Kundapra.com ಕುಂದಾಪ್ರ ಡಾಟ್ ಕಾಂ

ಗಣಪತಿ ಮೂರ್ತಿ ರಚಿಸುವ ಬೈಂದೂರಿನ ‘ಕಲಾ ಕುಟುಂಬ’ಕ್ಕೆ ಶತಮಾನದ ಇತಿಹಾಸ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಅಜ್ಜನಿಂದ ಬಳುವಳಿಯಾಗಿ ಬಂದ ಕಲೆ ಮೊಮ್ಮಕ್ಕಳ ಕೈಯಲ್ಲಿ ಇಂದಿಗೂ ಮೂರ್ತರೂಪ ಪಡೆಯುತ್ತಿದೆ. ನೂರಾರು ವರ್ಷಗಳಿಂದಲೂ ನಡೆದು ಬಂದ ಗಣಪತಿಯ ವಿಗ್ರಹ ತಯಾರಿಸುವ ಕಾಯಕ ಅಷ್ಟೆ ನಿಷ್ಠೆಯಿಂದ ಮುಂದುವರಿದಿದೆ. ದೇವರ ಕೈಂಕರ್ಯವೆಂದು ಪ್ರತಿವರ್ಷವೂ ಬೇಡಿಕೆಗನುಸಾರವಾಗಿ ಗಣಪತಿ ವಿಗ್ರಹವನ್ನು ರಚಿಸುತ್ತಾ ಸಂತೃಪ್ತಿಯನ್ನು ಕಾಣಿತ್ತಿದೆ ಬೈಂದೂರು ಬಂಕೇಶ್ವರ ಶಿಲ್ಪಿ ದಿ. ವೆಂಕಟರಮಣ ಆಚಾರರ ಕುಟುಂಬ.

ಶತಮಾನದ ಹಿನ್ನೆಲೆ: ಬೈಂದೂರಿನ ಬಂಕೇಶ್ವರದಲ್ಲಿರುವ ಶಿಲ್ಪಿ ದಿ. ವೆಂಕಟರಮಣ ಆಚಾರ್ ಅವರ ಕುಟುಂಬಕ್ಕೆ ಶತಮಾನದಿಂದ ಗಣಪತಿ ವಿಗ್ರಹವನ್ನು ತಯಾರಿಸಿದ ಹಿನ್ನೆಲೆಯಿದೆ. ವೆಂಕಟರಮಣ ಅವರ ತಂದೆ ಬಂಕೇಶ್ವರದ ದಿ. ನಾಗಪ್ಪ ಆಚಾರ್ ಅವರಿಂದ ಆರಂಭಗೊಂಡ ಸೇವಾ ಕೈಂಕರ್ಯವನ್ನು ವೆಂಕಟರಮಣ ಆಚಾರ್ ಅವರು ಮುಂದುವರಿಸಿಕೊಂಡು ಬಂದಿದ್ದು, ಇಂದು ಅವರ ಮಕ್ಕಳಾದ ನಾಗರಾಜ, ಗಂಗಾಧರ ಮತ್ತು ಗಣೇಶ ಅವರಿಂದ ಮೂಲಕ ಜೀವಸೆಲೆ ಪಡೆದಿದೆ. ಇವರ ಕುಟುಂಬ ನೂರು ವರ್ಷಕ್ಕೂ ಹೆಚ್ಚುಕಾಲ ಮೂರ್ತಿ ರಚನೆಯಲ್ಲಿ ತೊಡಗಿಸಿಕೊಂಡದ್ದರೇ, ವೆಂಕಟರಮಣ ಆಚಾರ್ಯರು 65 ವರ್ಷಗಳಿಂದ ಮೂರ್ತಿ ರಚನೆಯಲ್ಲಿ ತೊಡಗಿಕೊಂಡಿದ್ದು, ಅವರ ನಿಧನದ ಬಳಿಕ ಮಕ್ಕಳು ಈ ಕಾಯಕದಲ್ಲಿ ತೊಡಗಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

ಕಲಾ ಕುಟುಂಬ: ದಿ. ವೆಂಕಟರಮಣ ಆಚಾರ್ ತಂದೆ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಂದ ಶಿಲ್ಪಕಲೆಯ ದೀಕ್ಷೆ ಪಡೆದ ದಿ. ವೆಂಕಟರಮಣ ಆಚಾರರು ತನ್ನ 16ನೇ ವಯಸ್ಸಿನಲ್ಲಿ ಮಣ್ಣು ಮತ್ತು ಕೃಷ್ಣ ಶಿಲ್ಪದಿಂದ ಮೂರ್ತಿ ರಚನೆಯಲ್ಲಿ ತೊಡಗಿಕೊಂಡರು. ಪ್ರತಿವರ್ಷ ಗಣೇಶೋತ್ಸವಕ್ಕೆ ಗಣೇಶ ವಿಗ್ರಹ, ಶಾರದೋತ್ಸವಕ್ಕೆ ಶಾರದಾ ವಿಗ್ರಹ ಹಾಗೂ ದೇವಾಲಗಳಿಗೆ ಮೂರ್ತಿಯನ್ನು ಕಶ್ಯಪ ಶಿಲ್ಪಶಾಸ್ತ್ರ ಪ್ರಕಾರದಲ್ಲಿ ರಚಿಸಿ ಪರಂಪರಾಗತವಾಗಿ ಬಂದಿರುವ ಕಲೆಯನ್ನು ಉಳಿಸಿ ಬೆಳೆಸಿದವರು. ಈಗ ಗಣಪತಿ ಹಾಗೂ ಶಾರದೆಯ ಮೂರ್ತಿಯನ್ನು ಅವರ ಮಕ್ಕಳೇ ತಯಾರಿಸುತ್ತಿದ್ದಾರೆ. ಕೊನೆಯ ಹಂತದಲ್ಲಿ ಅವರ ಮೊಮ್ಮಕ್ಕಳೂ ಆಸಕ್ತಿಯಿಂದ ಬಣ್ಣ ಬಳಿಯುವಲ್ಲಿ ತೊಡಗಿಕೊಳ್ಳುತ್ತಾರೆ. ಒಟ್ಟಿನಲ್ಲಿ ಇಡಿ ಕುಟುಂಬವೇ ಕಲಾಪ್ರೀತಿಯನ್ನು ತೋರುತ್ತದೆ.  ಕುಂದಾಪ್ರ ಡಾಟ್ ಕಾಂ ವರದಿ.

