Kundapra.com ಕುಂದಾಪ್ರ ಡಾಟ್ ಕಾಂ

2019ನೇ ವರ್ಷದ ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ಈ ಕೆಳಕಂಡ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಿದೆ.

ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2019ರ ಜನವರಿ 1 ರಿಂದ 2019ರ ಡಿಸೆಂಬರ್ 31ರ ವರೆಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು. ಕೃತಿಯಲ್ಲಿ ಪ್ರಥಮ ಮುದ್ರಣ 2019 ಎಂದು ಮುದ್ರಿತವಾಗಿರಬೇಕು.

ಕಾವ್ಯ, ನವಕವಿಗಳ ಪ್ರಥಮ ಕವನ ಸಂಕಲನ, ಕಾವ್ಯ ಹಸ್ತ ಪ್ರತಿ-30 ವರ್ಷ ಒಳಗಿರುವ ಯುವಕವಿಗಳು ತಮ್ಮ ಅಪ್ರಕಟಿತ ಪ್ರಥಮ ಕವನ ಸಂಕಲನದ ಹಸ್ತ ಪ್ರತಿಯನ್ನು ಕಳಿಸಿಕೊಡಬೇಕು. ಕಾದಂಬರಿ, ಸಣ್ಣ ಕಥೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ/ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ವೈಚಾರಿಕ/ಅಂಕಣ ಬರಹ, ಅನುವಾದ-1 ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿ, ಅನುವಾದ-2 ಕನ್ನಡದಿಂದ ಅನ್ಯಭಾಷೆಗೆ ಅನುವಾದಗೊಂಡ ಕೃತಿ, ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ-2019ರಲ್ಲಿ ಪ್ರಕಟವಾದ ಹೊಸ ಬರಹಗಾರರ ಮೊದಲ ಸ್ವತಂತ್ರ ಕೃತಿಯೆಂದು ಖಾತರಿಪಡಿಸುವ ದೃಢೀಕರಣ ಪತ್ರ ಲಗತ್ತಿಸಬೇಕು, ಕನ್ನಡದಿಂದ ಇಂಗ್ಲೀಷ್‍ಗೆ ಅನುವಾದ, ದಾಶ ಸಾಹಿತ್ಯಕ್ಕೆ ಸಂಬಂಧಿಸಿದ ಸೃಜನ/ಸೃಜನೇತರ ಕೃತಿಗಳಾಂತಹ ಪುಸ್ತಕಗಳನ್ನು ಕಳುಹಿಸಬಹುದಾಗಿದೆ.

ಬಹುಮಾನಕ್ಕಾಗಿ ಪರಿಗಣಿಸಲ್ಪಡುವ ಕೃತಿಗಳು
1) ಮರುಮುದ್ರಣವಾದ ಪುಸ್ತಕಗಳಾಗಿರಬಾರದು.
2) ಪಿ.ಎಚ್.ಡಿ ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳಾಗಿರಬಾರದು
3) ಪಠ್ಯಪುಸ್ತಕಗಳಾಗಿರಬಾರದು.
4) ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕøತ ಸಾಹಿತಿಗಳ ಕೃತಿಗಳಾಗಿರಬಾರದು.
5) ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳಾಗಿರಬಾರದು.
6) ಒಂದು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಮತ್ತದೇ ಪ್ರಕಾರದಲ್ಲಿ ಮುಂದಿನ ಮೂರು ವರ್ಷದವರೆಗೆ ಪರಿಗಣಿಸುವುದಿಲ್ಲ.
7) ಒಬ್ಬ ಲೇಖಕರಿಗೆ ಮೂರು ಬಾರಿ ಬೇರೆ-ಬೇರೆ ಪ್ರಕಾರಗಳಲ್ಲಿ ಬಹುಮಾನ ಪಡೆಯುವ ಅವಕಾಶವಿದೆ.

ಪ್ರಕಟವಾದ ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ರಿಜಿಸ್ಟಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ ಎರಡನೇ ಮಹಡಿ, ಜೆ.ಸಿ.ರಸ್ತೆ ಬೆಂಗಳೂರು-560002 ಇವರಿಗೆ ರಿಜಿಸ್ಟರ್ಡ್ ಅಂಚೆ/ ಕೊರಿಯರ್ ಮೂಲಕ ಅಥವಾ ಸೆಪ್ಟೆಂಬರ್ 30ರೊಳಗೆ ತಲುಪಿಸಲು ಕೋರಿದೆ. ಕಳುಹಿಸಲ್ಪಡುವ ಕೃತಿಯ ಮೇಲೆ ತಿಳಿಸಿದ ಪ್ರಕಾರಗಳಲ್ಲಿ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಪುಸ್ತಕದ ಶಿರ್ಷಿಕೆ ಪುಟದಲ್ಲಿ ಬರೆದಿರಬೇಕು. ಎಂದು ರಿಜಿಸ್ಟಾರ್ ಕರಿಯಪ್ಪ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Exit mobile version