Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಹೊಸ ಬಸ್ಸು ನಿಲ್ದಾಣದ ಶೌಚಾಗಾರ. ವಾಸನೆಯ ಆಗರ

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಒಂದಲ್ಲಾ ಒಂದು ಕಾರಣದಿಂದಾಗಿ ಕುಂದಾಪುರ ಸಮಸ್ಯೆಗಳ ಆಗರವಾಗುತ್ತಿದೆ. ಕೆಲಸ ಸಮಯದ ಹಿಂದೆ ಹೊಸ ಬಸ್ಸು ನಿಲ್ದಾಣದಲ್ಲಿರುವ ಶೌಚಾಲಯದ ಗುಂಡಿಯ ಹಾಸಿನ ಮೇಲೆ ಸರ್ಕಾರಿ ಬಸ್ಸೊಂದು ಚಲಿಸಿ ಟಾಂಕಿಯ ಮೇಲ್ಛಾವಣಿಯು ಒಡೆದು ಇಡೀ ಬಸ್ಸು ನಿಲ್ದಾಣವೇ ವಾಸನಾಮಯವಾಗಿ ಮಾರ್ಪಟ್ಟಿದೆ. ಸುಲಭ್ ಶೌಚಾಲಯದ ಯೋಜನೆಯಡಿ ಆರಂಭಿಸಿದರುವ ಈ ಶೌಚಾಲಯ ನಿರ್ವಹಣೆಗೆ ಎರಡು ಸಿಬ್ಭಂದಿಗಳಿದ್ದಾರೆ. ಅವರು ಈ ಸಮಸ್ಯೆಯನ್ನು ಕುಂದಾಪುರ ಪುರಸಭೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ತಾತ್ಕಾಲಿಕವಾಗಿ ಟಾಂಕಿ ಒಡೆದ ಕಡೆ ಸಿಮೆಂಟ್ ಸೀಟ್ ಗಳನ್ನು ಹಾಕಿ ಮುಚ್ಚಿದ್ದಾರೆ. ಆದರೆ ವಾಸನೆ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ (ಕುಂದಾಪ್ರ ಡಾಟ್ ಕಾಂ)

ಇನ್ನೂ ಶೌಚಾಲಯದಲ್ಲಿ ಆಗಾಗ ತಲೆದೋರುವ ನೀರಿನ ಆಭಾವದಿಂದ ಸಾರ್ವಜನಿಕರ ರೋಷಕ್ಕೆ ತುತ್ತಾಗುವ ಮೇಲ್ವಿಚಾರಕರು ಈ ಪರಿಸರದಿಂದಲೇ ನಾಪತ್ತೆಯಾಗಿ ಬಿಡುವುದರಿಂದ ಪ್ರಯಾಣಿಕರ ತೊಂದರೆಯಾಗುತ್ತಿದೆ. ಪರವೂರಿನ ಮಹಿಳಾ ಪ್ರಯಾಣಿರಂತೂ ಸಾಕಷ್ಟು ಮುಜುಗರಕ್ಕೀಡಾಗುವ ಪ್ರಸಂಗಗಳೂ ಇಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿ ಹೋಗಿದೆ. ನೀರಿನ ಸಮಸ್ಯೆ ಪರಿಹಾರಕಾಣುವಷ್ಟರಲ್ಲಿ ಶೌಚಾಲಯದ ಗುಂಡಿ ತುಂಬಿ ತೊಂದರೆ ಉದ್ಭವವಾಗುತ್ತದೆ. ಬೆಂಗಳೂರಿನಲ್ಲಿರುವ ಸಂಸ್ಥೆಯ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಅವರು ಬಂದು ಪರಿಹಾರ ಒದಗಿಸುವ ವರೆಗೆ ಕುಂದಾಪುರಕ್ಕೆ ಆಗಮಿಸುವ ಪ್ರಯಾಣಿಕರು ಪ್ರಯಾಸ ಪಡಬೇಕಾಗಿದೆ. ಆದರೆ ಸಾರ್ವಜನಿಕರಿಗೆ ಇಷ್ಟೆಲ್ಲಾ ತೊಂದರೆಯಾಗುತ್ತಿದ್ದರೂ ಪುರಸಭೆ ನಿರ್ಲಕ್ಷ್ಯ ಧೋರಣೆ ತಳೆದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Exit mobile version