ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅನಧಿಕೃತವಾಗಿ ಕಾಡು ಪ್ರಾಣಿಗಳನ್ನು ಇರಿಸಲಾಗಿದೆ ಎಂಬ ಆರೋಪದಡಿ ಸಾಲಿಗ್ರಾಮದ ಸುಧೀಂದ್ರ ಐತಾಳ್ ಅವರ ಮನೆಗೆ ಜಿಲ್ಲಾಧಿಕಾರಿ ನಿರ್ದೇಶನದಂತೆ ವಿವಿಧ ಇಲಾಖೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ ಸೋಮವಾರ ಸ್ಥಳ ಪರಿಶೀಲನೆ ನಡೆಸಲಾಯಿತು.
ಜಿಲ್ಲಾ ಪ್ರಾಣಿದಯಾ ಸಂಘ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಮ್ಮುಖದಲ್ಲಿ ಬ್ರಹ್ಮಾವರ ಪಶು ಪಾಲನಾ ಇಲಾಖಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸ್ಥಳ ಮಹಜರು ನಡೆಯಿತು. ಈ ವೇಳೆ ಸ್ಥಳದಲ್ಲಿದ್ದ ಸಾಕು ಪ್ರಾಣಿಗಳ ಬಗ್ಗೆ ಮಾಹಿತಿ ಪಡಿದುಕೊಂಡರು. ತಾಲೂಕು ಪಶುಪಾಲನಾ ಇಲಾಖೆ, ವನ್ಯಜೀವಿ ವಿಭಾಗ ಬ್ರಹ್ಮಾವರ, ಸಾಲಿಗ್ರಾಮ ಪಟ್ಟಣಪಂಚಾಯತ್, ಪ್ರಾಣಿದಯಾ ಸಂಘ ಉಡುಪಿ, ಕೋಟ ಆರಕ್ಷಕ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾಣಿ ಪ್ರೇಮಿ ಐತಾಳ್ ಆಕ್ರೋಶ:
ಪ್ರಾಣಿಪ್ರೇಮಿ ಸುಧೀಂದ್ರ ಐತಾಳ್ ಅವರು ಸ್ಥಳ ಮಹಜರು ನಡೆಸುತ್ತಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ನನ್ನ ಬಳಿ ಈವರೆಗೆ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಗಾಯಗೊಂಡ ಪ್ರಾಣಿಗಳನ್ನು ತಂದು ಬಿಡುತ್ತಿದ್ದು ಸಮಯೋಚಿತವಾಗಿ ಅದಕ್ಕೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದೇನೆ. ಆದರೆ ಈ ರೀತಿ ಪ್ರತಿ ಬಾರಿ ನಮ್ಮ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಪೇಟಾ ನನ್ನಲ್ಲಿರುವ 10ಲಕ್ಷ ಮೌಲ್ಯದ ಪ್ರಾಣಿ ಪಕ್ಷಿಗಳನ್ನು ಕೊಂಡ್ಯೊಯ್ದಿದೆ. ಇನ್ನು ಮುಂದೆ ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಅವರೇ ಚಿಕಿತ್ಸೆ ನೀಡಲಿ. ಬೀದಿನಾಯಿಗಳನ್ನು ಸಂಬಂಧಿಸಿದ ಪಟ್ಟಣ ಪಂಚಾಯತ್ ಹಾಗೂ ಪಶು ಆಸ್ಪತ್ರೆಯಲ್ಲೆ, ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬಿಟ್ಟುಬಿಡಿ ಎಂದು ಆಕ್ರೋಶ ಹೊರಹಾಕಿದರು.
ದಾಳಿಯನ್ನು ಖಂಡಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ:
ಸುಧೀಂದ್ರ ಐತಾಳ್ರವರನ್ನು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ. ಪ್ರಾಣಿ ಆರೈಕೆ ಮಾಡುವ ವ್ಯಕ್ತಿಗೆ ಈ ರೀತಿ ಹಿಂಸೆ ನೀಡುವುದು ಸರಿಯಲ್ಲ ಈ ಬಗ್ಗೆ ಕೋರ್ಟ ಮೂಲಕ ನ್ಯಾಯಕ್ಕೆ ಮೊರೆಹೋಗುವುದಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಎಚ್ಚರಿಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಅತಿಯಾಗಿದ್ದು ಇನ್ನು ಮುಂದೆ ನಿಮ್ಮ ಪಟ್ಟಣಪಂಚಾಯತ್ ಬಳಿ ಬಿಡುತ್ತೇವೆ ನೀವೆ ಆರೈಕೆ ಮಾಡಿ ಪ್ರಸ್ತುತ ಐತಾಳರ ಮೇಲೆ ಈ ರೀತಿ ಮಾನಸಿಕ ಹಿಂಸೆ ಸರಿಯಲ್ಲ ಎಂದರು.
ಅಧಿಕಾರಿಗಳು ಸುಧೀಂದ್ರ ಐತಾಳ್ ಇವರ ಮನೆಯಲ್ಲಿ ಸಾಕು ಪ್ರಾಣಿ ಹಾಗೂ ಕಾಡು ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದರುಕೊಂಡರು.