Kundapra.com ಕುಂದಾಪ್ರ ಡಾಟ್ ಕಾಂ

ಹುತಾತ್ಮ ಯೋಧ ಅನೂಪ್ ಪೂಜಾರಿ ಅವರಿಗೆ ಹುಟ್ಟೂರು ಬೀಜಾಡಿಯಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.25: ಸೇನಾ ಟ್ರಕ್ ಅಪಘಾತದಲ್ಲಿ ಮರಣ ಹೊಂದಿದ ಯೋಧ, ಹವಾಲ್ದಾರ್ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರವನ್ನು ಗುರುವಾರ ಜಮ್ಮುವಿನಿಂದ ಸೇನಾ ವಿಮಾನ ಮೂಲಕ ರಾತ್ರಿ ಹೊತ್ತಿಗೆ ಮಂಗಳೂರು ತಲುಪಿತ್ತು. ಅಲ್ಲಿ ಗೌರವ ಸಲ್ಲಿಸಿ ಅಂಬ್ಯುಲೆನ್ಸ್‌ನಲ್ಲಿ ಉಡುಪಿ ಮೂಲಕ ಬೀಜಾಡಿಯ ನಿವಾಸಕ್ಕೆ ಕರೆತಂದು ಸಕಲ ಸರಕಾರಿ ಗೌರವಗಳನ್ನು ಸಲ್ಲಿಸಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಬೆಳಿಗ್ಗೆ 10 ಗಂಟೆಗೆ ತೆಕ್ಕಟ್ಟೆ ತಲುಪಿದ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕೋಟೇಶ್ವರ ಮೂಲಕವಾಗಿ ಬೀಜಾಡಿಯ ಅನೂಪ್‌ ಪೂಜಾರಿ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ದಾರಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ಮೃತ ಯೋಧನಿಗೆ, ಪುಪ್ಪನಮನಗೈದು, ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.

ಮೆರವಣಿಗೆಯ ಮೂಲಕ ಪಾರ್ಥಿವ ಶರೀರವನ್ನು ಬೀಜಾಡಿಯ ಅನೂಪ್‌ ಅವರ ನಿವಾಸಕ್ಕೆ ಕರೆತಂದು ಅಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಬಳಿಕ ಸರಕಾರಿ ಗೌರವ ಸಲ್ಲಿಸಲಾಯಿತು. ಈ ವೇಳೆ ಎಡಿಸಿ ಹಾಗೂ ಎಎಸ್ಪಿ ಅವರು ಉಪಸ್ಥಿತರಿದ್ದರು. ಬಳಿಕ ಬಿಜಾಡಿ ಪಡು ಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ಮಡಿದ ಯೋಧನಿಗೆ ಸರಕಾರಿ ಗೌರವ ಸಲ್ಲಿಸಲಾಯಿತು. ಸಮುದ್ರ ಕಿನಾರೆಯ ಸರಕಾರಿ ಜಾಗದಲ್ಲಿ ಸೇನಾ ಗೌರವ ಸಲ್ಲಿಸಲಾಯಿತು. ಸೇನಾ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಅನೂಪ್‌ ಅವರ ಪತ್ನಿ ಮಂಜುಶ್ರೀ ಅವರಿಗೆ ಹಸ್ತಾಂತರಿಸಿದರು. ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು. ಸಹೋದರರಾದ ಶಿವರಾಮ ಹಾಗೂ ತಿಮ್ಮಪ್ಪ ಅಂತ್ಯಸಂಸ್ಕಾರದ ವಿಧಿಗಳನ್ನು ಪೂರೈಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಂಗಳೂರಿನಲ್ಲಿ ರಾತ್ರಿ ಪಾರ್ಥಿವ ಶರೀರ ಸ್ವೀಕರಿಸುವ ವೇಳೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಿಜೇಶ್‌ ಚೌಟ ಅವರು ಸ್ವತಃ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ವಿ. ಸುನಿಲ್‌ ಕುಮಾರ್‌, ಗುರುರಾಜ ಗಂಟಿಹೊಳೆ, ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರಘುಪತಿ ಭಟ್‌, ಸಹಾಯಕ ಕಮಿಷನರ್‌ ಮಹೇಶ್ಚಂದ್ರ, ತಹಶಿಲ್ದಾರ್‌ ಶೋಭಾಲಕ್ಷ್ಮೀ, ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ಬಿಲ್ಲವ ಸಮಾಜದ ಪ್ರಮುಖರು, ಅನೂಪ್‌ ಅವರು ಸ್ನೇಹಿತರು ಕೊನೆಯ ತನಕವೂ ಜೊತೆಗಿದ್ದು ಅಂತಿಮ ನಮನ ಸಲ್ಲಿಸಿದರು. ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬೀಜಾಡಿ ಅಶೋಕ್‌ ಪೂಜಾರಿ ಅಂತಿಮ ಕ್ರಿಯೆಗಳ ಮುಂದಾಳತ್ವ ವಹಿಸಿದ್ದರು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ಕಳೆದ 13 ವರ್ಷಗಳಿಂದ ಸೇನೆಯಲ್ಲಿರುವ ಅನೂಪ್ 33ನೇ ವಯಸ್ಸಿಗೆ ಹವಾಲ್ದಾರ್ ಆಗಿ ಭಡ್ತಿ ಹೊಂದಿದ ವೀರ ಯೋಧರಾಗಿದ್ದಾರೆ. ಬಡತನದ ನಡುವೆ ಭಾರತಾಂಬೆಯ ಸೇವೆ ಮಾಡಬೇಕೆಂದು ಹಠದಿಂದ ಸೈನ್ಯ ಸೇರಿದ್ದ ಅನೂಪ್ 14 ವರ್ಷ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಅನೂಪ್‌ಗೆ ವಿವಾಹವಾಗಿತ್ತು. ಎರಡು ವರ್ಷದ ಪುಟ್ಟ ಮಗುವಿದ್ದು, ಇಬ್ಬರು ಸಹೋದರಿಯರು, ಅಪಾರ ಬಂಧು ಮಿತ್ರರು, ಗ್ರಾಮಸ್ಥರು, ಗೆಳೆಯರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಇದನ್ನೂ ಓದಿ
► ಕಾಶ್ಮೀರದಲ್ಲಿ ಸೇನಾ ಟ್ರಕ್ ಅಪಘಾತ: ಬೀಜಾಡಿಯ ಯೋಧ ಅನುಪ್ ಪೂಜಾರಿ ಹುತಾತ್ಮ – https://kundapraa.com/?p=80654 .
► ಹುಟ್ಟೂರು ಬೀಜಾಡಿ ತಲುಪಿದ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಪಾರ್ಥೀವ ಶರೀರ – https://kundapraa.com/?p=80701

ಮಂಗಳವಾರ ಸಂಜೆ ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಗ್ರಾಮದ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ರಸ್ತೆಯಿಂದ 350 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಸೇನಾ ಟ್ರಕ್ ಅಪಘಾತದಲ್ಲಿ ಐವರು ಯೋಧರು‌ ಮೃತಪಟ್ಟಿದ್ದು, ಈ ಪೈಕಿ ತಾಲೂಕಿನ ಬೀಜಾಡಿಯ ಅನೂಪ್ ಪೂಜಾರಿ (33)‌ ಅವರು ಕೂಡ ಹುತಾತ್ಮರಾಗಿದ್ದರು. ಈ ದುರ್ಘಟನೆ ಸಂಭವಿಸಿದೆ ಐವರು ಯೋಧರ ಪೈಕಿ ಮೂವರು ಕರ್ನಾಟಕದವರಾಗಿದ್ದರು.

Exit mobile version