Kundapra.com ಕುಂದಾಪ್ರ ಡಾಟ್ ಕಾಂ

ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಶಕ್ತಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಿಂದ ಸಮಾಜ ಮತ್ತು ಮಹಿಳೆಯರಲ್ಲಿ ಹೆಚ್ಚಿನ ಶಕ್ತಿ ಬಂದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಸಾಲಿಗ್ರಾಮ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಂಡೇಶ್ವರ ವಲಯದ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಜನೆಯ ಹಲವಾರು ಜನಪರ ಯೋಜನೆಗಳು ಜನರ ಆರ್ಥಿಕ ಸ್ಥಿತಿ ಬಲ ಪಡಿಸಿರುವುದಲ್ಲದೇ, ಅವರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದೆ ಎಂದರು.

ಬ್ರಹ್ಮಾವರ ತಾಲ್ಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಅಧ್ಯಕ್ಷ  ಪ್ರಕಾಶ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಒಳಿತಿಗಾಗಿರುವ ಕಲ್ಪವೃಕ್ಷವಾಗಿದೆ. ಮಧ್ಯವರ್ಜನ, ಸ್ವಾಸ್ತ್ಯ ಸಂಕಲ್ಪ ಶಿಬಿರಗಳು ಉತ್ತಮ ಸಮಾಜವನ್ನು ನಿರ್ಮಿಸುತ್ತಿದೆ. ಯೋಜನೆ ನಾಯಕತ್ವ ಗುಣಗಳನ್ನು ಬೆಳೆಸಿದೆ ಎಂದರು.

ಪಾಂಡೇಶ್ವರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರಾಧಾ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಾರ್ಕೂರು ಕೂಡ್ಲಿ ದೇವಸ್ಥಾನದ ಶ್ರೀನಿವಾಸ ಉಡುಪ, ಸಾಸ್ತಾನ ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ರಮೇಶ ರಾವ್, ಉಡುಪಿ ತಾಲ್ಲೂಕು ಜನಜಾಗೃತಿ ವೇದಿಕೆ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಅಚ್ಚುತ ಪೂಜಾರಿ, ಅಧ್ಯಕ್ಷ ಪ್ರತಾಪ್ ಶೆಟ್ಟಿ, ಸಾಲಿಗ್ರಾಮ ಚೇಂಪಿಯ ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ರಮ್ಯಾ ರಮೇಶ ಆಚಾರ್ಯ, ಕೋಟ ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ  ಸುಬ್ರಾಯ ಆಚಾರ್ಯ, ಶೌರ್ಯ ಟೀಮ್‌ನ ಕಾಳಿಂಗ ಪೂಜಾರಿ, ಯೋಜನೆಯ ಬ್ರಹ್ಮಾವರ ತಾಲ್ಲೂಕಿನ ಮೇಲ್ವಿಚಾರಕ ರಮೇಶ ಪಿ.ಕೆ, ಗಿರಿಜ ಶೇಖರ ಪೂಜಾರಿ ಇದ್ದರು.

ಇದೇ ಸಂದರ್ಭ ಗುಂಡ್ಮಿ, ಐರೋಡಿ, ಕಾವಡಿ, ಕೋಡಿ, ಪಡುಬೈಲು, ಕಾರ್ಕಡ, ಸಾಸ್ತಾನ, ಯಡಬೆಟ್ಟು ಸಂಘಗಳ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ನಡೆಯಿತು. ಆಯ್ದ ಫಲಾನುಭವಿಗೆ ಸುಜ್ಞಾನ ನಿಧಿ ವಿತರಿಸಲಾಯಿತು. ಪಾಂಡೇಶ್ವರ ವಲಯದ ಶೌರ್ಯ ತಂಡದವರನ್ನು ಗುರುತಿಸಲಾಯಿತು. ಯೋಜನೆಯ ಕೃಷಿ ಅಧಿಕಾರಿ ರಾಘವೇಂದ್ರ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಜಯಲಕ್ಷ್ಮೀ ವರದಿ ವಾಚಿಸಿದರು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಶೋಭಾ ವಂದಿಸಿದರು.

Exit mobile version