Kundapra.com ಕುಂದಾಪ್ರ ಡಾಟ್ ಕಾಂ

ನೃತ್ಯ, ಭರತನಾಟ್ಯದ ಅಪ್ರತಿಮ ಬಾಲ ಪ್ರತಿಭೆ ಪ್ರೇರಣಾ ಪೈ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ತನ್ನ ಐದನೆಯ ವಯಸ್ಸಿನಲ್ಲಿಯೇ ನೃತ್ಯ ಅಭ್ಯಾಸದಲ್ಲಿ ತೊಡಗಿಕೊಂಡು ಪರಿಪಕ್ವ ಹೆಜ್ಜೆಗಳನಿಟ್ಟು ಇದೀಗ ಭರತನಾಟ್ಯದಲ್ಲಿಯೂ ಪರಿಪೂರ್ಣತೆಯನ್ನು ಪಡೆದು ರಂಗಪ್ರವೇಶಕ್ಕೆ ಸಿದ್ಧಳಾಗಿದ್ದಾಳೆ ಅರಬ್ ಸಂಯುಕ್ತ ರಾಷ್ಟ್ರದ ಶಾರ್ಜಾ ಡೆಲ್ಲಿ ಪ್ರೈವೇಟ್ ಸ್ಕೂಲ್ ಗ್ರೇಡ್ 9 ವಿದ್ಯಾರ್ಥಿನಿ ಪ್ರೇರಣಾ ಪೈ.

ಮಣಿಪಾಲದ ನಿವಾಸಿ ಶಾರದಾ ಮತ್ತು ಬಾಂಡ್ಯ ಸಂಜೀವ ಪೈ ಇವರ ಮೊಮ್ಮಗಳಾಗಿರುವ ಶಾರ್ಜಾ ನಿವಾಸಿ ರಾಗಿಣಿ ಪೈ ಮತ್ತು ಬಾಂಡ್ಯ ಹರೀಶ್ ಪೈ ದಂಪತಿಯ ಪುತ್ರಿಯಾಗಿರುವ ಪ್ರೇರಣಾ ಇವಳು ತನ್ನ ಐದನೆಯ ವಯಸ್ಸಿನಿಂದಲೇ ನೃತ್ಯ ಅಭ್ಯಾಸದಿಂದ ಪರಿಪಕ್ವ ಹೆಜ್ಜೆಗಳನಿಟ್ಟು ಇದೀಗ ಭರತನಾಟ್ಯದಲ್ಲಿ ಪರಿಪೂರ್ಣತೆಯನ್ನು ಪಡೆದಿದ್ದಾಳೆ.

ಪ್ರೇರಣಾ ಪೈ ತನ್ನ ಐದನೇಯ ವಯಸ್ಸಿನಲ್ಲಿ 2007ರಲ್ಲಿ ಶಾರ್ಜಾ ಕೈರಳಿ ಕಲಾ ಕೇಂದ್ರಮ್‌ನಲ್ಲಿ ಗುರು ಮುರಳಿ ಅವರಿಂದ ಪ್ರಾರಂಭವಾದ ಪ್ರಥಮ ಹಂತದ ತರಬೇತಿಯನ್ನು ಪಡೆದು ನಂತರ 2013ರಿಂದ ಶಾರ್ಜಾದ ಪ್ರಸಿದ್ಧ ಕಲಾ ಸಂಸ್ಥೆ ಕ್ಲಾಸಿಕಲ್ ರಿದಂಸ್ ಇದರ ಸ್ಥಾಪಕ ನಿರ್ದೇಶಕಿ ವಿದೂಷಿ ರೋಹಿಣಿ ಅನಂತ ಅವರ ಶಿಷ್ಯೆಯಾಗಿ ಭರತನಾಟ್ಯದಲ್ಲಿ ಐದು ಹಂತಗಳಲ್ಲಿ ಪರೀಕ್ಷೆ ಮುಗಿಸಿ ಸೀನಿಯರ್ ಡಿಪ್ಲೋಮಾ ಭಾರತದ ಪ್ರಸಿದ್ಧ ಪುರಾತನ ಕಲಾ ಕೇಂದ್ರ ಚಂಡೀಗಢದಲ್ಲಿ ಜೇಷ್ಠತಾ ಶ್ರೇಣಿಯಲ್ಲಿ ಪಡೆದು ಜೊತೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದೂಷಿ ರಂಗನಾಯಕಿ ರಾಜನ್ ಅವರಿಂದ ಅಭ್ಯಾಸ ಮಾಡುತ್ತಿದ್ದಾಳೆ.

ಅರಬ್ ಸಂಯುಕ್ತ ಸಂಸ್ಥಾನದ ಹಲವು ಪ್ರತಿಷ್ಠಿತ ಸಮಾರಂಭಗಳ ವೇದಿಕೆ ಹಾಗೂ ಭಾರತದಲ್ಲಿ ಹಲವಾರು ನೃತ್ಯ ಪ್ರದರ್ಶನ ನೀಡಿ ಜನ ಮೆಚ್ಚುಗೆಯನ್ನು ಪಡೆದಿರುವ ಪ್ರೇರಣಾ ಪೈ ಅಪ್ಪಟ ಬಾಲ ಪ್ರತಿಭೆ. ತನ್ನ ಕಲಾ ತಪಸ್ಸಿನಿಂದ ಕಲಾ ಪ್ರೌಢಿಮೆಯನ್ನು ಪಡೆದು ಈ ಹಂತದವರೆಗೆ ತಲುಪಿರುವುದು ಹೆಮ್ಮೆಯ ವಿಷಯ.

ಪಾಠದೊಂದಿಗೆ ಪಠ್ಯೇತರ ಚಟುವಟಿಕೆ, ಸಾಮಾಜಿಕ ಚಟುವಟಿಕೆ, ಸಂಶೋಧನಾತ್ಮಕ, ಪ್ರಯೋಗಾತ್ಮಕ, ಪ್ರಬಂಧ, ಹಸ್ತ ಕೌಶಲ್ಯದಲ್ಲಿ ಸದಾ ಹಸನ್ಮುಖಿಯಾಗಿರುವ ಪ್ರೇರಣಾ ಪೈ ಅವರು ಯು.ಎ.ಇ. ಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಪ್ರಶಸ್ತಿ ’ಶೇಖ್ ಹಂದಾನ್ ಪ್ರಶಸ್ತಿ’ 2013 ಮತ್ತು 2015ರಲ್ಲಿ ಎರಡು ಬಾರಿ ಪಡೆದು 2015ರಲ್ಲಿ ಶಾರ್ಜಾ ಅವಾರ್ಡ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದು ಹೆತ್ತವರ, ಶಾಲೆಯ ಹಾಗೂ ಅನಿವಾಸಿ ಕನ್ನಡಿಗರ ಗೌರವವನ್ನು ಹೆಚ್ಚಿಸಿದ್ದಾಳೆ.

ಗುರು ವಿದೂಷಿ ರೋಹಿಣಿ ಅನಂತ ಅವರ ಶಿಷ್ಯೆಯಾಗಿರುವ ಪ್ರೇರಣಾ ಪೈ ತನ್ನ ಅವಿರತ ಅಭ್ಯಾಸದ ಮೂಲಕ ಪರಿಣಿತಿಯನ್ನು ಪಡೆದು ಕಲಾದೇವಿಯ ಅನುಗ್ರಹ ಪಡೆದು ಭರತನಾಟ್ಯ ರಂಗಪ್ರವೇಶಕ್ಕೆ ಸಿದ್ಧವಾಗುತ್ತಿದ್ದಾಳೆ.

ಜುಲೈ 23ಕ್ಕೆ ರಂಗಪ್ರವೇಶ
ಭರತ ನಾಟ್ಯದಲ್ಲಿ ಕಲಾ ನಿಪುಣತೆಯನ್ನು ಪಡೆದು ಜುಲೈ 23ರಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಭರತನಾಟ್ಯದಲ್ಲಿ ರಂಗ ಪ್ರವೇಶ ಮಾಡಲಿದ್ದಾರೆ. ರಂಗ ಪ್ರವೇಶ ಸಮಾರಂಭಕ್ಕೆ ಬೆಂಗಳೂರಿನ ನಟರಾಜ ನೃತ್ಯ ಶಾಲೆಯ ಸ್ಥಾಪಕ ನಿರ್ದೇಶಕ ಜಿ.ಎಸ್.ರಾಜಲಕ್ಷ್ಮೀ, ಸುರತ್ಕಲ್ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸ್ಥಾಪಕ ನಿರ್ದೇಶಕ ಚಂದ್ರಶೇಖರ ನಾವಡ, ಪ್ರಸಿದ್ಧ ಸಂಗೀತ ನೃತ್ಯ ವಿಮರ್ಶಕ ಡಾ.ಎಂ. ಸೂರ್ಯಪ್ರಸಾದ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

Exit mobile version