ಸಾಂಪ್ರದಾಯಿಕ ಗಣಪತಿ, ಶಾರದೆ ಮೂರ್ತಿ: ಆರಂಭದ ದಿನಗಳಲ್ಲಿ ಹತ್ತು ಗಣೇಶನ ವಿಗ್ರಹಗಳಿಗಷ್ಟೇ ಬೇಡಿಕೆ ಇದ್ದರೇ, ಈಗ 70 ರಿಂದ 75 ಮೂರ್ತಿಗಳಿಗೆ ಬೇಡಿಕೆ ಇದೆ. ಬೈಂದೂರಿನಲ್ಲಿ ಸಾಂಪ್ರದಾಯಿಕವಾಗಿ ಗಣಪತಿ ಮತ್ತು ಶಾರದೆಯ ವಿಗ್ರಹಗಳನ್ನು ರಚಿಸುವವರು ಇವರು ಮಾತ್ರವೇ ಇದ್ದು ಬೈಂದೂರು, ಉಪ್ಪುಂದ, ಶಿರೂರು, ನಾಗೂರು ಆಸುಪಾಸಿನ ಪರಿಸರದಿಂದ ಹಿಡಿದು ಕೊಲ್ಲೂರು ನಿಟ್ಟೂರಿನ ತನಕ ಬೆಡಿಕೆ ಇದೆ. ಗಣಪತಿ ವಿಗ್ರಹ ತಯಾರಿಕೆಗೆ ಈ ಭಾರಿ ಸುಮಾರು ಒಂದೂವರೆ ತಿಂಗಳುಗಳ ಕಾಲ ತೊಡಗಿಸಿಕೊಂಡಿದ್ದ ಸಹೋದರರು, ವಿವಿಧ ವಿನ್ಯಾಸದಲ್ಲಿ ಮೂರ್ತಿ ರಚಿಸಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ.

ಕಲಾವಿದ ಶ್ರಮಕ್ಕೆ ಸಾಲದ ಸಂಭಾವನೆ: ಲಕ್ಷಾಂತರ ರೂಪಾಯಿ ಖರ್ಚುಮಾಡಿ ಉತ್ಸವ ನಡೆಸುವವರು ಮೂರ್ತಿ ರಚಿಸಿದವರಿಗೆ ಸರಿಯಾದ ಸಂಭಾವನೆ ಕೊಡಲು ಹಿಂದುಮುಂದು ನೋಡುತ್ತಾರೆಂಬುದು ಕಲಾವಿದರ ಅಳಲು. ಈಗ ಮಣ್ಣಿನ ಮೂರ್ತಿಗಳಿಗೆ ದುಬಾರಿ ಜಲವರ್ಣಗಳನ್ನು ಬಳಸಬೇಕಾದ್ದರಿಂದ ಖರ್ಚು ಹೆಚ್ಚು. ಅಜ್ಜನಿಂದ ಸೇವೆಯೆಂದು ಬಳುವಳಿಯಾಗಿ ಬಂದ ಕೈಂಕರ್ಯಕ್ಕೆ ಈಗ ಅಪಾರ ಖರ್ಚು ತಗಲುತ್ತಿರುವುದರಿಂದ ಅನಿವಾರ್ಯವಾಗಿ ಬೆಲೆ ನಿಗದಿಗೊಳಸಬೇಕಿದೆ. ಹಾಗಾಗಿ ಈ ಭಾರಿ ಒಂದು ಅಡಿಯ ಮೂರ್ತಿಗೆ 1500-2000ದಷ್ಟು ಹಣ ನಿಗದಿಗೊಳಿಸಿದ್ದೇವೆ ಎನ್ನುತ್ತಾರೆ ಕಲಾವಿದ ಸಹೋದರರಲ್ಲಿ ಓರ್ವರಾದ ಗಣೇಶ್ ಆಚಾರ್/ ಕುಂದಾಪ್ರ ಡಾಟ್ ಕಾಂ ವರದಿ/

ಅನುಮತಿಯಿಲ್ಲದೇ ಈ ಲೇಖನವನ್ನು ಕಾಪಿ ಮಾಡುವುದನ್ನು ನಿಷೇಧಿಸಲಾಗಿದೆ. 

Exit mobile version