Site icon Kundapra.com ಕುಂದಾಪ್ರ ಡಾಟ್ ಕಾಂ

ಯಕ್ಷಗಾನದಂಥಾ ಶ್ರೇಷ್ಠ ಪ್ರಾಚೀನ ರಂಗಕಲೆಗಳು ಇಂದಿನ ಮಕ್ಕಳಿಗೆ ಅಗತ್ಯವಾಗಿ ಸಿಗಬೇಕು: ಸಂಸದ ಕೋಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಡಾ. ಕಾರಂತ ಥೀಂ ಪಾರ್ಕ್ನಲ್ಲಿ ಯಕ್ಷಾಂತರಂಗ ವ್ಯವಸಾಯೀ ಯಕ್ಷ ತಂಡ ಕೋಟ ನೇತೃತ್ವದಲ್ಲಿ ಉಚಿತ ಯಕ್ಷಗಾನ ತರಬೇತಿ ಕೇಂದ್ರದ 2025-26ನೇ ಸಾಲಿನಲ್ಲಿ ತರಬೇತಿ ಪಡೆದ ವಿದ್ಯಾಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಜರಗಿತು.

ಕಾರ್ಯಕ್ರಮವನ್ನು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ, ಮಾತನಾಡಿ, ನಮ್ಮ ನಾಡಿನ ಹಿರಿಯರು ಕಂಡು ಹಿಡಿದು ಪೋಷಿಸಿಕೊಂಡು ಬಂದ ಯಕ್ಷಗಾನದಂಥಾ ಶ್ರೇಷ್ಟ ಕಲೆಯ ಪರಿಚಯ ಮಾಹಿತಿಗಳನ್ನು ಇಂದಿನ ಯುವ ಜನತೆ, ವಿದ್ಯಾರ್ಥಿಗಳಿಗೆ ಕಲಿಸುವ ಕಾರ್ಯ ಅಗತ್ಯವಾಗಿದೆ, ಇಂತಹ ಕಾರ್ಯಗಳನ್ನು ಯಕ್ಷಾಂತರಂಗ ಸಂಸ್ಥೆ ಅವರು ಉಚಿತ ತರಬೇತಿ ಕೇಂದ್ರದ ಮೂಲಕ ಈ ಕಾರಂತ ಥೀಂ ಪಾರ್ಕ್ನಲ್ಲಿ ಹನ್ನೊಂದು ವರ್ಷಗಳಿಂದ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದರಲ್ಲದೆ ಡಾ. ಕಾರಂತರ ಸಾಮಿಪ್ಯದ ಶಿಷ್ಯರಲ್ಲೋರ್ವ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳರ ನೇತೃತ್ವದಲ್ಲಿ ನಡೆಸಲ್ಪಡುತ್ತಿರುವ ಈ ಕಾರ್ಯ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭವನ್ನು ಹಾರೈಸಿದರು. 

ಈ ವೇಳೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025-26ರ ಸಾಲಿನ ದತ್ತಿ ಪ್ರಶಸ್ತಿ ಪುರಸ್ಮತರಾದ ಯಕ್ಷಗುರು ದೇವದಾಸ ರಾವ್ ಕೂಡ್ಲಿ ಅವರನ್ನು ಅಭಿನಂದಿಸಲಾಯಿತು.

ಸಭಾಧ್ಯಕ್ಷತೆಯನ್ನು ಯಕ್ಷಾಂತರಂಗ ಸಂಸ್ಥೆಯ ಅಧ್ಯಕ್ಷ ಗೀತಾನಂದ ಪೌಂಡೇಶನ್ನ ಪ್ರವರ್ತಕ ಆನಂದ. ಸಿ. ಕುಂದರ್ ವಹಿಸಿದ್ದರು.

ಅಭ್ಯಾಗತರಾಗಿ ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ ಕುಂದರ್, ಉದ್ಯಮಿ ಸದಾನಂದ ಜಿ., ಕೋಟತಟ್ಟು ಪಿಡಿಒ ರವೀಂದ್ರ ರಾವ್, ಕೋಟತಟ್ಟು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸತೀಶ ಕುಂದರ್, ಸಂಸ್ಥೆಯ ಕಾರ್ಯಾಧ್ಯಕ್ಷ ಸುಬ್ರಾಯ ಆಚಾರ್ಯ ಮಣೂರು ಉಸ್ಥಿತರಿದ್ದರು. 

ಸಂಸ್ಥೆಯ ಕಾರ್ಯದರ್ಶಿ ಗುರು ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು, ಉನ್ಯಾಸಕ ರಾಘವೇಂದ್ರ ತುಂಗ ಕೋಟ ನಿರೂಪಣೆಗೈದು ಧನ್ಯವಾದವನ್ನು ಅರ್ಪಿಸಿದರು. ನಂತರ ಯಕ್ಷಾಂತರಂಗದ ವಿದ್ಯಾರ್ಥಿಗಳಿಂದ ಅಭಿಮನ್ಯು ಪ್ರಸಂಗ ಪ್ರದರ್ಶನಗೊಂಡಿತು.

Exit mobile version