ಬೈಂದೂರು ಚಂದ್ರಶೇಖರ ನಾವಡ | ಕುಂದಾಪ್ರ ಡಾಟ್ ಕಾಂ ಲೇಖನ.
‘ನಿಸಾರ್ ಕವಿತಗಳ್’ ಎನ್ನುವ ಹೆಸರಲ್ಲಿ ನಿಸಾರ್ ಅವರ 75 ಕವನಗಳನ್ನು ಇತ್ತೀಚೆಗೆ ಮಲಯಾಳಮ್ ಭಾಷೆಗೆ ಭಾಷಾಂತರ ಮಾಡುವುದರ ಮೂಲಕ ಮಲಯಾಳಿಗರಿಗೆ ‘ನಿತ್ಯೋತ್ಸವ’ ಕವಿಯ ಉತ್ಕೃಷ್ಟ ಕವಿತೆಗಳ ರಸಸ್ವಾದನೆ ಮಾಡುವ ಸದವಕಾಶ ದೊರಕಿಸಿಕೊಟ್ಟ ಕುಂದಾಪುರದ ಲೇಖಕಿ ಡಾ. ಪಾರ್ವತಿ ಜಿ ಐತಾಳ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018 ನೇ ಸಾಲಿನ ‘ಸಾಹಿತ್ಯ ಶ್ರೀ’ ಸಮ್ಮಾನ ಸಂದಿದೆ. ಮಕ್ಕಳ ನಾಟಕ ರಚನೆ, ತೀರ್ಪುಗಾರ್ತಿ ಹಾಗೂ ವಿಮರ್ಶಾ ಬರವಣಿಗೆಗಳ ಮೂಲಕ ರಂಗಭೂಮಿಯಲ್ಲಿಯೂ ಸಕ್ರಿಯವಾಗಿರುವ ಡಾ. ಪಾರ್ವತಿಯವರಿಗೆ ಅನುವಾದ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ 2011 ರಲ್ಲಿ ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ (ಅನುವಾದ ಅಕಾಡೆಮಿ) ಶ್ರೇಷ್ಠ ಅನುವಾದಕಿ ಪ್ರಶಸ್ತಿ ಸಂದಿದೆ.
ಮಾತೃ ಭಾಷೆಯಾಗಿ ಮಾಧ್ಯಮಿಕ ಶಿಕ್ಷಣವನ್ನು ಕನ್ನಡದಲ್ಲೇ ಪಡೆದ ಡಾ. ಪಾರ್ವತಿಯವರು ಮಲೆಯಾಳಂ ಭಾಷೆಯ ಸಾಹಿತ್ಯಿಕ ಕೃತಿಗಳ ಅನುವಾದ ಮಾಡುವಷ್ಟರ ಮಟ್ಟಿಗೆ ಸ್ವಯಂಪ್ರೇರಿತರಾಗಿ ಕಲಿತು ಅಲ್ಲಿಂದ ಜ್ಞಾನ ಪೀಠ ವಿಜೇತರ ಉತ್ಕೃಷ್ಟ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಸಾಧನೆ ವಿಶೇಷವಾದದ್ದು. ಇತ್ತೀಚಿನ ವರ್ಷಗಳಲ್ಲಿ ಕನ್ನಡದಿಂದ ಮಲೆಯಾಳಕ್ಕೂ ‘ಕನ್ನಡದ ಪೆಣ್ ಕತೆಗಳ್’ ಮತ್ತು ‘ಗೋಪಿಕೋನ್ಮಾದಂ’ ಎಂಬ ಎರಡು ಕಾವ್ಯ ಕೃತಿ ಅನುವಾದಿಸಿ ‘ಶಿವರಾಮ ಕಾರಂತ ಬದುಕು ಬರಹ’ ಎಂಬ ಸ್ವತಂತ್ರ ಕೃತಿಯನ್ನೂ ಪ್ರಕಟಿಸಿದ್ದಾರೆ. ಇದೀಗ ನಾಲ್ಕನೇಯ ಮಲೆಯಾಳ ಕೃತಿಯಾಗಿ ಅವರ ಭಾಷಾಂತರದ ‘ನಿಸಾರ್ ಕವಿತಗಳ್’ ಕೇರಳದ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಕನ್ನಡ ಹಾಗೂ ಮಲಯಾಳದಲ್ಲಿ ಸ್ವತಂತ್ರ ಕೃತಿ ರಚಿಸಿದ ಮತ್ತು ಮಲಯಾಳದಿಂದ ಕೆ ಜಿ ಶಂಕರ ಪಿಳ್ಳೆಯವರ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಕೇರಳದ ತ್ರಿಶೂರಿನ ದ್ವಿಭಾಷಾ ಸಾಹಿತಿ ತೇರಳಿ ಎನ್ ಶೇಕರ್ ಅವರು ಡಾ. ಪಾರ್ವತಿ ಜಿ. ಐತಾಳರ ಭಾಷಾಂತರದ ಪರಿಪಕ್ವತೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಕಠಿಣ ಪರಿಶ್ರಮ ಬಯಸುವ ಅನುವಾದಕ್ಕೆ ವಿಶೇಷ ಭಾಷಾ ಪರಿಣತಿ ಮತ್ತು ಪಾಂಡಿತ್ಯವಿರಬೇಕಾಗುತ್ತದೆ. ಕಾವ್ಯ ಪ್ರಕಾರದ ಯಶಸ್ಸು ನಿಂತಿರುವುದೇ ಪದಗಳ ಬಳಕೆ,ಛಂದಸ್ಸು, ಅಲಂಕಾರ,ಪ್ರಾಸ, ಮಾತ್ರೆಗಳು, ಧ್ವನಿ ಪೂರ್ಣತೆ ಮೊದಲಾದವುಗಳ ಮೇಲೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಕಾವ್ಯದ ಈ ವ್ಯಾಕರಣ ಬದಲಾಗುತ್ತಾ ಹೋಗುತ್ತದೆ. ಆದ್ದರಿಂದ ಅನುವಾದಕರಿಗೆ ಇದೊಂದು ಸವಾಲಾಗಿ ಪರಿಣಮಿಸುತ್ತದೆ. ಪಾರ್ವತಿ ಐತಾಳ್ ಅವರು ಇವೆಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಅನ್ನುವುದನ್ನು ‘ನಿಸಾರ್ ಕವಿತಗಳ್’ ಓದಿದ ಮಲೆಯಾಳಿ ಓದುಗರು ಅಭಿಪ್ರಾಯಪಟ್ಟಿದ್ದಾರೆ ಎನ್ನುತ್ತಾರೆ ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಸಾಹಿತಿ ತೇರಳಿ ಎನ್ ಶೇಖರ್.
