕಾರ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಬೆಂಗಳೂರಿನ ಸೋನಾ ಸಮೂಹ ಸಂಸ್ಥೆಗಳ ಸಿ.ಇ.ಓ ಕಮ್ಮಾಜೆ ಯಜ್ಞನಾರಾಯಣ ಹೇರ್ಳೆ ಇವರನ್ನು ಅಭಿನಂದಿಸಲಾಯಿತು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮಾತನಾಡಿ ಧನದ ಅಭಿಮಾನಿಯಾಗಬಾರದು. ಅಭಿಮಾನಧನರಾಗಬೇಕು. ಕೋಟದವರು ಕೆಲಸ ಮಾಡುವುದರಲ್ಲಿ ನಿಸ್ಸೀಮರು. ಆದರೆ ಅದನ್ನು ಪ್ರಚಾರ ಮಾಡುವುದರಲ್ಲಿ ಹಿಂದೆ ಬಿದ್ದಿದ್ದೇವೆ ಎಂದರು.
ಕೂಟ ಮಹಾಜಗತ್ತು ಸಾಲಿಗ್ರಾಮದ ಕೇಂದ್ರಾಧ್ಯಕ್ಷ ಎಚ್. ಸತೀಶ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರಾದ ವೇದಮೂರ್ತಿ ಹಂದಟ್ಟು ಎಚ್. ಸದಾಶಿವ ಐತಾಳ, ಐರೋಡಿ ಎ. ಜಗದೀಶ ಕಾರಂತ, ಮಣೂರಿನ ರಾಮಕೃಷ್ಣ ಮಯ್ಯ ಎಚ್., ಹಂದಟ್ಟಿನ ಸೂರ್ಯನಾರಾಯಣ ಹಂದೆ, ಸಾಲಿಗ್ರಾಮದ ಡಾ.ಪಿ.ಸಿ ಸುಧಾಕರ ಹಂದೆ, ವಿಜಯಲಕ್ಷ್ಮೀ ಆರ್. ಹೊಳ್ಳ, ಚಂದ್ರಶೇಖರ ಕಾರಂತ ಅವರನ್ನು ಸನ್ಮಾನಿಸಲಾಯಿತು.
ಸಾಲಿಗ್ರಾಮ ದೇಗುಲದ ಅಧ್ಯಕ್ಷ ಡಾ. ಕೆ.ಎಸ್.ಕಾರಂತ ಅವರನ್ನು ಗೌರವಿಸಲಾಯಿತು. ಕೂಟಮಹಾಜಗತ್ತಿನ ಹಲವರನ್ನು ಗುರುತಿಸಲಾಯಿತು.
ಬರಹಗಾರ ಹರಿನರಸಿಂಹ ಕಾರಂತ, ಕರ್ಣಾಟಕ ಬ್ಯಾಂಕ್ನ ಪ್ರಧಾನ ಪ್ರಬಂಧಕ ಚಂದ್ರಶೇಖರ ಮಯ್ಯ, ಉದ್ಯಮಿ ರಘುನಾಥ ಬಿ ಸೋಮಯಾಜಿ, ಬಿಲಿಯನ್ ಫೌಂಡೇಶನ್ಅಧ್ಯಕ್ಷ ಇ. ಗೋಪಾಲಕೃಷ್ಣ ಹೇರ್ಳೆ, ಕೂ.ಮ.ಜ ಉಪಾಧ್ಯಕ್ಷ್ಯಸಿಎ ಬಿ. ಚಂದ್ರಶೇಖರ ಐತಾಳ, ಪಿ. ಸದಾಶಿವ ಐತಾಳ, ಕೂ.ಮ.ಜ ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ್ಯ ಚಂದ್ರಶೇಖರ ಹೊಳ್ಳ ಇದ್ದರು.
ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಸ್ವಾಗತಿಸಿದರು. ಚಂದ್ರಶೇಖರ ಐತಾಳ, ಸದಾಶಿವ ಐತಾಳ, ಗೋಪಾಲಕೃಷ್ಣ ಮಯ್ಯ, ಎಚ್.ಕೆ.ಕುಮಾರ ಹೊಳ್ಳ, ಭಾರತಿ ಶ್ರೀಧರ ಹಂದೆ, ಶ್ರೀಪತಿ ಅಧಿಕಾರಿ ಮತ್ತು ಮಹಾಬಲ ಹೇರ್ಳೆ ಸನ್ಮಾನಿತರನ್ನು ಪರಿಚಯಿಸಿದರು. ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಪಾಂಡೇಶ್ವರ ಚಂದ್ರಶೇಖರ ಹೊಳ್ಳ ವಂದಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ, ಯಶೋಧ ಸಿ ಹೊಳ್ಳ ಮತ್ತು ಉಪಾಧ್ಯಕ್ಷ ಕೃಷ್ಣ ಪ್ರಸಾದ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು.

