Kundapra.com ಕುಂದಾಪ್ರ ಡಾಟ್ ಕಾಂ

ತಲ್ಲೂರು ಉಪ್ಪಿನಕುದ್ರು ಸರಕಾರಿ ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕೌಶಲ್ಯ ಪ್ರೇರಣ ಅಭಿಯಾನದ ಅಂಗವಾಗಿ ಕುಂದಾಪುರ ತಲ್ಲೂರಿನ ಉಪ್ಪಿನಕುದ್ರು ಸರಕಾರಿ ಪ್ರೌಢಶಾಲೆ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್‌ಕಟ್ಟೆಯ ಪ್ರಾಚಾರ್ಯ ಹರೀಶ್ ಮಾರ್ಗದರ್ಶನದಂತೆ ಹಾಗೂ ಕೋಟದ ಪಂಚವರ್ಣ ಸಂಘಟನೆಯ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಬಿದ್ಕಲ್ ಕಟ್ಟೆ ಸರಕಾರಿ ಐಟಿಐ ಮೆಕಾನಿಕ್ ಮೋಟಾರ್ ವೆಹಿಕಲ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಬಿ.ಟಿ.ನಾಯ್ಕ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಶೈಕ್ಷಣಿಕ ಪದವಿ ಸಾಕಾಗುವುದಿಲ್ಲ, ಉದ್ಯೋಗವಕಾಶ ಪಡೆಯಲು ಮತ್ತು ವೃತ್ತಿ ಜೀವನದಲ್ಲಿ ಪ್ರಾಯೋಗಿಕ, ತಾಂತ್ರಿಕ ಅಧ್ಯಯನ, ಅತ್ಯಗತ್ಯ. ಕೈಗಾರಿಕಾ ತರಬೇತಿ ಸಂಸ್ಥೆಯು ಇಂತಹ ತರಬೇತಿಯನ್ನು ನೀಡುತ್ತಿದ್ದು ಯುವಜನರಲ್ಲಿ ಆತ್ಮವಿಶ್ವಾಸ, ಉದ್ಯಮಶೀಲತೆ, ಜಾಗತಿಕ ಬೇಡಿಕೆಗೆ ತಕ್ಕಂತೆ ಕೌಶಲ್ಯಗಳನ್ನು  ಆಯ್ಕೆಮಾಡಿಕೊಂಡು ತರಬೇತಿ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.  

ಫಿಟ್ಟರ್ ವಿಭಾಗದ ಹಾಗೂ ಕೌಶಲ್ಯ ಪ್ರೇರಣಾ ಸಂಸ್ಥೆಯ ಕೋಟ ಅಜಿತ್ ಆಚಾರ್ 10ನೇ ತರಗತಿಯ ನಂತರದ ಕೌಶಲ್ಯ ಕೋರ್ಸುಗಳು ಹಾಗೂ  ವಿದ್ಯಾರ್ಥಿನಿಯರಿಗೆ ಸರಕಾರಿ ಉದ್ಯೋಗದಲ್ಲಿ 33% ಅವಕಾಶ ಮತ್ತು ತಾಂತ್ರಿಕ ಕೋರ್ಸ್ ಗಳ ಮುಖೇನ ಸರಕಾರಿ ಉದ್ಯೋಗವನ್ನು ಪಡೆಯುವ  ನೈಜ ಅವಕಾಶ ವನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

ಪ್ರೌಢ ಶಾಲೆಯ ಮುಖ್ಯ ಅಧ್ಯಾಪಕ ಸವಿತಾ.ಜಿ  ಸ್ವಾಗತಿಸಿದರು. ದೈಹಿಕ ಶಿಕ್ಷಣ  ಶಿಕ್ಷಕರಾದ ರಂಜಿತ್ ಕುಮಾರ್ ಶೆಟ್ಟಿ ಸಹಕರಿಸಿದರು. ಶಾಲೆಯ   ಇಂಗ್ಲಿಷ್ ಶಿಕ್ಷಕ ಉದಯ್ ಕುಮಾರ್ ಹಾಗೂ ಇತರ ಅಧ್ಯಾಪಕರು ಸಿಬ್ಬಂದಿಗಳು 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕೌಶಲ್ಯ ಪ್ರೇರಣಾ ಸೇವಾ ಸಂಸ್ಥೆ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Exit mobile version