ಕರ್ನಾಟಕ ಲೇಖಕಿಯರ ಸಂಘದ ‘ಎಚ್ ವಿ ಸಾವಿತ್ರಮ್ಮ ದತ್ತಿ ನಿಧಿ ಪ್ರಶಸ್ತಿ-2011, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ 2005, ತುಳು ಮಹನೀಯರ್ ಪುರಸ್ಕಾರ 2007, ಕೇರಳದ ಕಾಳಿಯತ್ ದಾಮೋದರನ್ ಮೆಮೋರಿಯಲ್ ಅವಾರ್ಡ್ 2011, ಮೂರನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ‘ಕರ್ನಾಟಕ ಸಾಹಿತ್ಯ ರತ್ನ ಪುರಸ್ಕಾರಗಳಿಗೆ ಭಾಜನರಾದ ಡಾ. ಪಾರ್ವತಿಯವರು ‘ಒಡಲ ಬೆಂಕಿ’ ಕಾದಂಬರಿ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ನಾಟಕ ‘ತಂತ್ರಗಾರ್ತಿ’ ಸಹಿತ 26 ಸ್ವತಂತ್ರ ರಚನೆಗಳು, 38 ಅನುವಾದಿತ ಕೃತಿಗಳು, ಮತ್ತು 4 ಸಂಪಾದಿತ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಶ್ರೀ ಪ್ರಶಸ್ತಿ ಲಭಿಸಿದ್ದು ನನಗೆ ತುಂಬಾ ಸಂತಸ ತಂದಿದೆ. ಕಳೆದ ಸುಮಾರು ಮೂವತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನಿರಂತರವಾಗಿ ದುಡಿಯುತ್ತಲೇ ಬಂದಿದ್ದೇನೆ. ಮುಖ್ಯವಾಗಿ ಅನುವಾದ ಮತ್ತು ವಿಮರ್ಶಾ ಕ್ಷೇತ್ರಗಳಲ್ಲಿ. ಕನ್ನಡಕ್ಕೆ ಇತರ ಭಾಷೆಗಳಿಂದ ಉತ್ತಮ ಕೃತಿಗಳನ್ನು ಅನುವಾದಿಸುವುದು ಮಾತ್ರವಲ್ಲದೆ ಕನ್ನಡದ ಖ್ಯಾತನಾಮರ ಕೃತಿಗಳನ್ನು ಮಲೆಯಾಳಕ್ಕೂ ಇಂಗ್ಲಿಷಿಗೂ ಅನುವಾದಿಸಿದ್ದೇನೆ.ಅವರ ಕುರಿತು ವಿಮರ್ಶೆಯ ಕೃತಿಗಳನ್ನೂ ಆ ಭಾಷೆಗಳಲ್ಲಿ ಬರೆದು ಪ್ರಕಟಿಸಿದ್ದೇನೆ.ನನ್ನ ಈ ಕೆಲಸಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸಿದ್ದು ನನಗೆ ಅಪಾರ ಸಂತೋಷವನ್ನು ನೀಡಿದೆ. – ಡಾ. ಪಾರ್ವತಿ ಜಿ ಐತಾಳ್
Also read► ಲೇಖಕಿ ಡಾ. ಪಾರ್ವತಿ ಜಿ ಐತಾಳ್ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ – https://kundapraa.com/?p=31103 .
ಡಾ. ಪಾರ್ವತಿ ಐತಾಳ್ ಅನುವಾದ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ದೊಡ್ಡದು. ಅದಕ್ಕೆ ಸಂದ ಸಮ್ಮಾನ ನಮಗೆಲ್ಲರಿಗೂ ಅಭಿಮಾನದ, ಸಂತೋಷದ ಸಂಗತಿ. ಯಾರೇ ಆಗಲಿ ಮಾಡಿದ ಸಾಧನೆಗೆ ಮನ್ನಣೆ ನೀಡಿದಾಗ ಉಂಟಾಗುವ ಸಾರ್ಥಕ್ಯದ ಭಾವ ಸಾಧಕರನ್ನು ಇನ್ನಷ್ಟು ಸಾಧಿಸಲು ಪ್ರೇರೇಪಣೆ ನೀಡುತ್ತದೆ. ಪ್ರಿಯ ಡಾ. ಪಾರ್ವತಿಯವರು ಇನ್ನೂ ಸಕ್ರಿಯರಾಗಿ ಸಾಹಿತ್ಯ ಸೇವೆ ಮಾಡಲಿ ಎಂಬ ಸದಾಶಯಗಳೊಂದಿಗೆ,